ಚಿತ್ರದುರ್ಗ : ಕಲುಷಿತ ನೀರು ಸೇವಿಸಿ ಕವಾಡಿಗರಹಟ್ಟಿಯಲ್ಲಿ ಐವರು ಮೃತಪಟ್ಟಿದ್ದು, ಇನ್ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರೂ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷೆ ವಹಿಸುತ್ತಿರುವುದರಿಂದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ಎಚ್ಚರಿಸಿದರು.
ಕವಾಡಿಗರಹಟ್ಟಿಗೆ ಗುರುವಾರ ಭೇಟಿ ನೀಡಿ ಅಲ್ಲಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ವಿಚಾರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕವಾಡಿಗರಹಟ್ಟಿಯಲ್ಲಿ ಗಂಜಿ ಕೇಂದ್ರವನ್ನು ತೆರೆಯಬೇಕಿತ್ತು. ಆಸ್ಪತ್ರೆಯಲ್ಲಿ ಅಚ್ಚುಕಟ್ಟಾದ ಚಿಕಿತ್ಸೆ ಸಿಗುತ್ತಿಲ್ಲ. ಮಹಿಳೆ ಮಕ್ಕಳು ಪುರುಷರು ಒಂದೊಂದು ಕಡೆ ದಾಖಲಾಗಿದ್ದಾರೆ. ಇಡಿ ಮನೆ ಮಂದಿಯೆಲ್ಲಾ ಆಸ್ಪತ್ರೆಯಲ್ಲಿದ್ದರೆ ದುಡಿದು ಸಂಸಾರ ಸಾಗಿಸುವವರು ಯಾರು. ಸಿನಿಮಾ ಹೀರೋಗಳ ಮದುವೆಗೆ ಹೋಗುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕವಾಡಿಗರಹಟ್ಟಿಗೆ ಬಂದು ವಾಸ್ತವ ಸ್ಥಿತಿಯನ್ನು ಅರಿತು ಮೃತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ.ಪರಿಹಾರ ನೀಡಬೇಕು. ಅಸ್ವಸ್ಥರಿಗೆ ತಲಾ ಹತ್ತು ಲಕ್ಷ ರೂ.ಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪರೀಕ್ಷೆಗೆ ವಾಸವಿ ಲ್ಯಾಬ್ಗೆ ಹೋಗುವಂತೆ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರು ಚೀಟಿ ಬರೆದು ಕೊಟ್ಟಿದ್ದಾರೆ. ಎಲ್ಲವನ್ನು ಕಳೆದುಕೊಂಡಿರುವ ಬಡವರು ಹೇಗೆ ತಾನೆ ಹಣ ಹೊಂದಿಸಲು ಸಾಧ್ಯ? ರಾಜ್ಯ ಬಜೆಟ್ನಲ್ಲಿ 34 ಸಾವಿರ ಕೋಟಿ ರೂ.ಗಳಿದೆ. ಅದರಲ್ಲಿ ಪರಿಹಾರವಾಗಿ ಐದು ಕೋಟಿ ರೂ.ಗಳನ್ನು ನೀಡಿದರೆ ಸರ್ಕಾರಕ್ಕೆ ಏನು ನಷ್ಟವಾಗುವುದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರತಿದಿನ ಒಂದೊಂದು ಆಹಾರದ ಕಿಟ್ ಕೊಡಬೇಕಿತ್ತು. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಳಿಯೂ ಚರ್ಚಿಸಲಾಗುವುದು ಎಂದರು.
ಭೀಮ್ ಆರ್ಮಿ ರಾಜ್ಯ ಕಾರ್ಯಾಧ್ಯಕ್ಷ ಖಾಲಿದ್ ಹುಸೇನ್, ರಾಜ್ಯ ಉಪಾಧ್ಯಕ್ಷ ಅವಿನಾಶ್ ಸಿ.ಎಲ್. ರಘು, ಆಕಾಶ್, ಅಂಬರೀಶ್, ಪ್ರದೀಪ್, ಆಸಿಫ್, ವಿಶ್ವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
+ There are no comments
Add yours