ಚಿಕ್ಕಮಗಳೂರು: ಎರಡು ತಿಂಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಹಿರಿಯ ರಾಜಕಾರಣಿ, ಮಾಜಿ ಶಾಸಕ ವೈ.ಎಸ್.ವಿ. ದತ್ತ ಮರಳಿ ಜೆಡಿಎಸ್ ಗೆ ಬಂದಿದ್ದಾರೆ.
ಕಾಂಗ್ರೆಸ್ ನಿಂದ ಕಡೂರು ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಇಂಗಿತದಿಂದ ಎರಡು ತಿಂಗಳ ಹಿಂದೆ ದತ್ತಾ ಮೇಷ್ಟ್ರು ದಳ ಪಾಳಯ ತೊರೆದಿದ್ದರು.
ಆದರೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದರು. ಇದೀಗ ದತ್ತ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮನವೊಲಿಸಿದ್ದಾರೆ.
ಬುಧವಾರ ದೇವೇಗೌಡರನ್ನು ಭೇಟಿ ಮಾಡಿದ್ದ ದತ್ತಾ ಮಾತುಕತೆ ನಡೆಸಿದ್ದರು. ಇಂದು ಕಡೂರು ತಾಲೂಕಿನ ಯಗಟಿ ಮನೆಗೆ ರೇವಣ್ಣ, ಪ್ರಜ್ವಲ್ ಭೇಟಿ ನೀಡಿದ ಬಳಿಕ ಜೆಡಿಎಸ್ ಸೇರಿ ಕಡೂರಿನಿಂದ ಸ್ಪರ್ಧೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ.
ಬಳಿಕ ಮಾತನಾಡಿದ ರೇವಣ್ಣ, ದತ್ತನ ಬಳಿ ಇರುವುದು ಎರಡೇ ಎರಡು. ಒಂದು ಪಂಚೆ, ಒಂದು ಶರ್ಟ್ ಅಷ್ಟೇ. ನಾನು ಸಚಿವನಾಗಿದ್ದಾಗ ಕಾರು ಕೊಡಿಸುತ್ತೇನೆ ಎಂದಿದ್ದೆ, ಆದರೆ, ಬೇಡ ಸರ್ ನನಗೆ ಆಟೋ ಸಾಕು ಎಂದಿದ್ದರು ಎಂದರು.
18ನೇ ತಾರೀಕಿನಂದು ದತ್ತಾ ನಾಪಪತ್ರ ಸಲ್ಲಿಕೆ ಮಾಡುತ್ತಾರೆ. ಅಂದು ಎಷ್ಟೆ ಕಷ್ಟವಾದರೂ ದೇವೆಗೌಡರು ಬರುತ್ತಾರೆ, ಬಂದೇ ಬರುತ್ತಾರೆ. ದತ್ತನ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಪಕ್ಕದಲ್ಲಿ ಕೂತಿರ್ತಾರೆ. ನಾನು ಬದುಕಿರುವವರೆಗೆ ದತ್ತನ ಕೈ ಬಿಡಬಾರದು ಎಂದು ಹೇಳಿದ್ದಾರೆ. ನೀವು ಬೇರೆ ಯೋಚನೆ ಮಾಡಬೇಡಿ, ದೇವೇಗೌಡರ ಮಾತನ್ನು ನಾನು, ದತ್ತ, ನೀವು ಎಲ್ಲಾ ಪಾಲಿಸಬೇಕು. ದತ್ತನನ್ನು ಶಾಸಕ ಮಾಡಲೇಬೇಕೆಂದು ದೇವೇಗೌಡರು ಹೇಳಿದ್ದಾರೆ. ನಮ್ಮ ಮನೆ ಎಲೆಕ್ಷನ್ ಅಂತ ಚುನಾವಣೆ ಮಾಡುತ್ತೇವೆ. ನಮಗೆ ಹೊಳೆನರಸೀಪುರ-ಕಡೂರು ಬೇರೆ-ಬೇರೆ ಅಲ್ಲ, ನಾನು ದತ್ತ ಜೊತೆ ಇರುತ್ತೇನೆ ಎಂದು ರೇವಣ್ಣ ಹೇಳಿದರು.
[t4b-ticker]
+ There are no comments
Add yours