ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ ಸದ್ದು ಮಾಡುತ್ತಲೇ ಇದೆ. ನಗರದ ಚಳ್ಳಕೆರೆ ಗೇಟ್ನಿಂದ ಬ್ರಿಡ್ಜ್ ಕೆಳಗಿನಿಂದ ಬಂದು ಬಿ.ಡಿ.ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಿಸಿದ್ದು ಕೂಡಲೇ ೫೦ ಮೀಟರ್ನಷ್ಟು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ನಗರಸಭೆಯ (City Council ) ಹಾಲಿ, ಮಾಜಿ ಸದಸ್ಯರು ಮತ್ತು ಸಾರ್ವಜನಿಕರು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ ಕಾರಣ ಸಂಚಾರಕ್ಕೆ ಈ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಡಿವೈಡರ್ ತೆರವುಗೊಳಿಸಲು ಕ್ರಮ ವಹಿಸದೆ ಹೊರತು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರು ಬಿಗಿ ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸಮಧಾನಪಡಿಸಿ ಮುಂದಾದರು ಸೊಪ್ಪು ಹಾಕಲಿಲ್ಲ.
ಇದನ್ನೂ ಓದಿ:ಚಿತ್ರದುರ್ಗ ನಗರ ಮತ್ತು ಈ ಹಳ್ಳಿಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಚಳ್ಳಕೆರೆ, ಬೆಂಗಳೂರಿನಿಂದ ನಗರ ಪ್ರವೇಶಿಸುವ, ನಗರದೊಳಗಿನಿಂದ ಬರುವ ವಾಹನಗಳು ತಿರುವು ಪಡೆಯುವಾಗ ಒಂದಕ್ಕೊಂದು ಕಾಣದಂತೆ ಅವೈಜ್ಞಾನಿಕವಾಗಿ ರಸ್ತೆ ಡಿವೈಡರ್ ನಿರ್ಮಿಸಿರುವ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ವಾಹನಗಳಿಗೆ ಹಾನಿ ಆಗುತ್ತಿದೆಯೇ ಹೊರತು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಭಾಗದಲ್ಲಿ ಅತಿ ಹೆಚ್ಚು ಶಾಲಾ ಕಾಲೇಜು ವಾಹನಗಳು ಸಹ ಸಂಚರಿಸುತ್ತಿದ್ದು ಪೋಷಕರು ಜೀವ ಬಿಗಿ ಹಿಡಿದುಕೊಂಡು ವಾಹನ ಚಲಾಯಿಸುತ್ತಿದ್ದು ಅಪಘಾತದಿಂದ ಯಾರಾದರೂ ಮೃತಪಟ್ಟರೆ, ಯಾರು ಹೊಣೆ ಎಂದು ಪ್ರಶ್ನಿಸಿದರು.
ಈ ಮಾರ್ಗದಲ್ಲಿ ಹೆಚ್ಚಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಡೆದುಕೊಂಡು, ವಾಹನಗಳಲ್ಲಿ ಬರುತ್ತಾರೆ. ಕೆಲವೊಮ್ಮೆ ಅಪಘಾತಗಳಾಗಿವೆ. ಮಕ್ಕಳಿಗೂ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚಿದೆ. ಆದ್ದರಿಂದ ತೆರವುಗೊಳಿಸಲೇಬೇಕು ಎಂದು ಒತ್ತಾಯಿಸಿದರು.
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲೂ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಕೂಡ ಅವೈಜ್ಞಾನಿಕವೆಂದು ಹೇಳಿ ತೆರವಿಗೆ ಕ್ರಮವಹಿಸುವುದಾಗಿ ಹೇಳಿದ್ದರು. ಪೊಲೀಸರಿಗೆ ಇಲ್ಲಿನ ಸಮಸ್ಯೆ ತಿಳಿದಿದ್ದರೂ ಸಂಬಂಧಿಸಿದವರ ಗಮನಕ್ಕೆ ತರುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರವಿಂದ್ ಗಾರ್ಮೆಂಟ್ಸ್ ಮುಂಭಾಗ ಈ ಹಿಂದೆ ರಸ್ತೆ ವಿಭಜಕ ನಿರ್ಮಿಸಿ, ಮೂರು ದಿನದಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ನಾವು ಪ್ರತಿಭಟಿಸಿದರೆ, ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಆಗ ಅಡ್ಡಿಯಾಗದ ಕಾನೂನು ಹೀಗೇಕೆ ಎಂದು ಪ್ರಶ್ನಿಸಿದರು. ಭರವಸೆ ಆಗದೆ, ಕಾರ್ಯಗತವಾಗಬೇಕು. ಇಲ್ಲದಿದ್ದರೆ, ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಗುವುದು. ಯಾವುದೇ ಪ್ರಕರಣ ದಾಖಲಿಸಿದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ನಗರಸಭೆ ಸದಸ್ಯ ಜೆ.ಎಸ್.ದೀಪಕ್, ಮುಖಂಡರಾದ ಅಂಜಿನಪ್ಪ, ಪಿ.ತಿಪ್ಪೇಸ್ವಾಮಿ, ಮಂಜುನಾಥ್, ಎಸ್.ನಾಗೇಶ್, ಆರ್.ಮಂಜುನಾಥ್, ವಿ.ಎನ್.ರುಜತ್, ಜಗದೀಶ್, ಎನ್.ಶರಣಪ್ಪ, ಓಬಳೇಶ, ಎನ್.ಪ್ರವೀಣ್, ಕೆ.ಎನ್.ಸುನೀಲ್, ಶಿವು, ಹರೀಶ್, ಕೆ.ವಿನಾಯಕ, ಆರ್.ಅನುಕುಮಾರ್, ಸಿ.ಏಕಾಂತ, ಬಿ.ಮಂಜುನಾಥ್, ಟಿ.ಆರ್.ಗುರುಪ್ರಸಾದ್ ಸೇರಿ ನೂರಾರು ಮಂದಿ ಇದ್ದರು.
*ಕೋಟ್*
ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಾರ್ವಜನಿಕರಿಗೆ ನಿತ್ಯ ಆಗುತ್ತಿರುವ ತೊಂದರೆ ಮನವರಿಕೆ ಮಾಡಿ ಮುಂದಿನ ೨೦ ದಿನದೊಳಗೆ ತೆರವಿಗೆ ಕ್ರಮವಹಿಸಲಾಗುವುದು.
ಎಂ.ರೇಣುಕಾ, ನಗರಸಭೆ ಪೌರಾಯುಕ್ತೆ
[t4b-ticker]
+ There are no comments
Add yours