ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಸಂತ್ರಸ್ತ ವಿದ್ಯಾರ್ಥಿನಿಯೊಬ್ಬರೊಂದಿಗೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಾಲಮಂದಿರದಿಂದ ಬಿಡುಗಡೆಗೊಂಡು ಪ್ರವಾಸದಲ್ಲಿರುವ ಮೊದಲ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಯನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದ ಸೌಭಾಗ್ಯ, ಸುಮಾರು 13 ನಿಮಿಷ ಸಂಭಾಷಣೆ ನಡೆಸಿದ್ದಾರೆ. ಜೀವನದಲ್ಲಿ ಜುಗುಪ್ಸೆಗೊಂಡಿರುವ ಬಗ್ಗೆ ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾಳೆ.
ಶಿವಮೂರ್ತಿ ಶರಣರ ವಿರುದ್ಧ ದೂರು ದಾಖಲಿಸುವಂತೆ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಆರೋಪ ಸೌಭಾಗ್ಯ ಬಸವರಾಜನ್ ಮೇಲಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಅವರು ಸಂತ್ರಸ್ತೆಯೊಂದಿಗೆ ಮಾತನಾಡಿದ ಸಂಭಾಷಣೆ ಚರ್ಚೆಗೆ ಗ್ರಾಸವಾಗಿದೆ.
‘ನೀನು ಜಾಣೆ, ಬುದ್ಧಿವಂತೆ. ಚಿಕ್ಕ ವಯಸ್ಸಿಗೇ ಎಲ್ಲ ಗೊತ್ತಿದೆ. ಪುಟ್ಟ ಹೃದಯದಲ್ಲಿ ಸಾಕಷ್ಟು ದುಃಖ ತುಂಬಿಕೊಂಡಿದ್ದೀಯ. ವಿದ್ಯಾಭ್ಯಾಸದ ಕಡೆ ಗಮನ ಹರಿಸು. ಎಸ್ಸೆಸ್ಸೆಲ್ಸಿ ಉತ್ತೀರ್ಣಳಾದ ಬಳಿಕ ಇಷ್ಟಪಟ್ಟ ಕಾಲೇಜಿಗೆ ಪ್ರವೇಶ ಕೊಡಿಸುವೆ..’ ಎಂದು ಬಾಲಕಿಗೆ ಸೌಭಾಗ್ಯ ಆಶ್ವಾಸನೆ ನೀಡಿರುವುದು ಆಡಿಯೊದಲ್ಲಿದೆ.
ನೀನು ಸಂತೋಷವಾಗಿರಬೇಕು, ಓದಿ ದೊಡ್ಡವಳಾಗಿ ಜಿಲ್ಲಾಧಿಕಾರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಕೊಂಚ ಶ್ರಮ ಹಾಕಿ ಓದಿದರೆ ಖಂಡಿತ ಐಎಎಸ್ ಅಧಿಕಾರಿಯಾಗುತ್ತೀಯ. ಪ್ರವಾಸ ಮುಗಿಸಿ ಚಿತ್ರದುರ್ಗಕ್ಕೆ ಮರಳಿದ ಬಳಿಕ ಸಂಪರ್ಕಿಸು’ ಎಂದು ವಿದ್ಯಾರ್ಥಿನಿಗೆ ಸೂಚನೆ ನೀಡಿದ್ದಾರೆ.
[t4b-ticker]
+ There are no comments
Add yours