ಮೊಳಕಾಲ್ಮೂರು :ದೇಶದ ಪ್ರತಿಯೊಬ್ಬ ನಾಗರಿಕನು ಸಂವಿಧಾನ ಬದ್ದ ಆಶಯಗಳೊಂದಿಗೆ ಸಮಾನತೆಯ ಸಹಬಾಳ್ವೆಯಿಂದ ಸಮಾಜ ಮತ್ತು ಸಮುದಾಯದಲ್ಲಿ ಗೌರವಯುತ ಬದುಕು ನಡೆಸಬೇಕು ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುಜ್ಜಾರಪ್ಪ ತಿಳಿಸಿದರು.
ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಸ್ಪೃಶ್ಯತಾ ನಿವಾರಣ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಕಳೆದಿದೆಯಾದರೂ ಎಸ್ಸಿ ಎಸ್ಟಿ ಮೇಲೆ ದೌರ್ಜನ್ಯವನ್ನು ಮಾಡುತ್ತಿರುವ ಪ್ರಕರಣಗಳನ್ನು ನಾವು ಕೇಳುತ್ತಿದ್ದೇವೆ, ಮೇಲು ಕೀಳು ಎನ್ನುವ ಭಾವವಿಲ್ಲದೆ ಎಲ್ಲರೂ ಸಮಾನ ಎನ್ನುವ ಮನಸ್ಥಿತಿಯಲ್ಲಿ ನಡೆದು ಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಡಿ ಓ ಮೂರಾರ್ಜಿ ಮಾತನಾಡಿ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ದೀನದಲಿತರ ಎಲ್ಲಾ ಸಮುದಾಯದವರು ಸಮಾನ ಬದುಕು ಕಟ್ಟಿಕೊಳ್ಳಲು ಡಾ :ಬಿ. ಆರ್ ಅಂಬೇಡ್ಕರ್ ರವರು ಶ್ರಮವಹಿಸಿ ಭಾರತ ದೇಶದ ಕಾನೂನು ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕಾನೂನಾತ್ಮಕ ಚಿಂತನೆಗಳು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರದ ಓ ಕರಿಬಸಪ್ಪ ಮಾತನಾಡಿ ಭಾರತ ದೇಶದಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಿಲ್ಲ, ಜಾತಿಭೇದ ತಾರತಮ್ಯ ಮಾಡುತ್ತಿದ್ದಾರೆ. ಡಾ : ಬಿ ಆರ್ ಅಂಬೇಡ್ಕರ್ ಸಂಕಲ್ಪ ಎಲ್ಲರೂ ಸಮಾನರು ಮತ್ತು ಸಹಬಾಳ್ವೆಯನ್ನು ನಡೆಸಬೇಕು. ಜಾತಿ ಧರ್ಮ ಬಿಟ್ಟು ನಾವು ಭಾರತೀಯರು ಮಾನವರು ಎನ್ನುವ ದೃಷ್ಟಿಯಲ್ಲಿ ನಡೆದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ ದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮಾಲತಿ, ಎಎಸ್ ಐ ಶರ್ಮಾ, ಗ್ರಾಮ ಲೆಕ್ಕಧಿಕಾರಿ ಪ್ರಶಾಂತ್, ಆನಂದ್, ಪಿಡಿಒ ಹೊನ್ನೂರಪ್ಪ ಮಹಾಂತೇಶ್ ಚಿದಾನಂದಪ್ಪ ಮುಖಂಡರಾದ ಎಚ್ಎನ್ ನಾಗಭೂಷಣ, ಜೆ ಬಿ ಹೇಮಣ್ಣ, ಸಂಗಮ ಮೇಘರಾಜ್ ದಾಸಪ್ಪ ಪೋಲಿಸ್ ವೀರಣ್ಣ, ಇನ್ನು ಮುಂತಾದವರು ಉಪಸ್ಥಿತರಿದ್ದರು
+ There are no comments
Add yours