ಇಂದಿಗೂ ಸಶಕ್ತ ಜಾನಪದ ಮಾಧ್ಯಮ: ಬಿ.ಧನಂಜಯ

 

ಇಂದಿಗೂ ಸಶಕ್ತ ಜಾನಪದ ಮಾಧ್ಯಮ: ಬಿ.ಧನಂಜಯ
ಚಿತ್ರದುರ್ಗ, ನವೆಂಬರ್30:
ಜಾಗತೀಕರಣ, ಆಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಈ ಸಂದರ್ಭದಲ್ಲಿಯೂ ಜಾನಪದ ಮಾಧ್ಯಮಗಳು ಇಂದಿಗೂ ಸಶಕ್ತ ಮಾಧ್ಯಮಗಳಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಅಭಿಪ್ರಾಯ ಪಟ್ಟರು.
ನಗರದ ತರಾಸು ರಂಗಮಂದಿರದಲ್ಲಿ ಚಿತ್ರದುರ್ಗ ಮದಕರಿ ಯುವಕ ಸಂಘ, ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಿತ್ರದುರ್ಗ ಕರ್ನಾಟಕ ಜಾನಪದ ಪರಿಷತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ನೃತ್ಯ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಮಾಧ್ಯಮ  ಸಂಪ್ರಾದಾಯಿಕ ಹಾಗೂ ಪ್ರಬಲ ಮಾಧ್ಯಮವಾಗಿದ್ದು, ಸಾರ್ವಜನಿಕರಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಲು ಜನಪದ ಕಲಾ ಮಾಧ್ಯಮಗಳು ಇಂದಿಗೂ ಸಶಕ್ತ ಮಾಧ್ಯಮಗಳಾಗಿವೆ. ಜನಪದ ಮಾಧ್ಯಮವನ್ನು ಪೋಷಣೆ ಮಾಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.
ಕಲೆ ಜೀವನದ ಅವಿಭಾಜ್ಯ ಅಂಗ. ಕೇವಲ ಹಣದಿಂದ ಸಂಪದ್ಭರಿತ ಮಾನವ ಸಂಪನ್ಮೂಲ  ಏನಿಸಿಕೊಳ್ಳುವುದಿಲ್ಲ. ಅದರ ಜೊತೆಗೆ ಆರೋಗ್ಯ, ಕಲೆಯೂ ಮುಖ್ಯ. ಆಗ ಮಾತ್ರ ಆರೋಗ್ಯಯುತ ಸಂಪನ್ಮೂಲ ನಿರ್ಮಾಣವಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಜಾಗತೀಕರಣದ ಈ ಸಂದರ್ಭದಲ್ಲಿ ಪರಂಪರೆಯ ಅರಿವಿನ ಸಂಕೇತವಾಗಿರುವ ಜನಪದ ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವೈವಿದ್ಯಮವಾದ ನಮ್ಮ ಬದುಕಿನ ಮೇಲೆ ಆಧುನಿಕತೆ ಪ್ರಭಾವ ಬೀರಿರುವುದರಿಂದ ನಮ್ಮ ಪಾರಂಪರಿಕ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಕಲಾ ಪ್ರಕಾರಗಳು ಆಧುನಿಕತೆಗೆ ತಕ್ಕಂತೆ ಮುಖಾಮುಖಿಯಾಗಬೇಕಿದೆ ಎಂದು ಹೇಳಿದರು.
ಜನಪದ ಕಲೆಗಳು ಸಮಾಜಕ್ಕೆ ಮೌಲ್ಯ, ನೀತಿ ಹಾಗೂ ಸಂದೇಶಗಳನ್ನು ಹೇಳುತ್ತವೆ. ಜನಪದ ಕಲೆ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿ ಬದುಕಿನ ಸತ್ವ ಅಡಗಿದೆ. ಹಾಗಾಗಿ ಜನಪದ ಕಲೆಗಳ ಉಳಿವಿಗಾಗಿ ಹೊಸ ರೂಪ ನೀಡಬೇಕಾಗಿದೆ. ಆಧುನಿಕತೆಯ ಈ ಸಂದರ್ಭದಲ್ಲಿ ಜನಪದ ಸಂಸ್ಕøತಿ ಮರುಹುಟ್ಟು ಪಡೆಯುತ್ತಿದೆ. ಜಾನಪದ ಕಲಾವಿದರು ಉಪಯೋಗಿಸುವ ವಾದ್ಯಗಳು ವಸ್ತುಗಳು ತನ್ನ ಮೂಲ ತತ್ವನ್ನು ಉಳಿಸಿಕೊಂಡು ಹೊಸತನಕ್ಕೆ ಮುಖಾಮುಖಿಯಾಗಬೇಕಿದೆ ಎಂದು ಹೇಳಿದರು.
ಜಾನಪದ ಕಲೆ, ಸಾಹಿತ್ಯ ಮತ್ತು ಸಂಗೀತ ಎಲ್ಲ ಕಲೆಗಳಿಗೂ ಬೇರು. ಆಧುನಿಕತೆ ಕಲೆಗೆ ತಕ್ಕಂತೆ ಜಾನಪದ ಕಲೆ, ಸಾಹಿತ್ಯವನ್ನು ಉಳಿಸಬೇಕಿದೆ. ಇದರಿಂದ ಜಾನಪದ ಪರಂಪರೆ ಹಾಗೂ ಕಲಾವಿದರೂ ಉಳಿಯುವರು ಎಂದು ಅಭಿಪ್ರಾಯಪಟ್ಟರು.
ಜಾನಪದ ನೃತ್ಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ತತ್ವಪದಗಳು, ಭರತನಾಟ್ಯ, ರಂಗಗೀತೆಗಳು, ಗೋರವರ ಕುಣಿತ, ಭಜನೆ, ಜೋಗಿ ಕುಣಿತ ಹಾಗೂ ಕೋಲಾಟ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಹಿರಿಯ ಕಲಾವಿದರಾದ ವಿದ್ವಾನ್ ತಿಪ್ಪೇಸ್ವಾಮಿ, ಹಿರಿಯ ಕಲಾವಿದ ಮೂರ್ತಪ್ಪ, ಚಿತ್ರದುರ್ಗ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎ.ನಾಗರಾಜ್, ವದ್ದಿಕೆರೆ ಗುರು ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜ್ ಸೇರಿದಂತೆ ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours