ಡಿಸಿ ಅವರಿಂದ ಸಮಸ್ಯೆಗಳಿಗೆ ಪರಿಹಾರದ ಸ್ಪರ್ಶ 106 ಅರ್ಜಿ ಸ್ವೀಕಾರ : 29 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ

 

ದೊಡ್ಡಬ್ಯಾಲದಕೆರೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ : ಸಮಸ್ಯೆಗಳಿಗೆ ಪರಿಹಾರದ ಸ್ಪರ್ಶ
106 ಅರ್ಜಿ ಸ್ವೀಕಾರ : 29 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ
*******
ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ.16: ಹೊಸದುರ್ಗ ತಾಲೂಕು ಮತ್ತೋಡು ಹೋಬಳಿ ದೊಡ್ಡ ಬ್ಯಾಲದಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನೇತೃತ್ವದಲ್ಲಿ ಜರುಗಿದ ಗ್ರಾಮ ವಾಸ್ತವ್ಯದಲ್ಲಿ, ಗ್ರಾಮದ ಬಹುಕಾಲದ ಸಮಸ್ಯೆಗಳಿಗೆ ಪರಿಹಾರದ ಸ್ಪರ್ಶ ದೊರಕಿತು. 106 ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಿ 29 ಅರ್ಜಿಗಳಿಗೆ ಪರಿಹಾರದ ಒದಗಿಸಲಾಯಿತು.


ಪೂರ್ಣಕುಂಭದ ಸ್ವಾಗತ: ಗ್ರಾಮ ವಾಸ್ತವ್ಯ ಅಂಗವಾಗಿ ದೊಡ್ಡ ಬ್ಯಾಲದಕೆರೆ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೇರಿ ಅವರಿಗೆ ಪ್ರೌಢಶಾಲಾ ಮಕ್ಕಳು ಪೂರ್ಣಕುಂಭ ಹೊತ್ತು, ಸ್ವಾಗತಿಸಿದರು. ಗ್ರಾಮದ ಮಹಿಳೆಯರು ಆರತಿ ಎತ್ತಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳನ್ನು ಗ್ರಾಮಕ್ಕೆ ಬರ ಮಾಡಿಕೊಂಡರು. ಜನರ ಪ್ರೀತಿ ಆದರಗಳಿಗೆ ಜಿಲ್ಲಾಧಿಕಾರಿ ಮನಸೋತರು.
ಸೀಮಂತ ಹಾಗೂ ಅನ್ನಪ್ರಶಾನ : ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಗ್ರಾಮದ ಗರ್ಭಿಣಿ ಮಹಿಳೆ ಪರಿಮಳ ಅವರಿಗೆ ಉಡಿ ತುಂಬುದರ ಮೂಲಕ ಸೀಮಂತ ಕಾರ್ಯನಿರ್ವಹಿಸಿದರು. ಶಿಶು ಮಹಮದ್ ಹುಸೇನ್‍ಗೆ ಅನ್ನಪ್ರಶಾನ ಮಾಡಿದರು.
ಶಾಲಾ ಕಟ್ಟಡಕ್ಕೆ ಸರ್ಕಾರಿ ಜಾಗ ಮಂಜೂರು: ಗ್ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಲು ಜಾಗದ ತೊಂದರೆ ಬಹುದಿನಗಳಿಂದಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಯಪ್ಪ ಸಮಸ್ಯೆ ಪರಿಹರಿಸಲು ತಹಶೀಲ್ದಾರ ಹಾಗೂ ತಾ.ಪಂ.ಇಓ ಅವರಲ್ಲಿ ಕೋರಿಕೊಂಡರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ 100*50 ಅಡಿ ವಿಸ್ತೀರ್ಣ ಸರ್ಕಾರಿ ಜಾಗವನ್ನು ಶಾಲಾ ಹೆಸರಿಗೆ ನೋಂದಾಯಿಸಿ, ಹಕ್ಕುಪತ್ರವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ನಾಲ್ಕು ಕಟ್ಟಡಗಳನ್ನು ನಿರ್ಮಿಸುವುದಾಗಿ ಹಾಗೂ ಮನರೇಗಾದಡಿ ಶಾಲಾ ಕಾಂಪೌಡ್, ಶೌಚಾಲಯನ್ನು ನಿರ್ಮಿಸುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು.
24 ಜನರಿಗೆ ಪಿಂಚಣಿ ಆದೇಶ: ಗ್ರಾಮ ವಾಸ್ತವ್ಯದ ಅಂಗವಾಗಿ ಗ್ರಾಮದಲ್ಲಿ ಸರ್ವೇ ಕಾರ್ಯಕೈಗೊಂಡು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹರಾದ 24 ಜನರಿನ್ನು ಗುರುತಿಸಲಾಗಿತ್ತು. ಅವರಿಂದ ಅಗತ್ಯ ದಾಖಲೆ ಪಡೆದುಕೊಂಡು ಪಿಂಚಣಿ ಮಂಜೂರು ಮಾಡಿ ಆದೇಶ ಪತ್ರಗಳನ್ನು ವಿತರಿಸಲಾಯಿತು.
ವೈದ್ಯಾಧಿಕಾರಿ ನೇಮಕ್ಕೆ ಕ್ರಮ: ದೊಡ್ಡ ಬ್ಯಾಲದಕೆರೆ ಸಮೀಪದ ಜಿ.ಎನ್.ಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಾನಿಕ ವೈದ್ಯರು ಹಾಗೂ ಕೆ.ಕೆ.ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡುವಂತೆ ತಾಲೂಕು ವೈದ್ಯಾಧಿಕಾರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಡಿ.ಎಚ್.ಓ ಅವರೊಂದಿಗೆ ಮಾತನಾಡಿ ವೈದ್ಯರನ್ನು ನೇಮಿಸುವ ಭರವಸೆ ನೀಡಿದರು.
ಬಸ್ ನಿಲುಗಡೆಗೆ ಮನವಿ: ದೊಡ್ಡಬ್ಯಾಲದಕೆರೆ ಕ್ರಾಸ್‍ಗೆ ಕೋರಿಕೆ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದರು. ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಹೊಸದುರ್ಗ ಬಸ್ ಡಿಪೆÇೀ ವ್ಯವಸ್ಥಾಪಕರಿಗೆ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ ನೀಡಿದರು. ಹಾಸನ ಹಾಗೂ ಮೈಸೂರು ವ್ಯವಸ್ಥಾಪಕರಿಗೆ ಪತ್ರ ಬರೆದು, ಈ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳ ಕೋರಿಕೆ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೊಸದುರ್ಗ ಬಸ್ ಡಿಪೆÇೀ ವ್ಯವಸ್ಥಾಪಕರು ತಿಳಿಸಿದರು.
ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 5 ಲಕ್ಷ ಅನುದಾನದಡಿ, ನಿರ್ಮಿಸಲಾಗಿರುವ ನೂತನ ಅಂಗನವಾಡಿ ಕೇಂದ್ರವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಗ್ರಾಮವಾಸ್ತವ್ಯದ ಅಂಗವಾಗಿ ಜಿಲ್ಲಾಧಿಕಾರಿಗಳು ಅಂಗನವಾಡಿ ಕೇಂದ್ರದಲ್ಲಿ ಉಳಿದುಕೊಂಡರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಮಲ್ಲಿಕಾರ್ಜುನ್, ತಾ.ಪಂ.ಇಓ ವಿಶ್ವನಾಥ್,ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ, ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours