ವರದಿ : ಚಿಕ್ಕಪ್ಪನಹಳ್ಳಿ ಸೋಮು
ದೇವ್ರೆ ಏಕಿಷ್ಟು ಬೇಗ ತೆರೆ ಎಳೆದುಬಿಟ್ಟೆ : ಸಂಚಾರಿ ವಿಜಯ್ ಒಡನಾಟ ಬಿಚ್ಚಿಟ್ಟ ಹೊಸದುರ್ಗ ಪತ್ರಕರ್ತ
ಹೊಸದುರ್ಗ : ಓ ದೇವ್ರೆ,,,ಗೆಳೆಯ ವಿಜಯ್ ಬಾಳಿಗೆ ಇಷ್ಟು ಬೇಗ ಏಕೆ ತೆರೆ ಎಳೆದುಬಿಟ್ಟೆ, ಎಂದು ದೇವರನ್ನೇ ಕೋಪದಲ್ಲೇ ಪ್ರಶ್ನಿಸಿದ್ದಾರೆ ಸಂಚಾರಿ ವಿಜಯ್ ಒಡನಾಡಿ ಹೊಸದುರ್ಗದ ಪತ್ರಕರ್ತ ಯೋಗೀಶ್ ಎಂ.ಮೇಟಿಕುರ್ಕೆ.
ಹೌದು,, ಪತ್ರಕರ್ತ ಯೋಗೀಶ್ ಎಂ.ಮೇಟಿಕುರ್ಕೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಬರೆದುಕೊಂಡಿದ್ದು ಅದನ್ನು ಓದಿದ ಪ್ರತಿಯೊಬ್ಬ ನಾಗರೀಕರ ಕಣ್ಣಲ್ಲಿ ವ್ಯಾಪಕವಾಗಿ ಕಣ್ಣೀರಿನ ಧಾರೆ ಸಂಚರಿಸುತ್ತಿದೆ.
ಪ್ರೀತಿಯ ವಿಜಯ್,,,ನನ್ನ ಹುಟ್ಟೂರು ಮೇಟಿಕುರ್ಕೆಯಿಂದ ಹತ್ತು ಕಿಲೋಮೀಟರ್ ದೂರದ ಪಂಚನಹಳ್ಳಿಯಲ್ಲಿ ಹುಟ್ಟಿದ ನೀವು ಕನ್ನಡ ಚಿತ್ರರಂಗ ನೆನಪಿಟ್ಟುಕೊಳ್ಳುವಂತಹ ಸಾಧನೆ ಮಾಡಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದಾಗ ಪ್ರಶಸ್ತಿ ದೊರೆತದ್ದು ನನಗೆ ಎನ್ನುವಷ್ಟು ಸಂತೋಷವಾಗಿತ್ತು. ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳ ಮುಂದೆ ನಿಮ್ಮ ಕಟೌಟ್ ನಿಂತಾಗ ನಮ್ಮೂರ ಹುಡುಗ ಎಂದು ಹೆಮ್ಮೆಯಿಂದ ಹೇಳಿಕೊಂಡ ನೆನಪು ಹಸಿರಾಗಿದೆ.
ಕಷ್ಟದ ಜೀವನದಿಂದ ಮೇಲೆ ಬಂದು ಯಾವುದೇ ಗಾಡ್ ಫಾದರ್ ಗಳಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಸ್ಥಾಪಿಸಿದ ನಿಮ್ಮ ಸಾಧನೆಗೆ ನೀವೇ ಸಾಟಿ. ಬದುಕಿನಲ್ಲಿ ಪ್ರಭುದ್ಧತೆ ತುಂಬಿದರೂ ಮಗುವಿನಂತ ಮನಸ್ಸು ನಿಮ್ಮದು ಆದರೆ ನಿಮಗೇನು ಅವಸರ ಇತ್ತು ನಮ್ಮನ್ನೆಲ್ಲ ಬಿಟ್ಟು ಹೋಗಲು.
ನಮ್ಮೂರು ಮೇಟಿಕುರ್ಕೆಯ ಟೆಂಟಿನಲ್ಲಿ ಶ್ರೀ ಕಲ್ಲೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ನಿಮ್ಮೂರಿಂದ ಸೈಕಲ್ ತುಳಿದು ಬರುತ್ತಿದ್ದ ಕಾಲ ನನಗಿನ್ನೂ ನೆನಪಿದೆ. ವಯಸ್ಸಿಗೂ ಮೀರಿದ ಸಾಧನೆ ನಿಮ್ಮದು. ಆದರೆ ಬದುಕಿನ ಜಂಜಾಟವನ್ನು ಬಿಟ್ಟು ಅನಂತತೆಯ ಕಡೆಗೆ ಹೊರಟಿರಲ್ಲಾ ಇದನ್ನ ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಜಾತಿಯ ಕಾರಣದಿಂದ ಸನ್ಮಾನಕ್ಕೆ ಕರೆದಾಗ ಬರದೆ ಜಾತಿಗೂ ಮೀರಿದ ಜಂಗಮ ನೀವು. ಬಾಲ್ಯದಲ್ಲಿ ನೀವು ಕಲಿತ ಪಂಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನೀವು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವ ಚಿತ್ರನಟ ಅದರಲ್ಲೂ ರಾಷ್ಟ್ರಪ್ರಶಸ್ತಿ ವಿಜೇತ ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಬಾಲ್ಯದ ಗೆಳೆಯರೊಂದಿಗೆ ಬೆರೆತ ಕ್ಷಣಗಳು ನಿಮ್ಮ ನಿಜವಾದ ವ್ಯಕ್ತಿತ್ವದ ಕನ್ನಡಿ. ಆದರೂ ನಿಮ್ಮ ಅಗಲಿಕೆಯನ್ನು ಸಹಿಸಲಾಗುತ್ತಿಲ್ಲ. ನಿಮ್ಮ ಬದುಕನ್ನು ಅಂತ್ಯಗೊಳಿಸಿದ ಕ್ರೂರ ವಿಧಿಗೆ ನನ್ನ ಧಿಕ್ಕಾರವಿರಲಿ ಎಂದು ಈ ರೀತಿ ಬರೆದುಕೊಂಡಿದ್ದರೆ.
ಬಾಕ್ಸ್
ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ ಪೋಷಾಕು ತೊಡಿಸುತ್ತಾನೆ. ಎಲ್ಲದಕ್ಕೂ ಕಾರಣ ಕೊನೆಗೆ ಪಾತ್ರಧಾರಿಯಾಗಿ ಬಿಡುತ್ತಾನೆ.
[t4b-ticker]
+ There are no comments
Add yours