ವಿಜಯನಗರ: ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್; ಇದು ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣಿಕ (ಭವಿಷ್ಯ). ಎಂದಿನಂತೆ ಈ ವರ್ಷವೂ 14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಕಾರ್ಣಿಕ ನುಡಿದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಈ ಕಾರ್ಣಿಕೋತ್ಸವ ಜರುಗಿದೆ.
ಕಳೆದ ವರ್ಷದಂತೆ ಈ ವರ್ಷ ಕೂಡ ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್’ ಎಂಬ ಕಾರ್ಣಿಕವೇ ಮರುಕಳಿಸಿದೆ.
ಕಾರ್ಣಿಕ ಭವಿಷ್ಯವಾಣಿಯ ಅರ್ಥವೇನು?
ಈ ಭವಿಷ್ಯವಾಣಿ ಪ್ರಕಾರ ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿಯೇ ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಹೀಗೆಂದು ಭಗವಂತ ದೈವವಾಣಿಯ ಮೂಲಕ ತಿಳಿಸಿದ್ದಾನೆ ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಡೆಂಕಣಮರಡಿಯಲ್ಲಿ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದಾರೆ.
ಅಂಬಲಿ ಹಳಸಿತು ಎಂದರೆ ಊಟ ಮಾಡಿ ಅಳಸುವಷ್ಟು ಬೆಳೆ ಬರುತ್ತದೆ. ರೈತರಿಗೆ ಹಾಗೂ ದೇಶಕ್ಕೆ ಅತಿವೃಷ್ಠಿ ಆಗದ ಹಾಗೇ ಮಳೆ ಬರುತ್ತದೆ. ಒಳ್ಳೆಯ ಬೆಳೆ ಈ ಬಾರಿ ಬರಲಿದೆ. ಕಂಬಳಿ ಬೀಸಿತಲೆ ಎಂದು ಹೇಳಿದರೆ ವಿಶೇಷವಾಗಿ ಸಾಮಾಜಿಕ ನ್ಯಾಯ ಹಿನ್ನೆಲೆ ಇರುವ ಉತ್ತಮ ವ್ಯಕ್ತಿ ರಾಜ್ಯದ ಸಿಎಂ ಆಗುತ್ತಾರೆ. ಈ ಸೂಚನೆಯನ್ನು ಗೊರವಯ್ಯ ನುಡಿದಿದ್ದಾರೆ ಎಂದು ಮಾಜಿ ಸಚಿವ ಬಸವರಾಜ್ ಶಿವಣ್ಣನವರ ಮೈಲಾರದ ಡೆಂಕಣಮರಡಿಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದ ಇರುವ ನಾಯಕರಿಗೆ ರಾಜ್ಯದ ಪಟ್ಟ ಸಿಗಲಿದೆ ಅನ್ನೋದು ಕಾರ್ಣಿಕದ ವಿಶ್ಲೇಷಣೆ. ಈ ಕಾರ್ಣಿಕ ನುಡಿ ಎಲ್ಲಾ ಪಕ್ಷಗಳಲ್ಲಿ ತೀವ್ರ ಕೂತುಹಲ ಹಾಗೂ ಚರ್ಚೆಯನ್ನ ಹುಟ್ಟು ಹಾಕಿದೆ.
[t4b-ticker]
+ There are no comments
Add yours