ಭಾರತ ಸಂವಿಧಾನವೆಂಬ ಬೆಳಕಿನ ದಾರಿ-ಡಾ.ಹುಲಿಕುಂಟೆಮೂರ್ತಿ

 

ವಿಶೇಷ ಲೇಖನ: ಡಾ.ಹುಲಿಕುಂಟೆಮೂರ್ತಿ
ತನ್ನ ಸಮತೆಯ ಆಶಯದಿಂದ ಜಗತ್ತಿನ ಹೃದಯಗೆದ್ದ ಭಾರತ ಸಂವಿಧಾನಕ್ಕೆ ಈಗ 75 ವರ್ಷ. ಶೋಷಿತರ ಮೇಲಿನ ಸಾವಿರಾರು ವರ್ಷಗಳ ಅನ್ಯಾಯವನ್ನು ಕೊನೆಗಾಣಿಸುವ ತಮ್ಮ ಕನಸಿಗೆ ಸಂವಿಧಾನದ ಮೂಲಕ ರೆಕ್ಕೆಕಟ್ಟಿದವರು ಬಾಬಾಸಾಹೇಬ್ ಅಂಬೇಡ್ಕರ್. ಅದಕ್ಕಾಗಿ ಅವರು ಸವೆಸಿದ ದಾರಿಸುಲಭದ್ದಾಗಿರಲಿಲ್ಲ. ಪ್ರಪಂಚದ ಮೂಲೆಮೂಲೆಯ ಸಮತೆಯ ಆಶಯಗಳನ್ನು ಹುಡುಕಿ, ಭಾರತ ನೆಲದ ಶೋಷಣೆಯ ಗಾಯಗಳನ್ನು ಮಾಯಿಸುವ ಮುಲಾಮು ಕಂಡುಹಿಡಿದರು. ಈ ದಾರಿಯಲ್ಲಿ ಅವರು ಇಡೀ ದೇಶವನ್ನೂ ದೇಶದ ಜನರ ಕಷ್ಟ – ಸುಖಗಳನ್ನುಅಧ್ಯಯನ ಮಾಡಿದರು. ಜಾತಿ ತಾರತಮ್ಯದ ಮೂಲಬೇರುಗಳನ್ನು ಶೋಧಿಸಿದರು. ಯಾವ ಔಷಧಿ ಈ ತಾರತಮ್ಯದ ರೋಗವನ್ನು ವಾಸಿಮಾಡಬಹುದು ಎಂದು ಮನಗಂಡರು. ಇದೆಲ್ಲದರ ಪ್ರತಿಫಲವಾಗಿ ಭಾರತಸಂವಿಧಾನ ಸಿದ್ಧಗೊಂಡಿತು.
ಸಂವಿಧಾನ ಜಾರಿ ಮಾಡುವವರು ಸಮರ್ಥರಾಗಿರಬೇಕು ಎಂದು ಬಾಬಾಸಾಹೇಬರು ಕೊನೆಯಲ್ಲಿ ಹೇಳಿ ಹೋದರು. ಅವರು ಹೇಳಿದ್ದು ನಿಜವಾಯಿತು. ಕೊನೆಗೂ ಸಂವಿಧಾನ ದೇಶದ ಜನರ ಬದುಕಿನ ಭಾಗವಾಗದೆ ಆಡಳಿತ ಮಾಡುವವರ ಕಾರ್ಯಯಕ್ರಮವಾಯಿತು. ಈ ಕಾರಣದಿಂದ ಸಮಾಜಮುಖಿ ಆಲೋಚನೆಯ ಸರ್ಕಾರಗಳು ತಮ್ಮ ಆಶಯದ ಈಡೇರಿಕೆಗೆ ಸಂವಿಧಾನವನ್ನು ಮುನ್ನಲೆಗೆತರುತ್ತವೆ. ಇದೀಗ ಕರ್ನಾಟಕ ಸರ್ಕಾರ ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮನೆಮನೆಗೂ ಸಂವಿಧಾನವೆಂಬ ಆಂದೋಲನವನ್ನೇ ಕೈಗೊಂಡಿದೆ. ಇದು ಭಾರತದ ಮಟ್ಟಿಗೆ ನಿಜಕ್ಕೂ ಮಹತ್ವದ ವಿದ್ಯಮಾನ. ಕೋಮುವಾದ, ಜಾತಿವಾದಗಳು ಹೊಸರೂಪ ಪಡೆಯುತ್ತಿರವ, ಆ ಮೂಲಕ ಶೋಷಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಸರ್ಕಾರಿ ಇಲಾಖೆಯೊಂದು ಸಂವಿಧಾನವನ್ನು ಹೊತ್ತು ಸಾಗುತ್ತಿರುವುದು ಮಹತ್ತರವಾದುದು. ಇದರಿಂದಾಗಿ ದಶಕಗಳಿಂದ ಸಂವಿಧಾನದ ನೆರಳಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡುಬಂದಿರುವ ಸಂಘಟನೆಗಳಿಗೆ ಮತ್ತು ಸಂವಿಧಾನವನ್ನು ಹೊಸ ಪರಿಭಾμÉಯಲ್ಲಿ ಅರ್ಥಮಾಡಿಕೊಳ್ಳಲು ಕಾಯುತ್ತಿದ್ದ ಯುವಜನತೆಗೆ ಹೊಸ ಒಂದು ಬೆಳಕಿನ ದಾರಿ ಸಿಕ್ಕಂತಾಗಿದೆ.
ಕಳೆದ ಏಳೂವರೆ ದಶಕದಿಂದ ಭಾರತದಲ್ಲಾದ ಸಾಮಾಜಿಕ ಬದಲಾವಣೆಗಳ ಹಿಂದೆ ಭಾರತ ಸಂವಿಧಾನದ ಪಾಲಿದೆ. ಸಂವಿಧಾನ ರೂಪಿತವಾಗಿ ಅಂಗೀಕಾರಗೊಂಡ ಇಪ್ಪತ್ತೈದು ವರ್ಷಗಳ ನಂತರ ಕರ್ನಾಟಕದಲ್ಲಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳು ಜನ್ಮತಾಳಿದವು. ಈ ಎರಡೂ ಚಳವಳಿಗಳ ಜೊತೆಜೊತೆಗೆ ಕಾರ್ಮಿಕ ಹೋರಾಟಗಳು, ಮಹಿಳಾ ಹೋರಾಟಗಳೂ, ವಿದ್ಯಾರ್ಥಿ ಹೋರಾಟಗಳೂ ನಡೆದು ಕರ್ನಾಟಕ ಮಣ್ಣಿನ ಪ್ರತಿಭಟನಾತ್ಮಕ ವಿವೇಕವನ್ನು ಕಾಪಿಟ್ಟುಕೊಂಡವು. ಈ ಎಲ್ಲಾ ಚಳವಳಿಗಳೂ ಆತ್ಯಂತಿಕವಾಗಿ ಅವಲಂಭಿಸಿದ್ದು ನಮ್ಮ ಸಂವಿಧಾನವನ್ನೇ. ಆಳುವ ಪಕ್ಷಗಳು ಸಂವಿಧಾನದ ಆಶಯಗಳ ವಿರುದ್ಧ ನಡೆದುಕೊಂಡಾಗ ಎಚ್ಚರಿಸುವ, ಜನರಿಗೆ ಅರಿವು ಮೂಡಿಸುವ ಕೆಲಸಗಳನ್ನು ಈ ಚಳವಳಿಗಳು ಮಾಡುತ್ತಾ ಬಂದಿವೆ. ಈ ಕಾರಣದಿಂದಾಗಿ ಆಳುವವರು ಕೋಮುವಾದಿಗಳು, ಜಾತಿವಾದಿಗಳಾಗಿದ್ದರೂ ಸಾಂವಿಧಾನಿಕ ನಡವಳಿಕೆಗಳನ್ನು ಅನಿವಾರ್ಯವಾಗಿ ರೂಡಿಸಿಕೊಳ್ಳಬೇಕಾಯಿತು.
ಕಾಲ ಸರಿದಂತೆ ತಾರತಮ್ಯಗಳಾಚೆಗಿನ ಸಮತೆಯ ಸಮಾಜವೊಂದು ರೂಪುಗೊಳ್ಳಬಹುದು ಎಂಬ ಹಿರಿಯರ ಕನಸು ಈಗ ವಿಫಲವಾಗಿದೆ. ಜಾತಿ ಧರ್ಮಗಳ ಹೆಸರಿನಲ್ಲೇ ಅಸಾಂವಿಧಾನಿಕ ಕೃತ್ಯಗಳು ನಡೆಯುತ್ತಿವೆ.
ದಲಿತ- ಮಹಿಳೆಯರ- ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗುತ್ತಿವೆ. ವ್ಯವಸ್ಥಿತವಾಗಿ ಸಂವಿಧಾನವನ್ನು ಜನರನಂಬಿಕೆಯಾಚೆಗೆ ತಳ್ಳುವ, ಅದರ ಮೂಲ ಆಶಯಗಳಾದ ಧರ್ಮನಿರಪೇಕ್ಷತೆ ಮತ್ತು ಬಂಧುತ್ವವನ್ನು ʼಧರ್ಮವಿರೋಧʼ ಎಂಬಂತೆ ಬಿಂಬಿಸುವ ಸಮಾಜವಿರೋಧಿಗಳ ಕೆಲಸ ಸ್ವಲ್ಪಮಟ್ಟಿಗೆ ಸಫಲವಾಗುತ್ತಿದೆ. ಈ ಕಾಲದಲ್ಲಿ ಮುನ್ನಲೆಗೆ ಬರಬೇಕಿದ್ದ ನಿರುದ್ಯೋಗ, ಜಾತೀಯತೆ, ಲಿಂಗತಾರತಮ್ಯ ಮತ್ತು ಶೈಕ್ಷಣಿಕ ಆಶಯಗಳು ಹಿನ್ನೆಲೆಗೆ ಸರಿದು ಧರ್ಮ ಮತ್ತು ಕ್ರೂರಜಾತೀಯತೆಗಳು ಮೆರೆಯುತ್ತಿವೆ. ಈ ಸಂದರ್ಭವನ್ನು ಸಂವಿಧಾನದ ಜೊತೆಗೇ ಎದುರಿಸಬೇಕಾಗಿದೆ. ಯಾಕೆಂದರೆ, ಸಂವಿಧಾನದಲ್ಲಿ ಮಾತ್ರವೇ ಸಹಜ- ಸಹಬಾಳ್ವೆಯ ಮಾದರಿಗಳಿವೆ. ಮೈತ್ರಿ- ಕಾರುಣ್ಯದ ಆಶಯಗಳಿವೆ. ಸಹಜೀವಿಗಳನ್ನು ತಮ್ಮಂತೆ ಕಾಣುವ, ಎಂತಹಾ ಸಂದರ್ಭದಲ್ಲೂ ವ್ಯಕ್ತಿ ಘನತೆಯನ್ನು ಕಾಪಾಡಿಕೊಳ್ಳುವ, ಇನ್ನೊಬ್ಬರ ಬದುಕುಗಳನ್ನು ಮುರುಟಿ ಹೋಗದಂತೆ ತಡೆಯುವ ಕ್ರಿಯಾತ್ಮಕ ಪಾಠಗಳಿವೆ ಮತ್ತು ಎದೆಯಾಳದ ಆಶಯಗಳೇ ನಮ್ಮನ್ನು ಕೈಹಿಡಿದು ನಡೆಸುವ ಬದುಕಿನ ಕ್ರಮವಿದೆ. ಈ ಕಾರಣಕ್ಕಾದರೂ ನಮ್ಮ ಸಂವಿಧಾನ ನಮ್ಮೆಲ್ಲರ ಬದುಕಿನ ಮೂಲಬಿತ್ತಿಯಾಗಬೇಕಿದೆ.
ಈ ಕಾರಣಕ್ಕಾಗಿ ನಾವು ಬದುಕುತ್ತಿರುವ ಕಾಲ ಮತ್ತು ದೇಶದ ಧರ್ಮ ಸಂವಿಧಾನವಾಗಬೇಕಾಗಿದೆ. ಕೊಲ್ಲುವ ಬಾμÉಗೆ ಉತ್ತರವಾಗಿ, ಹೊಸಹತಾರಗಳೊಂದಿಗೆ ನಮ್ಮೆದುರು ನಿಂತಿರುವ ಸಾಮ್ರಾಜ್ಯಶಾಹಿ, ಬಂಡವಾಳಶಾಹಿಶಕ್ತಿಗಳ ವಿರುದ್ಧದ ಒಡಲಹಾಡಾಗಿ ನಮ್ಮ ಸಂವಿಧಾನ ಹೊಮ್ಮಬೇಕಿದೆ. ಭೂಮಿ- ವಸತಿ- ಉದ್ಯೋಗವಂಚಿತರ, ಜಾತಿಯ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾದವರ, ಜಗತ್ತಿನ ಅರ್ದದಷ್ಟು ಜನಸಂಖ್ಯೆಯಿದ್ದರೂ ದ್ವಿತೀಯ ದರ್ಜೆಯ ಬದುಕನ್ನು ನಡೆಸುತ್ತಿರುವ ಮಹಿಳೆಯರ ಕಣ್ಣದಾರಿಯಾಗಿ ನಮ್ಮ ಸಂವಿಧಾನ ರೂಪು ತಳೆಯಬೇಕಾಗಿದೆ. ಆ ಮೂಲಕ ಭಾರತಕ್ಕೆ ಅಂಟಿರುವ ಅಸಮಾನತೆಯ ಕಳಂಕವನ್ನು ತೊಳೆಯಬೇಕಿದೆ.
ಮನೆಮನೆಗೂ ಸಂವಿಧಾನ ಎಂದರೆ, ಕೇವಲ ಸಂವಿಧಾನದ ಆಶಯಗಳ ಅಕ್ಷರರೂಪವಲ್ಲದೆ ಗತಿಯಿಲ್ಲದವರ ಊರು ಗೋಲಾಗಬೇಕಿದೆ. ಕರ್ನಾಟಕ ಸರ್ಕಾರ ಸಮಾಜಮುಖಿ ಕಾರ್ಯಕ್ರಮಗಳೊಟ್ಟಿಗೆ ಸಂವಿಧಾನವನ್ನು ಮನೆಮನೆಗಳಿಗೆ ತಲುಪಿಸುತ್ತಿರುವುದು ಮಹತ್ತರವಾದ ಸಂಗತಿ. ಯಾಕೆಂದರೆ ಆಶಯಗಳನ್ನು ಅಕ್ಷರರೂಪದಲ್ಲಿ ಮಾತ್ರವೇ ಹೊಂದಿರುವ ಬೃಹತ್ ಜನಸಮುದಾಯ ನಮ್ಮದು. ಆಡಿದ ಮಾತುಗಳು ಗಂಟಲಿನಿಂದ ಹೊರಟು ಗಾಳಿಯಲ್ಲಿ ಲಯವಾಗಿ ಬಿಡುವ ಮತ್ತು ಅಸಮಾನತೆಯನ್ನು ಇದ್ದ ಹಾಗೆ ಉಳಿಸಿ ಕೊಳ್ಳುವ ಪ್ರಕ್ರಿಯೆಗಳು ಇಲ್ಲಿಯವರೆಗೆ ನಮ್ಮನ್ನು ದಿಕ್ಕೆಡಿಸಿವೆ..
ಈಗ ಮಾತುಗಳು ದೀಪದರೂಪತಾಳುವ ಹೊತ್ತು. ಆ ಬೆಳಕಿನಲ್ಲಿ ನಾವು ನಮ್ಮ ಸಂವಿಧಾನವನ್ನೂ, ಆ ಮೂಲಕ ಸಮಾನತೆಯನ್ನವಕಾಶ ನಮ್ಮ ಮನೆಬಾಗಿಲಲ್ಲಿದೆ.
[t4b-ticker]

You May Also Like

More From Author

+ There are no comments

Add yours