ಚಿತ್ರದುರ್ಗ: ಮುಂದಿನ ಪೀಳಿಗೆಗೆ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿತು ಪ್ರತಿಯೊಬ್ಬರು ಅಂತರ್ಜಲ ವೃದ್ದಿಯ ಮಾರ್ಗಗಳನ್ನು ಅನುಸರಿಸಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ತಾಲೂಕಿನ ಗೋನೂರು ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ಅಟಲ್ ಭೂಜಲ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಜಲ ಮೂಲಗಳ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆಯ ಮೂಲಕ ಜಲ ಸಂರಕ್ಷಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರಿಗೆ ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳು,ಕೊಳವೆ ಬಾವಿ ಮರುಪೂರಣ ಘಟಕ, ರಿಂಗ್ ಚಕ್ ಡ್ಯಾಂ , ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಇನ್ನು ಹೆಚ್ಚಿನ ಅಂತರ್ಜಲ ಹೆಚ್ಚಬೇಕು ಎಂಬ ದೃಷ್ಟಿಯಿಂದ ಅಟಲ್ ಭೂಜಲ ಯೋಜನೆಯು ಜಿಲ್ಲೆಯಾದ್ಯಂತ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿ, ಅಂತರ್ಜಲ ಪ್ರಮಾಣ, ಜನ ಜಾನುವಾರು , ಕೃಷಿ ಬೇಕಾಗುವ ನೀರಿನ ಪ್ರಮಾಣ, ಲಭ್ಯ ನೀರಿನ ಪ್ರಮಾಣ ಮತ್ತು ಅಗತ್ಯಕ್ಕೆ ಬೇಕಾಗುವ ನೀರು ಎಷ್ಟು ಎಂಬುದು ತಿಳಿದುಕೊಳ್ಳಲಾಗುತ್ತದೆ.
ನಂತರ ಗ್ರಾಮೀಣ ಭಾಗದ ರೈತರು, ಸಾರ್ವಜನಕರ ಜೊತೆಗೆ ಸೇರಿಸಿಕೊಂಡಿ ಮುಂದಿನ ಪೀಳಿಗೆಗೆ ಅಂತರ್ಜಲ ಕಾಪಾಡುವ ಮತ್ತು ಹೆಚ್ಚಿಸುವ ಯೋಜನೆ ಕುರಿತು ತಿಳಿಸುತ್ತಾರೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆ ಭಾಗದ ನೀರಿನ ಮಟ್ಟ ಪರೀಕ್ಷೆ ಮಾಡಿ ಜನಸಂಖ್ಯೆ ಅನುಗುಣವಾಗಿ ಬಳಕೆ ನೋಡಿ ಅಲ್ಲಿ ಅಂತರ್ಜಲ ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಸಂಪೂರ್ಣ ಮಾಹಿತಿ ಕಲೆ ಹಾಕುವ ಕೆಲಸ ಇಲಾಖೆ ಮಾಡುತ್ತದೆ.
ಅಟಲ್ ಭೂಜಲ ಯೋಜನೆ ಸಾರ್ವಜನಿಕರಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಆಧುನಿಕ ವಿಧಿ ವಿಧಾನ, ಗ್ರಾಮೀಣ ಪ್ರದೇಶದಲ್ಲಿ ಯಾವ ನೀರಿನ ಮೂಲ ಸುಸ್ಥಿರಗೊಳಿಸಬೇಕು, ಮರುಪೂರಣ ಘಟಕದಿಂದ ಆಗುವ ಉಪಯೋಗ ಕುರಿತು ಬೀದಿ ನಾಟಕಗಳ ಮೂಲಕ ಜನರಿಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸವನ್ನು ಗೂಳಿಹಟ್ಟಿಯ ನೇಸರ ಕಲಾ ತಂಡ ಮತ್ತು ಅಧಿಕಾರಿಗಳು ಮಾಡುತ್ತಾರೆ.
ಅಂತರ್ಜಲ ಹೆಚ್ಚಿಸುವುದಕ್ಕೆ ಇಲಾಖೆ ಹೇಳಿದ ಎಲ್ಲಾ ಮಾರ್ಗಗಳನ್ನು ಕಡೆಗಣಿಸದೆ ತಮ್ಮ ಗ್ರಾಮಗಳಲ್ಲಿ , ಕೃಷಿ ಜಮೀನಿನಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಮುಂದಿನ ಯುವ ಸಮುದಾಯಕ್ಕೆ ಅನುಕೂಲವಾಗುತ್ತದೆ. ನಿರ್ಲಕ್ಷ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ ಆಗುತ್ತಿದೆ. ಅನವಶ್ಯಕವಾಗಿ ನೀರನ್ನು ಬಳಸಬೇಡಿ. ಎಲ್ಲಾರ ಮನೆಗಳಲ್ಲಿ ಬಳಸಿದ ನಂತರ ನೀರಿನ ನಲ್ಲಿ ನಿಲ್ಲಿಸಬೇಕು. ಹನಿ ಹನಿ ನೀರು ಅಮೂಲ್ಯವಾಗಿದೆ. ಅಟಲ್ ಭೂಜಲ ಯೋಜನೆ ಮತ್ತು ಗ್ರಾಮೀಣ ಭಾಗದ ಪ್ರತಿ ಮನೆಗೆ ಜನ ಜೀವನ್ ಮಿಷನ್ ಯೋಜನೆಯಲ್ಲಿ ನಲ್ಲಿ ಮೂಲಕ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಅಟಲ್ ಭೂಜಲ ಯೋಜನೆಯ ಸದುಪಯೋಗ ಪಡೆದುಕೊಂಡು ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಂತರ್ಜಲ ವೃದ್ದಿಗೆ ಅರಿವು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ, ಚನ್ನಯ್ಯ, ಮಲ್ಲಿಕಾರ್ಜುನ, ಪಾಪಣ್ಣ,ಗುಂಡಮ್ಮ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಣ್ಣಪ್ಪ ಮತ್ತು ಮುಖಂಡ ಹನುಮಂತಪ್ಪ ಇದ್ದರು.
+ There are no comments
Add yours