ಬೆಂಗಳೂರು, ಮೇ.೨೫- ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಮರು ಜೀವಬಂದಿದ್ದು, ಇದೀಗ ದಿನಕ್ಕೊಂದು ರುಚಿಕರ ಆಹಾರ ದೊರೆಯುವಂತೆ ಮಾಡಲು ಬಿಬಿಎಂಪಿ ಮುಂದಾಗಿದೆ.ಇಂದಿರಾ ಕ್ಯಾಂಟೀನ್ ಗುಣಮಟ್ಟ ಹಾಗೂ ಆಹಾರ ಬಗೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಬಿಎಂಪಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಿದ್ದು, ಇದರಲ್ಲಿ ಹತ್ತಕ್ಕೂ ಅಧಿಕ ರುಚಿಕರ ಆಹಾರಗಳನ್ನು ಪಟ್ಟಿ ಮಾಡಿಕೊಂಡಿದೆ.ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬಗೆ ಬಗೆಯ ಆಹಾರ ಕ್ಯಾಂಟೀನ್ ನಲ್ಲಿ ದೊರೆಯಬೇಕು. ಈ ನಿಟ್ಟಿನಲ್ಲಿ ವಿಶೇಷವಾದ ಖ್ಯಾದ್ಯಗಳನ್ನು ಕಡಿಮೆ ದರದಲ್ಲಿ ನೀಡಬಹುದು ಎಂದು ಪಾಲಿಕೆಯೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲು ತೀರ್ಮಾನಿಸಿದೆ.ಪರಿಶೀಲಿಸಿ, ಸ್ವಚ್ಛ: ಇನ್ನೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಅಂದಾಜು ೧೭೫ ಇಂದಿರಾ ಕ್ಯಾಂಟೀನ್ ಪೈಕಿ, ಆದರಲ್ಲಿ ೧೬೩ ಇಂದಿರಾ ಕ್ಯಾಂಟೀನ್ ಚಾಲ್ತಿಯಲ್ಲಿವೆ. ಸದ್ಯ ಕ್ಯಾಂಟೀನ್ ಮರು ಜೀವ ಹಿನ್ನೆಲೆ ಇಂದು ನಗರದ ಬಹುತೇಕ ಕಡೆಗಳಲ್ಲಿ ಕ್ಯಾಂಟೀನ್ ಆವರಣಗಳನ್ನು ಸ್ವಚ್ಛಗೊಳಿಸಲಾಯಿತು.
ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯದ ಜಂಟಿ ಆಯುಕ್ತರು, ಅಭಿಯಂತರರು, ಆರೋಗ್ಯಧಿಕಾರಿಗಳು ವಲಯವಾರು ಇಂದಿರಾ ಕ್ಯಾಂಟೀನ್ ಸ್ಥಿತಿ ಗತಿಯನ್ನು ಪರಿಶೀಲಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯವಾರು ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನು ಸಂಬಂಧಪಟ್ಟ ಆಯಾ ವಲಯ ಆಯುಕ್ತರು, ಜಂಟಿ ಆಯುಕ್ತರುಗಳಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗುವುದು ಎಂದು ತಿಳಿಸಿದರು.
ಎಲ್ಲಾ ವಲಯ ಆಯುಕ್ತರು ವಲಯವಾರು ತಂಡಗಳನ್ನು ರಚಿಸಿ ಘನತ್ಯಾಜ್ಯ ವಿಭಾಗ, ಪೌರಕಾರ್ಮಿಕರು, ಇತರೆ ಸಿಬ್ಬಂದಿಗಳ ಮುಖಾಂತರ ಇಂದಿರಾ ಕ್ಯಾಂಟೀನ್ ಸ್ವಚ್ಚತಾ ಕಾರ್ಯ ನಡೆಸಲು ಸೂಚಿಸಿದರು.ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಗುಣಮಟ್ಟ ಹಾಗೂ ರುಚಿಯಲ್ಲಿ ಯಾವುದೇ ರಾಜಿಮಾಡಿಕೊಳ್ಳಬಾರದು. ಇಂದಿರಾ ಕ್ಯಾಂಟೀನ್, ಬೇಸ್ ಕ್ಯಾಂಟೀನ್ ಸ್ಥಾಪನೆಗೆ ಹಾಗೂ ಆಹಾರ ಪೂರೈಕೆಗೆ ಇಂದು ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಗೆ ಹೊಸ ಪ್ರಸ್ತಾವನೆಯನ್ನು ಸಿದ್ದಪಡಿಸಲಾಗುವುದು ಎಂದರು.
ಹೆಚ್ಚುವರಿಯಾಗಿ ವಾರ್ಡಗಳ ಅನುಕೂಲಕ್ಕೆ ತಕ್ಕಂತೆ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಹಗೂ ಮೊಬೈಲ್ ಕ್ಯಾಂಟೀನ್ ಮರು ಚಾಲನೆಗೆ ವರದಿಯನ್ನು ನೀಡಲು ಎಲ್ಲಾ ವಲಯ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
[t4b-ticker]
+ There are no comments
Add yours