ಹಿರಿಯೂರು: ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ 100 ಕಿ.ಮೀ. ದೂರ ಇರುವ ಅಜ್ಜಂಪುರ ತಾಲ್ಲೂಕಿನ ನಾನು ಬೇಕೋ ಅಥವಾ 500 ಕಿಲೋ ಮೀಟರ್ ದೂರದಿಂದ ಬಂದು ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬೇಕೋ? ಎಂಬುದನ್ನು ಮತದಾರರು ನಿರ್ಧರಿಸಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಹಿಂದಿನ ಹತ್ತು ವರ್ಷಗಳಿಂದ ನಿಮ್ಮ ಮನೆಯ ಮಗನಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಭ್ರಷ್ಟಾಚಾರ, ಜಾತಿತಾರತಮ್ಯ ಆರೋಪಗಳಿಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದೇನೆ.
ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿರೋಧ ಪಕ್ಷದವರಿಗೆ ನಮ್ಮ ಶಕ್ತಿ ತೋರಿಸಬೇಕು ಎಂದು ಚಂದ್ರಪ್ಪ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಜವಾಬ್ದಾರಿಯಿಂದ ಚುನಾವಣೆ ಎದುರಿಸುವ ಮೂಲಕ ನಮ್ಮ ಅಭ್ಯರ್ಥಿಯನ್ನ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವಂತೆ ಶ್ರಮಿಸಬೇಕು. ಏ 5 ರಿಂದ ಖಂಡೇನಹಳ್ಳಿ ಭಾಗದಿಂದ ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತೇವೆ. ನಮ್ಮ ಪಕ್ಷ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ಮತ ಪಡೆಯಲು ನಮಗೆ ಶ್ರೀರಕ್ಷೆಯಾಗಿದ್ದು, ಯೋಜನೆಗಳ ಹೆಸರಿನಲ್ಲಿ ಮತ ಯಾಚಿಸೋಣ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಶೇ 76 ರಷ್ಟು ಜನರು ನೆಮ್ಮದಿಯ ಬದುಕು ನಡೆಸುತ್ತಿರುವ ಬಗ್ಗೆ ಸಮೀಕ್ಷೆ ಮೂಲಕ ಸಿಎಂ ಮತ್ತು ಡಿಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ತಂತಮ್ಮ ಬೂತುಗಳಲ್ಲಿನ ಸಫಲತೆ, ವಿಫಲತೆಗೆ ಮುಖಂಡರೇ ಹೊಣೆಯಾಗಬೇಕಾಗುತ್ತದೆ ಎಂದು ಸುಧಾಕರ್ ಎಚ್ಚರಿಸಿದರು.
ಮಾಜಿ ಶಾಸಕ ಎವಿ. ಉಮಾಪತಿ, ಜಿಎಸ್ ಮಂಜುನಾಥ್, ಕೆಪಿಸಿಸಿ ಸದಸ್ಯ ವಿಜಯ ಕುಮಾರ್, ಡಿಟಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ತಾಜ್ ಪೀರ್ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಆರ್ ನಾಗೇಂದ್ರ ನಾಯ್ಕ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ಎಸ್.ಆರ್. ತಿಪ್ಪೇಸ್ವಾಮಿ, ಕಲ್ಲಹಟ್ಟಿ ತಿಪ್ಪೇಸ್ವಾಮಿ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಕಲ್ಲಹಟ್ಟಿ ಹರೀಶ್, ಬಿಎನ್ ಪ್ರಕಾಶ್, ಶಿವರಂಜನಿ ಯಾದವ್ ಹಾಗೂ
ನಗರಸಭೆ ಸದಸ್ಯರು, ನೂರಾರು ಮುಖಂಡರು
ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
+ There are no comments
Add yours