ಹೊಸದುರ್ಗ: ಸರ್ಕಾರ ಜಿಲ್ಲೆಯಲ್ಲಿ ಬರಗಾಲ ಘೋಷಣೆ ಮಾಡಿದೆ. ಯಾವ ರೈತರ ಬಳಿಯೂ ರಾಗಿಯಿಲ್ಲ ಹೀಗಿರುವಾಗ ಜಿಲ್ಲಾಧಿಕಾರಿಗಳು ಯಾವುದೇ ಜನಪ್ರತಿನಿಧಿಗಳು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಸೂಚನೆ ನೀಡಿದೆ, ಏಕಾಏಕಿ ರಾಗಿ ಖರೀದಿ ಕೇಂದ್ರ ಆರಂಭಿಸಲು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಆಡಳಿತ ವೈಫಲ್ಯದಿಂದ ಕೂಡಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ (B.G.Govindappa)ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಬೇರೆ ಅಧ್ಯಯನ ನಡೆಸಿ, ಪರಿಹಾರ ನೀಡಲು ಮುಂದಾಗಿದೆ. ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆಯಲ್ಲಿ ಕಳೆದ ಬಾರಿ ಸುರಿದ ವಾಡಿಕೆ ಮಳೆ, ಈ ಬಾರಿಯಾದ ಮಳೆ, ರಾಗಿ ಬಿತ್ತನೆ ಬೀಜ ನೀಡಿದ ಬಗ್ಗೆ ಮಾಹಿತಿ, ಬಿತ್ತನೆ ಮಾಡಿರುವ ರೈತರು, ಅವರ ಸ್ಥಿತಿ, ಕಟಾವು ಆಗಿರುವ ರಾಗಿ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಿ ನಂತರ ಮುಂದಿನ ಕಾರ್ಯಗಳಿಗೆ ಒತ್ತು ನೀಡಬೇಕಾಗಿತ್ತು. ಆದರೆ ತಮ್ಮ ಕರ್ತವ್ಯ ಮರೆತು, ಪ್ರತಿಷ್ಠೆಗಾಗಿ ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಿದರು.
ಈ ಹಿಂದೆ ಹೊಸದುರ್ಗದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ, ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಅದರ ತನಿಖೆ ಹಂತ ಯಾವುದು ಪೂರ್ಣಗೊಂಡಿಲ್ಲ. ತಾಲ್ಲೂಕಿನ ರೈತರಿಗೆ ಇನ್ನೂ ರಾಗಿ ಹಣ ಸಂದಾಯವಾಗಿಲ್ಲ. ಇದನ್ನೆಲ್ಲಾ ಮರೆತ ಜಿಲ್ಲಾಧಿಕಾರಿಗಳು ರಾಗಿ ಖರೀದಿ ಪ್ರಾರಂಭ ಮಾಡಲು ಹೊರಟಿರುವುದು ವಿಪರ್ಯಾಸವಾಗಿದೆ. ತಾಲ್ಲೂಕಿನ ರೈತರು ಹಣ ನೀಡದೆ, ರಾಗಿ ಖರೀದಿ ಆರಂಭಿಸಲು ಬಿಡುವುದಿಲ್ಲ. ರಾಗಿ ಖರೀದಿ ಕೇಂದ್ರ ಮಾಡಲೇ ಬೇಕಿದ್ದರೆ, ಮೊದಲು ತಾಲ್ಲೂಕಿನ ರೈತರಿಗೆ ಹಣ ಪಾವತಿಸಿ.
ಮೂರು ಬಾರಿ ಆಹಾರ ನಿಗಮದ ಇಲಾಖೆ ಬಳಿ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಿಲ್ಲ, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಜವಾಬ್ದಾರಿ ಮರೆತಿದ್ದಾರೆ.
ರೈತರು ಹಾಗೂ ಕೃಷಿ ಇಲಾಖೆ ಜೊತೆ ಸಭೆ ನಡೆಸಿ, ವಾತ್ಸವ ಅರಿತುಕೊಳ್ಳಬೇಕು. ಬಾರ ಪರಿಹಾರ ಬಂದಿಲ್ಲ ಇನ್ಸೂರೆನ್ಸ್ ದೊರೆತಿಲ್ಲ, ಈ ವಿಚಾರಗಳ ಬಗ್ಗೆ ಗಮನಹರಿಸಿ, ನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು.
ರೈತರು ಬೆಳೆದಿರುವ ರಾಗಿ ಕುರಿತು ಕೃಷಿ ಇಲಾಖೆ ಬಳಿ ದೃಢೀಕರಣ ತೆಗೆದುಕೊಳ್ಳಬೇಕು. ರೈತರ ಬಳಿ ರಾಗಿಯಿಲ್ಲ. ಹೀಗಿರುವಾಗ ಯಾರೂ ಮಧ್ಯಸ್ಥಗಾರರಿಗೆ ಅನುಕೂಲವಾಗಲೆಂದು ಜಿಲ್ಲಾಧಿಕಾರಿಗಳು ಈ ತೀರ್ಮಾನ ಕೈಗೊಂಡಿರಬಹುದು. ರಾಗಿ ಖರೀದಿ ಕೇಂದ್ರ ಆರಂಭದಿಂದ ರೈತರಿಗೆ ಉಪಯೋಗವಿಲ್ಲ, ಕೇಂದ್ರದ ಅವಶ್ಯಕತೆಯೂ ಸಹ ಇಲ್ಲ ಇದನ್ನು ಇಲ್ಲಿಗೆ ನಿಲ್ಲಿಸಿ ಎಂದರು.
+ There are no comments
Add yours