Hosadurga: ಪಟ್ಟಣದ ಮಧ್ಯದಲ್ಲಿರುವ ವಿಜಯ ಬ್ಯಾಂಕ್ ಮುಂಭಾಗದಲ್ಲಿಯೇ ಕಾರಿನಲ್ಲಿದ್ದ 10 ಲಕ್ಷ ರೂ. ನಗದು ಹಣವನ್ನು ಕಳ್ಳರು ಹಗಲಿನ ಸಮಯದಲ್ಲಿ ಕದ್ದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಜನರು ಬೆಚ್ಚಿ ಬೀಳುವಂತೆ ಮಾಡಿದೆ.
ಹೊಸದುರ್ಗ( Hosadurga) ತಾಲೂಕಿನ ಲಕ್ಕಿಹಳ್ಳಿ ಗ್ರಾಮದ ನಿವಾಸಿ ಮುದ್ದಪ್ಪ ಎಂಬುವವರು ದೊಡ್ಡಕಿಟ್ಟದಹಳ್ಳಿ ಗ್ರಾಮದ ಸಂಬಂಧಿಕರಾದ ಮಾವ ರುದ್ರಪ್ಪನೊಂದಿಗೆ ಬುಧವಾರ ಮಧ್ಯಾಹ್ನದ ಸಮಯದಲ್ಲಿ ತಮ್ಮ ಮಾವನರಿಗೆ ಅಪ್ಪರ್ ಭದ್ರಾ ಇಲಾಖೆಯಿಂದ ಜಮೀನಿಗೆ ಅವಾರ್ಡ್ ಆಗಿದ್ದ ಜಮೀನಿನ ಬಾಬ್ತು ಒಟ್ಟು 19.97 ಲಕ್ಷ ರೂ. ಹಣ ಬಂದಿರುತ್ತದೆ. ಈ ಹಣದಲ್ಲಿ 10 ಲಕ್ಷ ರೂ. ನಗದು ಹಣವನ್ನು ಕರ್ನಾಟಕ ಬ್ಯಾಂಕಿನಲ್ಲಿ ಬಿಡಿಸಿಕೊಂಡಿದ್ದಾರೆ. ನಂತರ ಅರ್ಧ ಗಂಟೆ ಸಮಯದ ಬಳಿಕ, ಬಿಡಿಸಿದ ಎಲ್ಲಾ ಹಣವನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ತಮ್ಮ ಸ್ವಿಫ್ಟ್ ಕಾರಿನ ಡ್ರೈವರ್ ಸೀಟ್ ಪಕ್ಕದಲ್ಲಿ ಇಟ್ಟು ಕಾರ್ ಲಾಕ್ ಮಾಡಿಕೊಂಡು ಪಟ್ಟಣದಲ್ಲಿರುವ ವಿಜಯ ಬ್ಯಾಂಕ್ ಒಳಗಡೆ ಹೋಗಿದ್ದಾರೆ. ಬ್ಯಾಂಕ್ ರಶ್ ಇದ್ದಿದ್ದರಿಂದ 15 ನಿಮಿಷದಲ್ಲಿಯೇ ಬ್ಯಾಂಕ್ ನಿಂದ ಹೊರಬಂದು ನೋಡಿದಾಗ, ಯಾರೋ ಕಳ್ಳರು ಕಾರಿನ ಗ್ಲಾಸನ್ನು ಒಡೆದು ಅದರಲ್ಲಿದ್ದ 10.ಲಕ್ಷ ರೂ. ನಗದು ಹಣವನ್ನು ಬ್ಯಾಗ್ ಸಮೇತ ಕದ್ದು ಪರಾರಿಯಾಗಿದ್ದು, ಈ ಕುರಿತಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಮಧ್ಯದಲ್ಲಿಯೇ ಹಗಲಿನ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಕಳ್ಳರ ಬೇಟೆಗಾಗಿ ಖಾಕಿ ಪಡೆ ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದೆ.
+ There are no comments
Add yours