ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.11: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜುಲೈ 28 ರಂದು ಜರುಗಿದ 2023-24ನೇ ಸಾಲಿನ ವಿಶೇಷ ಸಮೀಕ್ಷಾ ಕಾರ್ಯದಲ್ಲಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 271 ಮಕ್ಕಳು ಪತ್ತೆ ಆಗಿದ್ದಾರೆ. 1799 ಜನ ವಸತಿ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗಿದೆ. ನಗರ ಸಭೆ, ಪುರಸಭೆ, ಪಟ್ಟಣ, ಹಳ್ಳಿ, ಕಂದಾಯ ಗ್ರಾಮ, ತಾಂಡ, ಕೈಗಾರಿಕಾ ಸ್ಥಳ, ಕೃಷಿ ಕಾರ್ಮಿಕ ವಲಯಗಳು, ಕೊಳಗೇರಿ, ಹೋಟೆಲ್, ಸಂತೇ ಮೈದಾನ, ಗ್ಯಾರೇಜ್, ಬಸ್ಸು ಹಾಗೂ ರೈಲ್ವೆ ನಿಲ್ದಾಣ, ಕೋಳಿಫಾರಂ, ಆಸ್ಪತ್ರೆ, ಛತ್ರಗಳು, ಇಟ್ಟಿಗೆ ಹಾಗೂ ಮಂಡಕ್ಕಿ ಬಟ್ಟಿ, ಗಣಿಪ್ರದೇಶ ಕ್ವಾರಿಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಪತ್ತೆಯಾದ 271 ಮಕ್ಕಳಲ್ಲಿ ಶಾಲೆಗೆ ದಾಖಲಾಗಿ ಬಿಟ್ಟವರು 231, ಶಾಲೆಗೆ ದಾಖಲಾಗದ 40 ಮಕ್ಕಳಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು 70, ಮೊಳಕಾಲ್ಮೂರು ತಾಲೂಕಿನಲ್ಲಿ 28 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಇವರ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳು ಹೆಚ್ಚಿದ್ದಾರೆ. 11 ರಿಂದ 14 ವಯೋಮಾನದ 145, 15 ರಿಂದ 16 ವಯೋಮಾನದ 70 ಮಕ್ಕಳು ಹೊರಗುಳಿದ್ದಾರೆ. ಇವರಲ್ಲಿ ಗಂಡು ಮಕ್ಕಳೇ ಹೆಚ್ಚಿದ್ದಾರೆ. ಈ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ದಾಖಲಾತಿ ಆಂದೋಲನ, ವಿಶೇಷ ದಾಖಲಾತಿ ಆಂದೋಲನ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಲಿಂಗ ತಾರತಮ್ಯ ಮುಂತಾದ ಸಾಮಾಜಿಕ ಪಿಡುಗಳ ಕುರಿತು ಪೊಷಕರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗವುದು ಎಂದು ಉಪನಿರ್ದೇಶಕ ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.
+ There are no comments
Add yours