ಚಳ್ಳಕೆರೆ: ನಗರದಲ್ಲಿ ವಿವಿಧ ಯೋಜನೆಗಳ ಉತ್ತಮ ಅನುಷ್ಠಾನದ ಮೂಲಕ ನಾಗರಿಕರಿಗೆ ನೀಡುವ ಸೌಲಭ್ಯಗಳು ಸದುಪಯೋಗವಾಗಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟವಿಲ್ಲದ ಕಾಮಗಾರಿಯನ್ನು ನಡೆಸಬಾರದು ಎಂದು ಶಾಸಕರಾದ (MLA) ಟಿ.ರಘುಮೂರ್ತಿ ತಿಳಿಸಿದರು.
ಅವರು, ನಗರದ ಬಳ್ಳಾರಿ ರಸ್ತೆಯ ಹಳೇಟೋಲ್ಗೇಟ್ನಿಂದ ವೀರಶೈವ ಸ್ಮಶಾನದ ತನಕ ೯೫ ಲಕ್ಷ ವೆಚ್ಚದ ಶೆಡ್ಗಳ ನಿರ್ಮಾಣ, ಸಂತೆ ಮೈದಾನದ ವಿನಾಯಕ. ಕಾಂಪ್ಲೆಕ್ಸ್ ಹಿಂಭಾಗದ ವಾಣಿಜ್ಯ ಮಳಿಗೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಸಾರ್ವಜನಿಕರ ಹಿತದೃಷ್ಠಿಯಿಂದ ವಿವಿಧ ಕಾಮಗಾರಿಗಳನ್ನು ಆಯೋಜಿಸಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಚಳ್ಳಕೆರೆ ನಗರದ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇಯಾದ ಹೆಸರು ಗಳಿಸಿದ್ದು, ವಾಣಿಜ್ಯೋದ್ಯಮಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ಸಂತೆ ಮೈದಾನ ಮತ್ತು ಬಳ್ಳಾರಿ ರಸ್ತೆಯಲ್ಲಿ ಶೆಡ್, ಮಳಿಗೆ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ನಗರಸಭೆ ಆದಾಯವನ್ನು ಹೆಚ್ಚಿಸುವ ದೃಷ್ಠಿಯಿಂದ ಎಲ್ಲಾ ಮಳಿಗೆಗಳಿಗೆ ಬಾಡಿಗೆ ನಿಗದಿಪಡಿಸಿ ಸಾರ್ವಜನಿಕರಿಗೆ ನೀಡುವಂತೆ ಸಲಹೆ ನೀಡಿದರು.
ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ನಗರಸಭೆ ಉದ್ಯಮ ನಿಧಿಯಡಿಯಲ್ಲಿ ಈ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ರಸ್ತೆಯ ೩೭ ಶೆಡ್ ನಿರ್ಮಾಣ ಕಾಮಗಾರಿಗೆ ೯೫ ಲಕ್ಷ, ಸಂತೆ ಮೈದಾನದ ಮಳಿಗೆಗಳ ನಿರ್ಮಾಣಕ್ಕೆ ೯೦ ಲಕ್ಷ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಆರ್ಹರನ್ನು ಗುರುತಿಸಿ ಅವರಿಗೆ ಬಾಡಿಗೆ ರೂಪದಲ್ಲಿ ಶೆಡ್ ಮತ್ತು ಮಳಿಗೆ ನೀಡಲಾಗುವುದು, ಎಲ್ಲಾ ಹಂತದಲ್ಲೂ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯರಾದ ಎಸ್.ಜಯಣ್ಣ, ಶಿವಕುಮಾರ್, ಟಿ.ಮಲ್ಲಿಕಾರ್ಜುನ್, ಸಿ.ಕವಿತಾ, ಸುಮಾ, ಜೈತುಂಬಿ, ಕೆ.ವೀರಭದ್ರಯ್ಯ, ಗುತ್ತಿಗೆದಾರ ಎನ್.ಟಿ.ವೀರೇಶ್, ಎಇಇ ಕೆ.ವಿನಯ್, ಕಿರಿಯ ಅಭಿಯಂತರ ಜೆ.ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
+ There are no comments
Add yours