ಹೊಸದುರ್ಗ: ಸಂವಿಧಾನ ಜಾಗೃತಿ ಜಾಥಾ ಒಂದು ಅವಿಸ್ಮರಣೀಯ ಕಾರ್ಯಕ್ರಮ. ನಮ್ಮ ಭಾರತೀಯ ಸಂವಿಧಾನ ಯುದ್ಧಕಾಲ ಮತ್ತು ಶಾಂತಿ ಕಾಲದಲ್ಲಿ ಜನರನ್ನು ಸೌಹಾರ್ದ ಭಾವನೆಯಲ್ಲಿ ಇಡುತ್ತದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯು ಸಂವಿಧಾನದ ಆಶಯ ಮತ್ತು ಮಹತ್ವವನ್ನು ಅರ್ಥೈಸಿಕೊಂಡರೆ, ದೇಶ ಎಂದಿಗೂ ಸೋಲುವುದಿಲ್ಲ. ಸಂವಿಧಾನ ಬೇಡಿದ್ದನ್ನು ನೀಡುವ ಕಲ್ಪತರು ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಹೆಚ್. ಬಿಲ್ಲಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಅಶೋಕ ರಂಗ ಮಂದಿರದಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸದುರ್ಗ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಒಂದು ಬಡಕುಟುಂಬದಲ್ಲಿ ಜನಿಸಿದ ನಾನು ಓದಿನ ಮೂಲಕ ಹೈಕೋರ್ಟ್ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೇನೆ ಎಂದರೆ, ನನಗೆ ನನ್ನ ಸಂವಿಧಾನ ಕೊಟ್ಟ ಹಕ್ಕು ಮತ್ತು ಅವಕಾಶದಿಂದ. ಅಬ್ದುಲ್ ಕಲಾಂ ರಂತಹ ವ್ಯಕ್ತಿ ಈ ದೇಶದ ರಾಷ್ಟ್ರಪತಿ ಆಗಿದ್ದು, ಸಂವಿಧಾನದಿಂದ. ದೇಶದ ಎಲ್ಲರೂ ಸಮಾನತೆಯಿಂದ ಸ್ವಾತಂತ್ರ್ಯವಾಗಿ ಬಾಳುವಂತಹ ಹಕ್ಕುಗಳನ್ನು ಕಲ್ಪಿಸಿದೆ. ನಮ್ಮದು ಜ್ಯಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ವಾಸಿಸುವ ಎಲ್ಲರೂ ಸಹೋದರರಂತೆ ಬದುಕಿ ಬಾಳಬೇಕು. ಮಕ್ಕಳಿಗೆ ಒಳ್ಳೆಯ ಮೌಲ್ಯಯುತ ಶಿಕ್ಷಣ, ಸಂಸ್ಕಾರ, ಸಂವಿಧಾನದ ಆಶಯ ಮತ್ತು ಮಹತ್ವವನ್ನು ಹೇಳಿಕೊಟ್ಟಾಗ ಮಾತ್ರ, ಅಂಬೇಡ್ಕರ್ ಕನಸ್ಸು ನನಸ್ಸಾಗುತ್ತದೆ. ಸಮಸಮಾಜ ನಿರ್ಮಾಣ ಹಾಗೂ ಜನರಲ್ಲಿ ಬಂಧುತ್ವ ಭಾವನೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಸ್ತಬ್ಧ ಚಿತ್ರದ ಮೆರವಣಿಗೆ ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಹಿರಿಯೂರು ಸರ್ಕಲ್ ಮತ್ತು ಮದಕರಿ ಸರ್ಕಲ್ ಮೂಲಕ ಅಶೋಕ ರಂಗಮಂದಿರದ ವರೆಗೆ ಸಾಗಿ ಬಂದಿತು. ಈ ಮೆರವಣಿಗೆಯಲ್ಲಿ ಪುರಸಭಾ ಸದಸ್ಯರು, ದಲಿತ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸಂವಿಧಾನದ ಕುರಿತಾದ ಘೋಷಣೆಗಳನ್ನು ಕೂಗುತ್ತ ಹೆಜ್ಜೆ ಹಾಕಿದರು.
ಈ ವೇಳೆ ತಾ.ಪಂ. ಇಒ ಸುನಿಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಾಳಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಶಶಿಧರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯರಾದ ನಾಗರಾಜ್, ಶಂಕರಪ್ಪ, ಜಾಫರ್ ಸಾಧಿಕ್, ಮುಖಂಡರಾದ ಹೆಗ್ಗೆರೆ ಶಂಕ್ರಪ್ಪ, ರಂಗಪ್ಪ, ಕೈನೋಡು ಚಂದ್ರಪ್ಪ, ಮೈಲಾರಪ್ಪ, ಮೂಡಲಗಿರಿ ಮತ್ತು ಮೂರ್ತಪ್ಪ ಸೇರಿದಂತೆ ಸಾರ್ವಜನಿಕರು ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
+ There are no comments
Add yours