ಚಿತ್ರದುರ್ಗ (ಆ.05): ಈ ಬಾರಿಯಾದರು ಕೋಟೆ ನಾಡು ಚಿತ್ರದುರ್ಗಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ಅವಕಾಶ ಸಿಗಲಿಲ್ಲ. ಅದ್ದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲ. ಮುಂದೆ ವರಿಷ್ಠರು ಏನು ಹೇಳುತ್ತಾರೋ ಶಾಸಕನಾಗಿ ಆ ಕೆಲಸ ಮಾಡುತ್ತೇನೆ.
ಇದು ಜಿಲ್ಲೆಯ ಹಿರಿಯ ಶಾಸಕ ರಾಜಕೀಯ ಚಾಣಕ್ಯ ಎನಿಸಿಕೊಂಡಿರುವ ಜಿ.ಹೆಚ್. ತಿಪ್ಪಾರೆಡ್ಡಿ ಅವರ ಮನದಲ್ಲಿನ ನೋವಿನ ನುಡಿಗಳು.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಸರ್ವ ಸಮುದಾಯಗಳಿಗೂ ಅವಕಾಶ ಸಿಗುವಂತೆ ಸಚಿವ ಸಂಪುಟ ವಿಸ್ತರಿಸಿದರು. ಆ ಕಾರ್ಯವನ್ನು ವಿರೋಧ ಪಕ್ಷದ ನಾಯಕರು ಕೂಡ ಒಪ್ಪಿಕೊಂಡರು. ಆದರೆ ರಾಜ್ಯದಲ್ಲಿ ಆ ಕಾರ್ಯವಾಗಲಿಲ್ಲ. ಆರು ಬಾರಿ ಗೆದ್ದು ಪಕ್ಷ ಸೇವೆ ಮಾಡಿದ ನನಗೆ ಅವಕಾಶ ಸಿಗಲಿದೆ ಎಂಬ ಆಸೆ ಇತ್ತು. ಅದು ಈಡೇರಲಿಲ್ಲ ಎಂದು ನೋವು ತೋಡಿಕೊಂಡರು.
ನಾನು ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ ಅವರಂತೆ ಹಿರಿಯ ಶಾಸಕ. ಅವರಿಗೆ ಅವಕಾಶ ನೀಡಿದಂತೆ ನನಗೂ ಕೂಡ ಸಚಿವ ಸ್ಥಾನ ನೀಡಬಹುದಿತ್ತು. ಆದರೆ ಈ ಬಾರಿ ಕೂಡ ನನಗೆ ಅವಕಾಶ ನೀಡಲಿಲ್ಲ. ಈ ಪೀಳಿಗೆ ಜನರ ಸೇವೆ ಮಾಡುವ ಆಸೆ ಇತ್ತು. ಅದು ಈಡೇರಲಿಲ್ಲ. ಮುಂದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿನ ಪಕ್ಷ ಸಂಘಟನೆಯ ಕೆಲಸ ಮಾಡತ್ತೇನೆ ಎಂದು ಹೇಳಿದರು.
+ There are no comments
Add yours