ಹೊಸದುರ್ಗ : ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಗ್ರಾಮಗಳ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಯೇ ಸದ್ಗುರು ಆಯುರ್ವೇದ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಇಂತಹ ಶಾಲೆಗಳನ್ನು ಗುರುತಿಸಿ, ದತ್ತು ಪಡೆದು ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ನಮ್ಮ ಸದ್ಗುರು ಆಯುರ್ವೇದ ಸಂಸ್ಥೆ ಮಾಡುತ್ತಿದೆ ಎಂದು ಸದ್ಗುರು ಸಂಸ್ಥೆಯ ಮಾಲೀಕ ಡಿ.ಏಸ್. ಪ್ರದೀಪ್ ತಿಳಿಸಿದರು.
ತಾಲೂಕಿನ ಕಡದನಕೆರೆ ಸರ್ಕಾರಿ ಶಾಲೆಯ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ಶೋಷಿತ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ದಿಂದ ವಂಚಿತವಾದ ಬಡ ಕುಟುಂಬದ ಮಕ್ಕಳು ಕೂಡ ಮೌಲ್ಯಯುತ ಶಿಕ್ಷಣ ಕಲಿತು, ತನ್ನ ಬದುಕು ಕಟ್ಟಿಕೊಂಡಾಗ ಗ್ರಾಮ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯೆ ಕಲಿಸುತ್ತಿರುವ ಶಿಕ್ಷಕರು ಮೂಲತಃ ಸರ್ಕಾರಿ ಶಾಲೆಗಳಲ್ಲಿಯೇ ಓದಿದವರು. ಇಂತಹ ಶಿಕ್ಷಕರಿಂದ, ಮಕ್ಕಳಿಗೆ ಬೇಕಾದ ನೈತಿಕ ಮತ್ತು ಭೌತಿಕ ಶಿಕ್ಷಣವನ್ನು ಕೊಡಿಸಲು ಸಾಧ್ಯವಾಗುತ್ತದೆ. ಒಬ್ಬ ಮೌಲ್ಯಯುತ ಶಿಕ್ಷಕ ನಾನು ಕಲಿಸಿದ ಶಿಕ್ಷಣದಲ್ಲಿ ಬದ್ಧತೆ, ಹಾಗೂ ಕಾರ್ಯಕ್ಷಮತೆ ಮುಖ್ಯವಾಗಿರಬೇಕು. ಕಡದಿನಕೆರೆ ಶಾಲೆಯಲ್ಲಿ ಎಷ್ಟು ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ ಎಂಬುದು ಮುಖ್ಯವಲ್ಲ. ಇಲ್ಲಿಂದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಳಿಸುವ ಪೋಷಕರು ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಕಂಡು ಅವರ ಮಕ್ಕಳನ್ನು ಸಹ ಮುಂದೆ ಇದೇ ಶಾಲೆಗೆ ಸೇರಿಸುವಂತಾಗಬೇಕು. ಆ ರೀತಿಯಲ್ಲಿ ಈ ಶಾಲೆಯನ್ನ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯುವ ಮುಖಂಡ ಶ್ರೀನಿವಾಸ್ ಮಾತನಾಡಿ, ನಮ್ಮ ಊರಿನ ಮಕ್ಕಳು ಸದ್ಗುರು ಆಯುರ್ವೇದ ಸಂಸ್ಥೆಯ ಸಹಕಾರದಿಂದ ಬೆಳೆದು, ನಾಳೆ ಉನ್ನತ ಅಧಿಕಾರಿಗಳಾಗಿ ಅವರಿಂದಲೂ ಇಂತಹ ಶಾಲೆಗಳು ಅಭಿವೃದ್ಧಿಯಾಗಬೇಕೆಂಬುದೇ ನನ್ನ ಆಶಯ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಚಿಂತಕ, ಸಮಾಜ ಸೇವಕ ತುಂಬಿನಕೆರೆ ಬಸವರಾಜ್ ಶಿಕ್ಷಕರಾದ ಮಂಜುನಾಥ್, ಚಿದಾನಂದ್, ರವಿಕುಮಾರ್, ಲಕ್ಷ್ಮಿ, ಎಸ್ ಡಿ ಎಂ ಸಿ ಸದಸ್ಯ ಶ್ರೀನಿವಾಸ್ ಗ್ರಾ.ಪಂ.ಸದಸ್ಯರಾದ ರಂಗನಾಥ್, ಇಂದಿರಮ್ಮ ದೇವರಾಜ್, ಓಂಕಾರ್ ನಾಯ್ಕ್, ರಾಮು, ಚಂದ್ರು, ತ್ಯಾಗರಾಜ್ ಮತ್ತು ವೆಂಕಟೇಶ್ ಸೇರಿದಂತೆ ಗ್ರಾಮದ ಮುಖಂಡರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು.
+ There are no comments
Add yours