ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ಐದು ಗ್ಯಾರೆಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಊರುಗಳಲ್ಲಿ ಅತ್ಯಧಿಕ ಲೀಡ್ ನೀಡಿ ಎಂದು ಶಾಸಕ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಕರೆ ನೀಡಿದರು.
ಇಂದು ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಮುದ್ದಾಪುರ, ಚಿಕ್ಕಗೊಂಡನಹಳ್ಳಿ ,ಕೂನಬೇವು,ಮಾಡನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಖಂಡರ ಕಾರ್ಯಕರ್ತರ ಭೇಟಿ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಶ್ರಮಿಕರ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮ ಪಕ್ಷ ನುಡಿದಂತೆ ನಡೆದಿದ್ದು ಇದನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕು. ನಿಮ್ಮ ಪ್ರತಿ ಹಳ್ಳಿಯಲ್ಲಿ ಲೀಡ್ ಕೊಡಲು ಇಂದಿನಿಂದ ಶ್ರಮಿಸಬೇಕು.ಲೀಡ್ ನೀಡಿದರೆ ನಿಮ್ಮ ಶಕ್ತಿ ಸಾಬೀತಾಗುತ್ತದೆ ಎಂದು ಕಾರ್ಯಕರ್ತರು ಮುಖಂಡರಿಗೆ ಉತ್ಸಾಹ ತುಂಬಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಕಳೆದ ಬಾರಿ ಸೋಲು ಅನುಭವಿಸಿದರು ಸಹ ಜನರ ಜೊತೆಗಿದ್ದು ಕೆಲಸ ಮಾಡಿದ್ದಾರೆ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಇದ್ದು ಅವರನ್ನು ಗೆಲ್ಲಿಸುವ ಮೂಲಕ ನಮ್ಮ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಮಟ್ಟದಲ್ಲಿ ಮಾತನಾಡಲು ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲಿ ಬರಗಾಲ ಇದ್ದರು ಸಹ ನಾವು ಜನರನ್ನು ವಲಸೆ ಹೋಗದಂತೆ ನೋಡಿಕೊಂಡಿದ್ದೇವೆ.ಆದರೆ ಡಬಲ್ ಇಂಜಿನ್ ಎನ್ನುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದು ಇಷ್ಟೊಂದು ಬರಗಾಲ ಇದ್ದರು ರಾಜ್ಯಕ್ಕೆ ಒಂದು ರೂಪಾಯಿ ಬಿಡುಗಡೆ ಮಾಡದೇ ಜನವಿರೋಧಿ ನೀತಿ ಅನುಸರಿಸುತ್ತಿದೆ.ರಾಜ್ಯದ ಬಿಜೆಪಿಗರು ಕೇಂದ್ರ ಸರ್ಕಾರಕ್ಕೆ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ನಾವೆಲ್ಲರೂ ಹಗಲಿರುಳು ಶ್ರಮಿಸೋಣ. ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಭೇಟಿ ಮಾಡಿದ್ದು ಉತ್ತಮ ಸ್ಪಂದನೆ ದೊರಕಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಕೇಂದ್ರ ಸರ್ಕಾರ ರಚನೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ, ಮುದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಮಂಗಳಾ ಸಿದ್ದೇಶ್, ಉಪಾಧ್ಯಕ್ಷೆ ಸುಧಾರಾಣಿ, ಚಿಕ್ಕಗೊಂಡನಹಳ್ಳಿ ಗ್ರಾ. ಪಂ.ಅಧ್ಯಕ್ಷೆ ಮಾಂತಮ್ಮಾ ಎಕಾಂತಪ್ಪ, ಉಪಾಧ್ಯಕ್ಷ ಶ್ರೀ ಗಂಗಾಧರ,ಮಾಡನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ಅನಿಲ್ ಕುಮಾರ್,ಕೂನಬೇವು ಗ್ರಾ.ಪಂ.ಅಧ್ಯಕ್ಷೆ ಕವಿತಾ ನಾಗರಾಜ್, ಉಪಾಧ್ಯಕ್ಷೆ ಪೂಜಾರ್ ಮಂಜಣ್ಣ,
ಗ್ರಾಮ ಪಂಚಾಯತಿ ಸದಸ್ಯರುಗಳಾದ ಮೈಲಾರಪ್ಪ, ಶೇಖರಪ್ಪ, ಲೋಕೇಶ್, ರವಿ, ವಾಜೀದ್, ಲಿಂಗಾರೆಡ್ಡಿ, ದೊರೆಸ್ವಾಮಿ, ಸಂತೋಷ, ನಾಗರಾಜ್, ಮುಖಂಡರುಗಳಾದ ರಾಜಪ್ಪ, ಸಿದ್ದೇಶ್, ಬಸವರಾಜ್, ತಿಪ್ಪೇಶ್, ನಿರಂಜನ್, ನಾಗೇಶ್, ಚಿತ್ರಲಿಂಗಪ್ಪ, ತಿಪ್ಪೇಸ್ವಾಮಿ, ರವಿ, ಅಜ್ಜಪ್ಪ, ಬಾಬು, ತಿಪ್ಪಣ್ಣ ಸೇರಿ ಕಾರ್ಯಕರ್ತರು ಭಾಗವಹಿಸಿದ್ದರು.
+ There are no comments
Add yours