ಸೆ.19 ರಂದು ಮೆಗಾ ಲೋಕ್ ಇ-ಅದಾಲತ್

 


ಚಿತ್ರದುರ್ಗ, ಆಗಸ್ಟ್ 28:
 ಕೋವಿಡ್-19 ಸಂದರ್ಭದಲ್ಲಿ ಜನರಿಗೆ ತ್ವರಿತ ನ್ಯಾಯ ಹಾಗೂ ಪರಿಹಾರ ಒದಗಿಸಲು ಸೆಪ್ಟೆಂಬರ್ 19 ರಂದು ರಾಜ್ಯಾದ್ಯಂತ ವಿನೂತನವಾಗಿ ಮೆಗಾ ಲೋಕ್ ಇ-ಅದಾಲತ್ ಏರ್ಪಡಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅರವಿಂದ ಕುಮಾರ್ ತಿಳಿಸಿದರು.
 ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಧೀಶರು ಹಾಗೂ ಪತ್ರಕರ್ತರೊಂದಿಗೆ ನಡೆಸಿದ ವೀಡಿಯೋ ಸಂವಾದಲ್ಲಿ ಅವರು ಮಾತಾಡಿದರು.
 ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ವೇಳೆ ಎಲ್ಲ ವರ್ಗದ ಜನರು ತೀವ್ರ ಸಂಕಷ್ಟದಲ್ಲಿದ್ದು, ಈ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಕಾಲದಲ್ಲಿ ಸರ್ವರಿಗೂ ನ್ಯಾಯ, ಪರಿಹಾರ ಒದಗಿಸಲು ಇ-ಅದಾಲತ್ ಏರ್ಪಡಿಸಲಾಗಿದೆ ಎಂದರು.
 ಕಕ್ಷಿದಾರರು ತಮ್ಮ ಮೊಬೈಲ್ ಮೂಲಕ ಮನೆಯಲ್ಲಿಯೇ ಕುಳಿತು ಈ ರಾಜಿ ಸಂಧಾನದಲ್ಲಿ ಭಾಗವಹಿಸಬಹುದಾಗಿದೆ ಹಾಗೂ ತಮ್ಮ ವಕೀಲರ ಮೂಲಕವೂ ಅದಾಲತ್‍ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದಾದ ಎಲ್ಲಾ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತದೆ. ಕ್ರಿಮಿನಲ್, ವಿವಾಹ ವಿಚ್ಛೇದನ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ರಾಜಿ ಸಂಧಾನದ ಪ್ರಕರಣಗಳು ಸೇರಿವೆ.
 ಜಿಲ್ಲಾ ಪ್ರದಾನ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೊಳಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ 1496 ಮೋಟಾರು ವಾಹನ ಅಪಘಾತ ಪ್ರಕರಣಗಳಿದ್ದು, ಇದರಲ್ಲಿ 201 ಇ-ಅದಾಲತ್‍ಗೆ ತೆಗೆದುಕೊಳ್ಳಲಾಗುತ್ತಿದೆ. ಮತ್ತು ಕ್ರಿಮಿನಲ್ ಸೇರಿದಂತೆ ಇತರೆ ಎಲ್ಲ ಸೇರಿ 31,042 ಪ್ರಕರಣಗಳಿದ್ದು, ಇದರಲ್ಲಿ 2429 ಪ್ರಕರಣಗಳನ್ನು ಅದಾಲತ್‍ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ ಸೆಪ್ಟೆಂಬರ್ 18 ರವರೆಗೂ ರಾಜಿ ಸಂಧಾನಕ್ಕೆ ಒಪ್ಪಿ ಬರುವಂತಹ ವ್ಯಾಜ್ಯಪೂರ್ವ ಕ್ರಿಮಿನಲ್, ಬ್ಯಾಂಕ್ ಹಣಕಾಸಿನ ಪ್ರಕರಣ, ಚೆಕ್‍ಬೌನ್ಸ್, ಕಾರ್ಮಿಕ, ವಿದ್ಯುತ್, ವಿಚ್ಛೇದನ ಹೊರತುಪಡಿಸಿ ವೈವಾಹಿಕ ಪ್ರಕಣ, ಭೂ ಸ್ವಾಧೀನ, ಕಂದಾಯ, ಸೇವಾ ವಿಷಯ, ಜನನ ಮರಣ ದಾಖಲೆ ಹಾಗೂ ಇತರೆ ಜೀವನಾಂಶ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವುದರ ಮೂಲಕ ತ್ವರಿತ ನ್ಯಾಯ, ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

 ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಆರಾಧ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ಗಿರೀಶ್ ಉಪಸ್ಥಿತರಿದ್ದರು.


 

[t4b-ticker]

You May Also Like

More From Author

+ There are no comments

Add yours