ಪಟ್ಟಣ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷ ಗದ್ದುಗೆ ಯಾರಿಗೆ? ರಾಮುಲು ಕೊಟ್ಟಿಲ್ಲ ಗ್ರಿನ್ ಸಿಗ್ನಲ್

 

 

 

 

ಮೊಳಕಾಲ್ಮುರು:ಬಹು ನಿರೀಕ್ಷಿತ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗುವ ಮುನ್ನ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಮೊಳಕಾಲ್ಮುರು ಸತತ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಮೂಲಕ ಭದ್ರಕೋಟೆ ಎಂದು ಸಾಬೀತು ಪಡಿಸಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಮುಲು ಆಶೀರ್ವಾದದಿಂದ ಮೊಳಕಾಲ್ಮುರು ಪಟ್ಟಣ ಪಂಚಾಯತಿಯಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ತಮ್ಮ ವಿಜಯ ಪಾತಕೆ ಹಾರಿಸುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗದ್ದುಗೆ ಏರಲು ಭೂಮಿಕೆ ಸಿದ್ದವಾಗಿದೆ.


ಒಂದು ವರ್ಷ ನಾಲ್ಕು ತಿಂಗಳ ಹಿಂದೆ ಹದಿನಾರು ಸ್ಥಾನಗಳ ಮೊಳಕಾಲ್ಮುರು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತಿದ್ದ ಜನತೆ ಸಚಿವರಾದ ಶ್ರೀ ಬಿ ಶ್ರೀರಾಮುಲು ಮತ್ತು ಬಿಜೆಪಿ ಪಕ್ಷ ನೀಡಿದ ಭರವಸೆಗೆ ಮಾನ್ಯತೆ ನೀಡಿ ಬಿಜೆಪಿಗೆ 8 ಸ್ಥಾನ , ಕಾಂಗ್ರೆಸ್ 6 ಸ್ಥಾನ , ಪಕ್ಷೇತರರಿಗೆ 2 ಸ್ಥಾನ ನೀಡಿತ್ತು. ಚುನಾವಣಾ ಸಂಧರ್ಭದಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿದ್ದ 2 ಪಕ್ಷೇತರರು ಗೆದ್ದ ದಿನವೇ ಸಚಿವರಾದ ಶ್ರೀರಾಮುಲು ಸಮ್ಮುಖದಲ್ಲ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಇದಲ್ಲದೆ ಮಾನ್ಯ ಶಾಸಕರು ಮತ್ತು ಸಂಸದರ ಮತಗಳು ಬಿಜೆಪಿ ಪರ ಇರುವ ಕಾರಣ ಬಿಜೆಪಿಯ ಹಾದಿ ಸುಗಮವಾಗಿದೆ.

ಚುನಾವಣಾ ಪೂರ್ವದಲ್ಲಿ ಪಟ್ಟಣ ಪಂಚಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಎಸ್ಟಿ ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾದ ಕಾರಣ ಬಿ ಜೆ ಪಿ ಎರಡನೇ ವಾರ್ಡನಲ್ಲಿ ಎಸ್ಟಿ ಮಹಿಳೆಗೆ ಟಿಕೆಟ್ ನೀಡಿತ್ತು ಅದರಂತೆ ಆ ವಾರ್ಡನ ಲೀಲಾವತಿ ಪಿ ಆರ್ ಸಿದ್ದಣ್ಣ ಗೆದ್ದು ಅಧ್ಯಕ್ಷ ಸ್ಥಾನಕ್ಕೆ ಹತ್ತಿರದಲ್ಲಿದ್ದರು. ಬದಲಾದ ಸನ್ನಿವೇಶದಲ್ಲಿ ಸರ್ಕಾರ ಹೊರಡಿಸಿದ ಮರು ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮನ್ಯ ಮಹಿಳೆಗೆ ಮೀಸಲಾಗಿತ್ತು. ಇದನ್ನು ಪ್ರಶ್ನಿಸಿ ಕೋರ್ಟ್ ಕದತಟ್ಟಿದ್ದರು. ಆದರೆ ಸರ್ಕಾರ ಹೊರಡಿಸಿದ ಮರು ಆದೇಶದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಎರಡು ಸಾಮಾನ್ಯ ವರ್ಗಕ್ಕೆ ಮೀಸಲಾಗಿ ಅದರಂತೆ ಚುನಾವಣೆಗೆ ಮುಹೂರ್ತ ನಿಗದಿಯಾಗಲಿದೆ.

 

 


ನೂತನವಾಗಿ ಆಯ್ಕೆಯಾಗಿರುವ ಎಂಟು ಜನ ಬಿಜೆಪಿ ಸದಸ್ಯರು ಮತ್ತು ಇಬ್ಬರು ಪಕ್ಷೇತರರಲ್ಲಿ ಅಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್ನಲ್ಲಿ ಗೆಲುವು ಕಂಡಿರುವ ಲಕ್ಷ್ಮಣ ಪಿ, ಹತ್ತನೇ ವಾರ್ಡ್ ನ ತಿಪ್ಪೇಸ್ವಾಮಿ ಕೆ, ಒಂದನೇ ವಾರ್ಡ್‌ ಮಂಜಣ್ಣ, 9ನೇ ವಾರ್ಡಿನ ರವಿಕುಮಾರ್ ಟಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು ಉಪಾಧ್ಯಕ್ಷ ಸ್ಥಾನ ಇನ್ನುಳಿದ 6 ಮಹಿಳಾ ಸದಸ್ಯರಲ್ಲಿ ಒಬ್ಬರಿಗೆ ದೊರಕುವುದು ಬಹುತೇಕ ಖಚಿತವಾಗಿದೆ.
ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇರುವ ನಾಲ್ವರು ಸದಸ್ಯರ ಪೈಕಿ 6ನೇ ವಾರ್ಡ್ ನ ಲಕ್ಷ್ಮಣ ಪಿ ರವರು ತುಸು ಮಂದೆ ಇದ್ದು ಅಧ್ಯಕ್ಷ ಸ್ಥಾನ ಅವರಿಗೆ ನೀಡಬೇಕೆಂದು ಊರಿನ ಪ್ರಮುಖ ಬಿಜೆಪಿ ಕಾರ್ಯಕರ್ತರು ಮಂಡಲದ ಅಧ್ಯಕ್ಷರಾದ ಡಾ ಮಂಜುನಾಥ ಪಿಎಂ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಗೆದ್ದ ದಿನದಿಂದಲೂ ಸುಮ್ಮನೆ ಕೂರದೆ ತನ್ನ ವಾರ್ಡ್‌ ಮತ್ತು ಪಟ್ಟಣದ ಜನರ ಸಮಸ್ಯೆಗೆ ಧ್ವನಿಯಾಗಿ ಸ್ಪಂದಿಸುತ್ತಿರುವ ಲಕ್ಷ್ಮಣ ರವರು ಯಾದವ ಸಮುದಾಯಕ್ಕೆ ಸೇರಿದವರಾಗಿದ್ದು ಈ ಹಿಂದೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಮುದಾಯವನ್ನು ಬಿಜೆಪಿ ಪರವಾಗಿ ನಿಲ್ಲಿಸಲು ಪ್ರಮುಖ ಪಾತ್ರವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು, ಅದರಂತೆಯೇ ಸಚಿವರಾದ ಶ್ರೀರಾಮುಲು ರವರ ಆಶೀರ್ವಾದ ಲಕ್ಷ್ಮಣನಿಗೆ ಒಲಿದು ಅಧ್ಯಕ್ಷರಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದಷ್ಟೇ ಅಲ್ಲದೆ ಜನಾರ್ದನರೆಡ್ಡಿ ರವರ ಆಶೀರ್ವಾದವು ಇವರ ಮೇಲಿದೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಬಿಜೆಪಿಯ ಮಂಡಲದ ಒಬಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಇವರು ಮಂಡಲ,ಜಿಲ್ಲಾ, ರಾಜ್ಯಮಟ್ಟದ ವರಿಷ್ಠರ ನಿಕಟ ಸಂಪರ್ಕದಲ್ಲಿ ಇರುವ ಲಕ್ಷ್ಮಣ ಅಧ್ಯಕ್ಷ ಸ್ಥಾನಕ್ಕೆ ಹಾಟ್ ಫೇವರೆಟ್ ಆಗಿ ಹೊರಹೊಮ್ಮುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಒಳಗುದಿ-ಬೇಗುದಿ
ಒಂದಡೆ ಬಿಜೆಪಿಯ ಒಗ್ಗಟ್ಟು ಕಂಡು ಸಹಿಸದ ಕಾಂಗ್ರೆಸ್ ನ ಮಾಜಿ ಶಾಸಕರು, ಮತ್ತು ಕಾಂಗ್ರೆಸ್ನ ವರಿಷ್ಠರು ಬಿಜೆಪಿಯ ಒಂದಿಬ್ಬರು ಸದಸ್ಯರನ್ನು ಸಂಪರ್ಕಿಸಿ ತಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುವ ಮಾತುಗಳನ್ನಾಡಿ ಲಾಭ ಗಿಟ್ಟಿಸುವ ಇರಾದೆಯಲ್ಲಿ ತೊಡಗಿರುವುದು ಪಟ್ಟಣದಲ್ಲಿ ಗುಸುಗುಸು ಸುದ್ದಿ ಕೇಳಿ ಬರುತ್ತಿದೆ.

ಈ ಎಲ್ಲಾ ವಿದ್ಯಮಾನಗಳ ಜರುಗುತ್ತಿರುವ ಬೆನ್ನಲ್ಲೇ ಸಚಿವರ ಮತ್ತು ಪಕ್ಷದ ವರಿಷ್ಠರ ಅಂಗಳಕ್ಕೆ ಚಂಡು ವರ್ಗಾವಣೆಗೊಂಡಿದೆ, ಭಿನ್ನಮತೀಯ ಚಟುವಟಿಕೆ ಗಳಿಗೆ ಆಸ್ಪದ ನೀಡದೆ ಭಾರತೀಯ ಜನತಾ ಪಾರ್ಟಿ ಈ ಬಾರಿ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯನ್ನು ತನ್ನದಾಗಿಸಿಕೊಳ್ಳುವುದೇ ಎಂದು ಕಾದುನೋಡಬೇಕಾಗಿದೆ.

[t4b-ticker]

You May Also Like

More From Author

+ There are no comments

Add yours