ಸಿರಿಗೆರೆ: ಭರಮಸಾಗರ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಇನ್ನು ಮುಂದೆ ಬರ ಇರುವುದಿಲ್ಲ ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ (Shivamurthy Shivacharya)ಮಹಾಸ್ವಾಮೀಜಿ ಕೃಷಿಕರಿಗೆ ಅಭಯ ನೀಡಿದರು.
ಏತ ನೀರಾವರಿ ವ್ಯಾಪ್ತಿಯ ಬಹದ್ದೂರುಗಟ್ಟ, ಕೋಗುಂಡೆ, ಹೆಮ್ಮನಗಟ್ಟ, ಕಾಕಬಾಳು, ಕಾಲ್ಗೆರೆ, ಪಂಜಯ್ಯನಹಟ್ಟಿ, ಆಜಾದ್ ನಗರ, ಇಸಾಮುದ್ತ, ಪಂಜಯ್ಯನಹಟ್ಟಿ ಮುಂತಾದ ಕೆರೆಗಳ ವೀಕ್ಷಣೆ ಮಾಡಿ ಆಶೀರ್ವಚನ ನೀಡಿದರು.
ಭದ್ರಾ ಅಣೆಕಟ್ಟೆಯಲ್ಲಿ ನೀರು ಇರುವ ತನಕವೂ ಇಲ್ಲಿ ಬರ ಕಾಲಿಡುವುದಿಲ್ಲ. ಏತ ನೀರಾವರಿಯಿಂದ ಜಿಲ್ಲೆಯ ಹಲವು ಪ್ರಮುಖ ಕೆರೆಗಳು ತುಂಬಿವೆ. ಅಡಿಕೆ ಬೆಳೆಯುವ ಶಿವಮೊಗ್ಗ ಜಿಲ್ಲೆಯನ್ನು ಮೀರಿಸಿ ಈ ಭಾಗ ಮಲೆನಾಡು ಎನ್ನಿಸಿಕೊಳ್ಳಲಿದೆ ಎಂದರು.
ಕೆರೆಗಳು ತುಂಬಿರುವುದರಿಂದ ಶ್ರಮಿಕರಾದ ನಮ್ಮ ರೈತರು ತರಕಾರಿ, ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ದಾರಿಯುದ್ದಕ್ಕೂ ಬರುವಾಗ ಅವರೆಕಾಯಿ ಸೊಗಡಿನ ಸುವಾಸನೆಯನ್ನು ಅನುಭವಿಸಿದೆವು. ಅಡಿಕೆಯ ಜೊತೆಗೆ ವಿವಿಧ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಆಗ ರೈತರ ಬದುಕಿಗೆ ಭದ್ರತೆ ಬರುತ್ತದೆ ಎಂದರು.
ಇದನ್ನೂ ಓದಿ:ಬರ ಪರಿಹಾರ ಪಡೆಯಲು ಈ ಗುರುತಿನ ಚೀಟಿ ಕಡ್ಡಾಯ
ಶ್ರಮದಿಂದ ದುಡಿಯುವ ಹಣವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಬೆಳೆಯಿಂದ ಬರುವ ಹಣದಲ್ಲಿ ಮನೆಯಲ್ಲಿನ ಎಲ್ಲ ಹೆಣ್ಣುಮಕ್ಕಳಿಗೆ ಒಡವೆ ಮಾಡಿಸಿಕೊಡಿ. ಹೆಣ್ಣುಮಕ್ಕಳು ಮನೆಗಳನ್ನು ಕಾಪಾಡುವ ಖಜಾನೆಗಳಿದ್ದಂತೆ. ಅವರಿಗೆ ಎಷ್ಟುಬೇಕೋ ಅಷ್ಟು ಬಂಗಾರದ ಒಡವೆ ಮಾಡಿಸಿ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಳಸಿ. ಯಾವುದೇ ಕಾರಣದಿಂದಲೂ ದುಡಿಮೆಯ ದುಡ್ಡನ್ನು ಬಾರ್ ಅಂಡ್ ರೆಸ್ಟೊರೆಂಟಿಗೆ ಹಾಕಬೇಡಿ ಎಂದರು.
ಕೆರೆಗಳು ನಮ್ಮ ಜೀವನಾಡಿ. ಅವುಗಳೇ ತೀರ್ಥಕ್ಷೇತ್ರಗಳು. ತೀರ್ಥಕ್ಷೇತ್ರಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಕೆರೆಗಳನ್ನು ಮಲಿನ ಮಾಡಬೇಡಿ. ಭರಮಸಾಗರ ಚಿಕ್ಕ ಕೆರೆಯನ್ನು ಕೂಡಲೇ ಸ್ವಚ್ಚಗೊಳಿಸಬೇಕು ಎಂದರು.
ಭರಮಸಾಗರ ಏತ ನೀರಾವರಿ ಯೋಜನೆಯು ಯಶಸ್ವಿಯಾಗಿ ಕಾರ್ಯಗತಗೊಳ್ಳಲು ರಾಜ್ಯದ ಎಲ್ಲ ಸರ್ಕಾರಗಳು ಮತ್ತು ರಾಜಕೀಯ ಧುರೀಣರು ಸಹಕಾರ ನೀಡಿದ್ದಾರೆ. ಅವರನ್ನು ನಾವು ನೆನಪುಮಾಡಿಕೊಂಡು ಅಭಿನಂದಿಸುತ್ತೇವೆ ಎಂದರು.
ಇದನ್ನೂ ಓದಿ:ಮುರುಘಾ ಮಠದ ಆಡಳಿತಾಧಿಕಾರಿ ರೇಖಾ ದಿಢೀರ್ ವರ್ಗಾವಣೆ
ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿ ಪಾಟೀಲ್, ಸಿ.ಆರ್. ನಾಗರಾಜ್, ಕೆರೆ ವೀಕ್ಷಣೆ ಸಮಿತಿ ಸಂಚಾಲಕ ಜಿ.ಬಿ. ತೀರ್ಥಪ್ಪ, ಕೆಪಿಸಿಸಿ ಸದಸ್ಯ ತಿಪ್ಪೇಸ್ವಾಮಿ, ಕೋಗುಂಡೆ ಮಂಜುನಾಥ್, ಕರ್ನಾಟಕ ನೀರಾವರಿ ನಿಗಮದ ಇಂಜಿನಿಯರ್ ಮನೋಜ್ ಕುಮಾರ್ ಶ್ರೀಗಳ ಜತೆಗಿದ್ದರು.
[t4b-ticker]
+ There are no comments
Add yours