ಬೆಳಗಾವಿ.26 -ಬೆಳಗಾವಿ ತಾಲೂಕಿನ ಕಲ್ಯಾಳ ಬ್ರಿಡ್ಜ್ ಬಳಿ ಕ್ರೂಸರ್ ಪಲ್ಟಿ ಹೊಡೆದು 9 ಮಂದಿ ಕೂಲಿ ಕಾರ್ಮಿಕರು ಹಾಗೂ ಮಂಡ್ಯದ ಬಳಿ ಲಾರಿ ಹಾಗೂ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸೇರಿ 12 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಕೂಲಿ ಕೆಲಸಕ್ಕೆ ಇಂದು ಬೆಳಿಗ್ಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮೂರು ಕ್ರೂಸರ್ ಗಳ ಮಧ್ಯೆ ವೇಗವಾಗಿ ಹೋಗಲು ಚಾಲಕರ ಮಧ್ಯೆ ಪೈಪೋಟಿ ನಡೆದು ಅತಿ ವೇಗವಾಗಿ ಹೋಗುತ್ತಿದ್ದ 12 ಜನರಿದ್ದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಕಲ್ಯಾಳ ಬ್ರಿಡ್ಜ್ ಬಳಿ ಪಲ್ಟಿ ಹೊಡೆದು ಅಪಘಾತಕ್ಕೆ ಹೀಡಾಗಿದೆ.
ಅಪಘಾತದಲ್ಲಿ ಗೋಕಾಕ್ ತಾಲೂಕಿನ ದಾಸನಟ್ಟಿ, ಅಕ್ಕತಂಗೇರಹಾಳ, ಎಂ ಮಲ್ಲಾಪುರದ ಕೂಲಿ ಕಾರ್ಮಿಕರಾದ ಅಡಿಯಪ್ಪ ಚಿಲಭಾವಿ, ಬಸವರಾಜ್ ದಳವಿ, ಬಸವರಾಜ್ ಹನುಮನ್ನವರ್, ಆಕಾಶ್ ರಾಮಣ್ಣ ಗತ್ತಿ, ಫಕಿರಪ್ಪ ಹರಿಜನ, ಮಲಪ್ಪ ಸೇರಿ ಸ್ಥಳದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ಗಾಯಗೊಂಡ ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ನಾಲ್ವರಲ್ಲಿ ಇನ್ನೂ ಇಬ್ಬರು ಸ್ಥಿತಿ ಗಂಭೀರವಾಗಿದ್ದರೆ ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ಬಿದ್ದು ಈ ಅವಘಡ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳ ಪರಾಮರ್ಶೆ ನಡೆಸಿದರು.
ಚಾಲಕನ ಅತಿವೇಗ ನಿರ್ಲಕ್ಷ್ಯ ಪೈಪೋಟಿ ಯಿಂದ ಈ ಅಪಘಾತ ಸಂಭವಿಸಿದ್ದು ಮೃತ ಕೂಲಿಕಾರ್ಮಿಕರ ರೋಧನ ಮುಗಿಲುಮುಟ್ಟಿದೆ. ಮಾರೀಹಾಳ ಪೊಲೀಸರು ಪ್ರಕರಣ ದಾಖಲಿಸಿ ಪಲ್ಟಿ ಹೊಡೆದ ಕ್ರೂಸರ್ ತೆರವುಗೊಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
[t4b-ticker]
+ There are no comments
Add yours