ಹೊಳಲ್ಕೆರೆ 🙁 Holalakere) ಭಾರತದಲ್ಲಿ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಸಿಗಲಿ ಎನ್ನುವ ಆಸೆಯಿಂದ ದೇಶದ ಪ್ರಧಾನಿ ನರೇಂದ್ರಮೋದಿರವರು ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಭರಮಸಾಗರ ಹೋಬಳಿಯ ಕೊಳಾಳ್ ಗ್ರಾಮದಲ್ಲಿ ಒಂದು ಕೋಟಿ ಹದಿನೆಂಟು ಲಕ್ಷ ರೂ. ಹಾಗೂ ಹಂಪನೂರಿನಲ್ಲಿ ಒಂದು ಕೋಟಿ ಒಂಬತ್ತು ಲಕ್ಷ ರೂ.ವೆಚ್ಚದಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ಕೊಳಾಯಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಯಳಗೋಡು ಮುದ್ದಾಪುರಕ್ಕೆ ಹೊಸಪೇಟೆ ಡ್ಯಾಂನಿಂದ ನೀರು ಪೂರೈಸಲಾಗುತ್ತಿದೆ. ಭರಮಸಾಗರಕ್ಕೆ ಶಾಂತಿಸಾಗರ ಹಾಗೂ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ಒದಗಿಸಲಾಗುತ್ತಿದೆ. ಗುಣಮಟ್ಟದ ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಯಾವುದೇ ರೀತಿಯ ರೋಗ ರುಜಿನಗಳಿಗೆ ಜನ ತುತ್ತಾಗಬಾರದೆಂದರೆ ಶುದ್ದ ಕುಡಿಯುವ ನೀರು ಬೇಕು. ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿರುವ ಪ್ರಧಾನಿ ಮೋದಿರವರು ಕೋವಿಡ್ ಸಂದರ್ಭದಿಂದ ಹಿಡಿದು ಇಲ್ಲಿಯತನಕ ಎಂಬತ್ತು ಕೋಟಿ ಜನರಿಗೆ ಉಚಿತ ಅಕ್ಕಿಯನ್ನು ಕೊಡುತ್ತಿದ್ದಾರೆ. ಪಾಕಿಸ್ತಾನ, ಶ್ರೀಲಂಕಾದಲ್ಲಿ ಒಂದು ಕೆ.ಜಿ.ಅಕ್ಕಿಗೆ ನಾಲ್ಕು ನೂರು ರೂ. ನೀಡಿ ಸಾಲಿನಲ್ಲಿ ನಿಲ್ಲಬೇಕು. ನಮ್ಮ ದೇಶದಲ್ಲಿ ಅಂತಹ ಕೆಟ್ಟ ಪರಿಸ್ಥಿತಿಯಿಲ್ಲ ಎಂದು ಪ್ರಧಾನಿ ಮೋದಿರವರ ಜನಪರ ಕಾಳಜಿಯನ್ನು ಗುಣಗಾನ ಮಾಡಿದರು.
ಇದನ್ನೂ ಓದಿ: ಗಂಡನ ಮನೆಯಲ್ಲಿ ವರದಕ್ಷಣೆ ಕಿರುಕುಳ ಮಹಿಳೆ ಆತ್ಮಹತ್ಯೆ
ಪ್ರಧಾನಿ ಮೋದಿ ಶ್ರಿಮಂತ ಕುಟುಂಬದಿಂದ ಬಂದವರಲ್ಲ. ರೈಲ್ವೆ ಸ್ಟೇಷನ್ನಲ್ಲಿ ಚಹ ಮಾರಿಕೊಂಡಿದ್ದ ಸಾಮಾನ್ಯ ಮನುಷ್ಯ ಈಗ ದೇಶದ ಪ್ರಧಾನಿಯಾಗಿರುವುದರಿಂದ ಪ್ರತಿಯೊಬ್ಬರ ಕಷ್ಟ-ಸುಖ ಅರ್ಥಮಾಡಿಕೊಳ್ಳುತ್ತಾರೆ. ತನ್ನ ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಕೆಲವೇ ಗಂಟೆಗಳಲ್ಲಿ ಕಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಂತಹ ದೇಶಭಕ್ತಿಯುಳ್ಳ ಪ್ರಧಾನಿ ನಮಗೆ ಸಿಕ್ಕಿರುವುದು ಪುಣ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ವನಜಾಕ್ಷಮ್ಮ, ನಿರಂಜನಮೂರ್ತಿ, ಮಂಜುನಾಥ್, ಕಲ್ಲೇಶ್, ರಾಜಣ್ಣ, ಶಿವಮೂರ್ತಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[t4b-ticker]
+ There are no comments
Add yours