ಚಿತ್ರದುರ್ಗ: ಚಿತ್ರದುರ್ಗದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಎ.ನಾರಾಯಣಸ್ವಾಮಿ ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದು ಕೋಟೆ ನಾಡಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಇಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಎ. ನಾರಾಯಣಸ್ವಾಮಿ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬೆಳವಣಿಗೆಯ ಪರಿಣಾಮವಾಗಿ ಪಕ್ಷದ ಕರೆಗೆ ಮಂಗಳವಾರವೇ ಸಂಸದ ಎ.ನಾರಾಯಣಸ್ವಾಮಿ ಅವರು ಕುಟುಂಬ ಸಮೇತ ದೆಹಲಿಗೆ ತೆರಳಿರುದ್ದರು.ಜನರಲ್ಲಿ ಸಹ ಕುತೂಹಲ ಮನೆ ಮಾಡಿತ್ತು. ಈಗ ಅಧಿಕೃತವಾಗಿ ನಾರಾಯಣಸ್ವಾಮಿ ಅವರೇ ಈ ವಿಷಯ ಬಹಿರಂಗಪಡಿಸಿದ್ದು, ಎಡಗೈ ದಲಿತ ಸಮುದಾಯದಿಂದ ಬಂದ ನನ್ನನ್ನು ಬಿಜೆಪಿ ಗುರುತಿಸಿ ಮಂತ್ರಿ ಸ್ಥಾನ ನೀಡಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸದಸ್ಯನಾಗಿರುವುದು ನನ್ನ ಭಾಗ್ಯ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ, ಅಸಹಾಯಕರ ಧ್ವನಿಯಾಗುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
4 ಬಾರಿ ಆನೇಕಲ್ ಶಾಸಕರಾಗಿದ್ದ ನಾರಾಯಣಸ್ವಾಮಿ 2010 ರಲ್ಲಿ ರಾಜ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈಗ ಮೊದಲ ಬಾರಿಗೆ ಚಿತ್ರದುರ್ಗ ಸಂಸದರಾದ ಎ. ನಾರಾಯಣಸ್ವಾಮಿ ಮೊದಲ ಅವಧಿಯಲ್ಲೇ ಕೇಂದ್ರದ ಸಚಿವರಾಗುವ ಮೂಲಕ ಅದೃಷ್ಟವಂತರಾಗಿದ್ದಾರೆ. ಈ ಮೂಲಕ ಬಹುದಿನಗಳಿಂದ ಬಾಕಿ ಇರುವ ದಾವಣಗೆರೆ ಚಿತ್ರದುರ್ಗ ತುಮಕೂರು ನೇರ ರೈಲು ಮಾರ್ಗ ನಿರ್ಮಾಣದ ಕನಸಿಗೆ ಮತ್ತೆ ಸಂತೋಷದ ಕವಲುಗಳು ಒಡೆದಿವೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ದಿನಗಳು ಹತ್ತಿರವಾಗಲಿವೆ ಎಂದು ಚಿತ್ರದುರ್ಗದ ಜನತೆ ಸಂತಸ ವ್ಯಕ್ತಪಡಿಸುತ್ತಾರೆ.
[t4b-ticker]
+ There are no comments
Add yours