*ವಿವಿಧ ಕಲಾತಂಡಗಳೊಂದಿಗೆ ಸಾಲು ಎತ್ತಿನ ಗಾಡಿಗಳ ವೈಭದ ಮೆರವಣೆಗೆ*
ಚಿತ್ರದುರ್ಗ🙁chitradurga) ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಆರಾಧ್ಯ ದೈವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆ ಬುಧವಾರ ಮಧ್ಯಾಹ್ನ 2.30ಕ್ಕೆ ಚಿತ್ರದುರ್ಗ ನಗರ ಪ್ರವೇಶಿಸಿತು.
ರಾಷ್ಟ್ರೀಯ ಹೆದ್ದಾರಿ 4ರ ಹೋಟೆಲ್ ಬಿಗ್ ಬಾಸ್ ಸಮೀಪದಲ್ಲಿ ಮಿಂಚೇರಿ ಯಾತ್ರಾ ಮಹೋತ್ಸವವನ್ನು ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ, ತಾಲ್ಲೂಕು ನಾಯಕ ಸಮುದಾಯದ ಅಧ್ಯಕ್ಷ ಬಿ. ಕಾಂತರಾಜ್ ಅದ್ಧೂರಿಯಾಗಿ ಬರ ಮಾಡಿಕೊಂಡು, ಪೂಜೆ ಸಲ್ಲಿಸಿ ನಂತರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಇದನ್ನೂ ಓದಿ: ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಕಾಡುಗೊಲ್ಲ ಸರ್ಟಿಫಿಕೇಟ್ ನೀಡಿ: ಟಿ.ರಘುಮೂರ್ತಿ
ರಾಷ್ಟ್ರೀಯ ಹೆದ್ದಾರಿ-4ರ ಬಿಗ್ ಬಾಸ್ ಹೋಟೆಲ್ ಸಮೀಪದಿಂದ ಪ್ರಾರಂಭವಾದ ಬುಡಕಟ್ಟು ಸಮುದಾಯದ ಸಾಲು-ಸಾಲು ಎತ್ತಿನ ಗಾಡಿಗಳ ಮೆರವಣಿಗೆಯು ರೈಲ್ವೆ ನಿಲ್ದಾಣದಿಂದ ಆಜಾದ್ ಪ್ಲೋರ್ಮಿಲ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಗಾಂಧಿ ವೃತ್ತ, ಎಸ್ಬಿಐ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಾಗಿ, ಮೆಜೆಸ್ಟಿಕ್ ವೃತ್ತದಲ್ಲಿ ಇರುವ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಕೆಳಗೋಟೆಯ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಬಚ್ಚಬೋರನಹಟ್ಟಿ ಗ್ರಾಮಕ್ಕೆ ಮೆರವಣೆಗೆ ಸಾಗಿತು.
ಮೆರವಣಿಗೆಯ ಮಾರ್ಗದುದ್ದಕ್ಕೂ ನಗರದ ಜನತೆಯು ಮಿಂಚೇರಿ ಯಾತ್ರೆಯ ಭಕ್ತಾದಿಗಳಿಗೆ ಮಜ್ಜಿಗೆ, ತಂಪು ಪಾನೀಯ, ಕುಡಿಯುವ ನೀರು, ಊಟ ಸೇರಿ ಇತರೆ ಸೌಲಭ್ಯಗಳನ್ನು ನೀಡಿ ಸತ್ಕರಿಸಲಾಯಿತು. ರಸ್ತೆಯ ಅಕ್ಕಪಕ್ಕ ಸಾವಿರಾರು ಮಂದಿ ನಿಂತು ಬುಡಕಟ್ಟು ವೈಭವ ವೀಕ್ಷಿಸಿ ಕಣ್ತುಂಬಿಕೊಂಡರು. ಯುವಕರು ಕುಣಿದು ಸಂಭ್ರಮಿಸಿದರು.
ಇದನ್ನೂ ಓದಿ: ಯುವನಿಧಿ ಯೋಜನೆ : ಅರ್ಜಿ ಆಹ್ವಾನಕ್ಕೆ ಚಾಲನೆ
ವಿವಿಧ ಜನಪದ ಕಲಾಪ್ರಕಾರಗಳಾದ ಸೋಬಾನೆ, ಉರುಮೆ, ಖಾಸಬೇಡರ ಪಡೆ, ಗೊಂಬೆ ಕುಣಿತ, ಕೋಲಾಟ ಮೆರವಣೆಗೆಗೆ ವಿಶೇಷ ಮೆರಗು ನೀಡಿತು.
ನಾಳೆ ಬಚ್ಚಬೋರನಹಟ್ಟಿ ಪ್ರವೇಶ
ಡಿ. 28ರಂದು ಬಚ್ಚಬೋರನಹಟ್ಟಿ ಕಕ್ಕಲಬೆಂಚುವಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಸಮೀಪದಲ್ಲಿನ ದೇವರ ಬಂಡೆ ಹಾಗೂ ಬಸವಣ್ಣನ ಬಾವಿ ಬಳಿ ಗಂಗಾಮಾತೆ ಪೂಜೆ ನೆರವೇರಲಿದೆ. ನಂತರ ಗಾದ್ರಿ ಪಾಲನಾಯಕ ಸ್ವಾಮಿ ಗುಡಿದುಂಬಿಸುವ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ಉದ್ಯಮಿ ಅರುಣ್ ಕುಮಾರ್, ಸಮುದಾಯದ ಮುಖಂಡರಾದ ಯೋಗೇಶ್ ಬಾಬು, ಅಂಜಿನಪ್ಪ, ಸೂರಯ್ಯ ಸೇರಿದಂತೆ ಮತ್ತಿರರು ಇದ್ದರು.
ನಮ್ಮ ಬುಡಕಟ್ಟು ವೀರ ಗಾದ್ರಿಪಾಲನಾಯಕ: ಟಿ.ರಘುಮೂರ್ತಿ
ಈ ವೇಳೆ ಮಾತನಾಡಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಬುಡಕಟ್ಟು ಸಂಸ್ಕøತಿಯ ನಾಯಕ ಜನಾಂಗದ ನಾಯಕ ಎಂದೇ ಹೆಸರಾಗಿರುವ ಗಾದ್ರಿಪಾಲನಾಯಕ ಗೋ ಸಂರಕ್ಷಕ ಮತ್ತು ಹುಲಿಯೊಂದಿಗೆ ಕಾದಾಡುವ ಮೂಲಕ ಬುಡಕಟ್ಟು ವೀರರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ನಾಯಕ ಸಮಾಜದಲ್ಲಿ ಬುಡಕಟ್ಟು ಸಂಸ್ಕೃತಿಯ ಪರಂಪರೆಯನ್ನು ಮೈಗೂಡಿಸಿಕೊಂಡು ಬಂದಿದ್ದೇವೆ. ಆಚಾರ ವಿಚಾರಗಳು, ಪದ್ದತಿಗಳು ಭವಿಷ್ಯದ ಪೀಳಿಗೆಗೆ ಮಿಂಚೇರಿ ಅಂತಹ ಜಾತ್ರೆಗಳ ಮೂಲಕ ತಿಳಿಯುತ್ತವೆ. ಐದು ವರ್ಷಗಳಿಗೆ ಒಮ್ಮೆ ಮಿಂಚೇರಿ ಜಾತ್ರೆ ನಡೆಯಲಿದ್ದು, ಮಿಂಚೇರಿ ನಮ್ಮ ಪುಣ್ಯಕ್ಷೇತ್ರ ಮತ್ತು ಧಾರ್ಮಿಕ ಕೇಂದ್ರವಾಗಿದೆ ಎಂದರು.
ಯುವ ಪೀಳಿಗೆಯು ನಮ್ಮ ಸಂಸ್ಕಾರ ಸಂಸ್ಕೃತಿ ಮರೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಮಿಂಚೇರಿ ಯಾತ್ರೆ ಬುಡಕಟ್ಟು ಸಮುದಾಯಕ್ಕೆ ಒಂದು ದೊಡ್ಡ ಸಂದೇಶ ನೀಡುವ ಜೊತೆಗೆ ಬುಡಕಟ್ಟು ವೀರರ ಇತಿಹಾಸ ಸಾರುತ್ತಿದ್ದು ಈ ಜಾತ್ರೆಯಲ್ಲಿ ನಾನು ಭಾಗವಹಿಸಿದ್ದು ತುಂಬಾ ಸಂತೋಷವಾಯಿತು, ನಾನು ಸಹ ವಿಶೇಷ ಪೂಜೆ ಸಲ್ಲಿಸಿ ಸಮಾಜಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಚಿತ್ರದುರ್ಗ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಮಾನತು
ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಬುಡಕಟ್ಟು ವೀರನಾದ ಗಾದ್ರಿಪಾಲನಾಯಕ ನಮ್ಮ ಆರಾಧ್ಯ ದೈವನಾಗಿದ್ದಾನೆ. ಆರು ದಿನಗಳ ಕಾಲ ನಡೆಯುವ ಜಾತ್ರೆ ಪ್ರತಿಯೊಂದು ದಿನವು ವಿಶೇಷವಾಗಿರುತ್ತದೆ. ಇಂದು ಮಿಂಚೇರಿ ಯಾತ್ರೆಯು ನಮ್ಮ ಚಿತ್ರದುರ್ಗದ ರಾಜಬೀದಿಗಳಲ್ಲಿ ಸಾಗಿದ್ದು, ನಮ್ಮ ಸಮಾಜದ ಶಾಸಕರಾದ ಟಿ.ರಘುಮೂರ್ತಿ ಅವರು ಮತ್ತು ನಮ್ಮ ಸಮಾಜದ ಮುಖಂಡರು ಪೂಜೆ ಸಲ್ಲಿಸಿ ಬರಮಾಡಿಕೊಂಡು ಮೆರವಣಿಗೆಯನ್ನು ಅದ್ದೂರಿಯಾಗಿ ಬಿಳ್ಕೊಟ್ಟೇವು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಅಂಜಿನಪ್ಪ, ಸೂರನಾಯಕ್, ಮದಕರಿ ವಿದ್ಯಾಸಂಸ್ಥೆಯ ಸಂದೀಪ್ ನಾಯಕ್, ಯೋಗೇಶ್ ಬಾಬು, ಅಹೋಬಲ ಟಿವಿಎಸ್ ಅರುಣ್ ಕುಮಾರ್, ಗೋಪಲಸ್ವಾಮಿನಾಯಕ್, ಕಾಟೀಹಳ್ಳಿ ಕರಿಯಪ್ಪ , ಸಾಗರ್, ವಿಜಯ್ ಕುಮಾರ್, ದರ್ಶನ್ ಇಂಗಳದಾಳ್, ಬಸವರಾಜ್ ಮತ್ತು ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
[t4b-ticker]
+ There are no comments
Add yours