ದಾವಣಗೆರೆ ಮೇ.28- ಪಠ್ಯಪುಸ್ತಕ ಮರು ಪರಿಷ್ಕರಣೆಯ ಸಂಬಂಧ ಉಂಟಾಗಿರುವ ವಿವಾದ ವಿಚಾರವಾಗಿ ಮುಖ್ಯಮಂತ್ರಿ ಗಳು ಮಧ್ಯಪ್ರವೇಶಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಡನೆ ಮಾತನಾಡಿದ ಅವರು, ಶೈಕ್ಷಣಿಕ ಘನತೆ ಉಳಿಯಬೇಕು ಎಂಬುದು ತಮ್ಮ ಕಳಕಳಿ. ಹಾಗಾಗಿ ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಬೇಕು. ಶೈಕ್ಷಣಿಕ ಘನತೆ ಉಳಿಯಲು ಮುಖ್ಯಮಂತ್ರಿ ಯವರ ಮಧ್ಯಪ್ರವೇಶ ಅನಿವಾರ್ಯ ಎಂದರು.
ತಾವು ಅಧ್ಯಕ್ಷರಾಗಿದ್ದಾಗ ಪಠ್ಯಪುಸ್ತಕ ಪರಿಷ್ಕರಣೆ ಆಗಿತ್ತು. ಅದು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಹಾಗು ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ನಡೆದಿತ್ತು. ಯಾವ ಪಠ್ಯವನ್ನ ಸೇರಿಸಲಾಗಿದೆ, ಬಿಟ್ಟಿದ್ದೇವೆ ಎಂಬುದಕ್ಕೆ ಸ್ಪಷ್ಟ, ನಿರ್ದಿಷ್ಟ ಕಾರಣ ನೀಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಈಗ ಪಠ್ಯಪುಸ್ತಕ ಪರಿಷ್ಕರಣೆ ಆಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗು ಸಂವಿಧಾನ ಆಶಯಕ್ಕೆ ಪಠ್ಯಪುಸ್ತಕ ರಚನೆ ಆಗಬೇಕು. ಈ ಬಾರಿಯ ಮರು ಪರಿಷ್ಕರಣೆಯಲ್ಲಿ ಅನೇಕ ಮುಖ್ಯ ಪಠ್ಯಗಳು ಕೈಬಿಟ್ಟಿರುವುದರಿಂದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತದೆ. ಈ ವಿವಾದ ಬಗೆಹರಿಸಲು ಮುಖ್ಯಮಂತ್ರಿಯವರು ಕೂಲಂಕುಶವಾಗಿ ಪರಿಶೀಲಿಸಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಬರಗೂರು ತಿಳಿಸಿದರು.
+ There are no comments
Add yours