ಜಿಲ್ಲಾಧಿಕಾರಿಗಳಿಂದ ಮತಗಟ್ಟೆಗಳಿಗೆ ಭೇಟಿ : ಮನೆ ಮನೆ ಸಮೀಕ್ಷಾ ಕಾರ್ಯ ಪರಿಶೀಲನೆ

 

ಚಿತ್ರದುರ್ಗ ಡಿ. 04 (ಕರ್ನಾಟಕ ವಾರ್ತೆ) : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಭಾನುವಾರ ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದರು, ಅಲ್ಲದೆ ಬಿಎಲ್‍ಒ ಗಳೊಂದಿಗೆ ಮನೆ ಮನೆ ಭೇಟಿ ಸಮೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರ್ಹ ಯುವ ಮತದಾರರು ಮತ್ತು ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸದೇ ಇರುವ ಅರ್ಹ ವ್ಯಕ್ತಿಗಳು ತಪ್ಪದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಆದ್ಯತೆ ನೀಡುವಂತೆ ಅವರು ಕೋರಿದರು.


ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಗೊಂಡಿದ್ದು, 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.  ಅಲ್ಲದೆ ಈಗಾಗಲೆ ಪಟ್ಟಿಯಲ್ಲಿರುವವರ ಹೆಸರು ಮತ್ತಿತರ ತಿದ್ದುಪಡಿ, ಸ್ಥಳಾಂತರ, ಫೋಟೋ ಬದಲಾವಣೆ ಹೀಗೆ ವಿವಿಧ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲು ಸಾರ್ವಜನಿಕರು ಹಾಗೂ ಮತದಾರರಿಗೆ ಡಿ. 08 ರವರೆಗೂ ಕಾಲಾವಕಾಶ ನೀಡಲಾಗಿದೆ.   ಭಾನುವಾರ ಮನೆ ಮನೆ ಸಮೀಕ್ಷೆ ಕಾರ್ಯವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಭಾನುವಾರ ಚಿತ್ರದುರ್ಗ ತಾಲ್ಲೂಕಿನ ಮಲ್ಲನಕಟ್ಟೆ, ತಮಟಕಲ್ಲು ಗ್ರಾಮ, ಹಿರಿಯೂರು ತಾಲ್ಲೂಕಿನ ಐಮಂಗಲ, ಕಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು, ಅಲ್ಲದೆ ಖುದ್ದಾಗಿ ಬಿಎಲ್‍ಒ ಅವರೊಂದಿಗೆ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿ, ಸಾರ್ವಜನಿಕರೊಂದಿಗೆ ಅಗತ್ಯ ಮಾಹಿತಿ ಪಡೆದುಕೊಂಡರು.  ಈಗಾಗಲೆ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ.  ಮತದಾರರ ಕರಡು ಪಟ್ಟಿ ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ, ಉಪವಿಭಾಗಾದಿಕಾರಿಗಳ ಕಚೇರಿ, ಆಯಾ ಮತಗಟ್ಟೆಗಳು, ಗ್ರಾ.ಪಂ., ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನಲ್ಲಿ ಲಭ್ಯವಿದ್ದು, ಪರಿಶೀಲಿಸಬಹುದಾಗಿದೆ. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಅಥವಾ ಏನಾದರೂ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.  ಯಾವೊಬ್ಬ ಅರ್ಹರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು, ಅಲ್ಲದೆ ಮಹಿಳೆ ಮತ್ತು ಪುರುಷ ಮತದಾರರ ಅನುಪಾತ, ಸಮರ್ಪಕವಾಗಿಸುವ ನಿಟ್ಟಿನಲ್ಲಿ, ಎಲ್ಲ ಅರ್ಹ ಮಹಿಳಾ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಿಎಲ್‍ಒ ಗಳು ಮುಂದಾಗಬೇಕು, ಆಸಕ್ತಿ ವಹಿಸಿ, ಮನೆ ಮನೆ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಂಡು, ಇದುವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳದವರನ್ನು ಗುರುತಿಸಿ, ಅಂತಹ ಅರ್ಹರನ್ನು ಸೇರ್ಪಡೆ ಮಾಡಲು ಆದ್ಯತೆ ನೀಡಬೇಕು, 17 ವರ್ಷ ವಯಸ್ಸು ಆದವರ ಅರ್ಜಿಯನ್ನೂ ಕೂಡ ಪಡೆಯಬಹುದಾಗಿದ್ದು, ಅಂತಹವರ ಅರ್ಜಿಯನ್ನು ಪಡೆದು, ಅವರಿಗೆ 18 ವರ್ಷ ಪೂರ್ಣಗೊಂಡ ಬಳಿಕ ಅಂತಹವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು, ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ, ಅಕ್ಕಪಕ್ಕದ ಮನೆಗಳ ಯುವ ಮತದಾರರ ನೊಂದಣಿಗೆ ಕರೆ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಬೇಕು, ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಚಂದ್ರಯ್ಯ, ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನೇಮಿಸಲಾಗಿರುವ ವಿವಿಧ ಅಧಿಕಾರಿಗಳು, ಆಯಾ ಬೂತ್ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಮನೆ ಮನೆ ಭೇಟಿ ಸಮೀಕ್ಷೆ ಕಾರ್ಯ ಭಾನುವಾರ ಜಿಲ್ಲೆಯಾದ್ಯಂತ ಜರುಗಿದ್ದು, ಆಯಾ ತಾಲ್ಲೂಕು ತಹಸಿಲ್ದಾರರು, ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ, ಬಿಎಲ್‍ಒ ಗಳೊಂದಿಗೆ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿದರು.  ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಡಿ. 08 ರವರೆಗೂ ಜರುಗಲಿದ್ದು, ಎಲ್ಲ ಅರ್ಹ ಯುವಜನರು ತಪ್ಪದೆ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕೋರಿದ್ದಾರೆ.

[t4b-ticker]

You May Also Like

More From Author

+ There are no comments

Add yours