ತಂದೆ ತಾಯಿಗಿಂತಲೂ ಗುರುವಿನ ಸ್ಥಾನ ಮಿಗಿಲು -ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ  

 

ಜೀವನದಲ್ಲಿ ಯಶಸ್ಸು ಸಾಧಿಸಲು ಗುರುವಿನ ಮಾರ್ಗದರ್ಶ ಅಗತ್ಯ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.25:
ಮಕ್ಕಳ ಜೀವನ ರೂಪಿಸುವಲ್ಲಿ ತಂದೆ ತಾಯಿಗಳಿಗಿಂತಲೂ ಹೆಚ್ಚಿನ ಜವಬ್ದಾರಿ ಶಿಕ್ಷಕರದ್ದಾಗಿದೆ. ಬೋಧನೆ ಎನ್ನುವುದು ಕೇವಲ ವೃತ್ತಿಯಲ್ಲ, ಅದಕ್ಕೂ ಮಿಗಿಲಾದುದು. ಗುರುವಿನ ಮಾರ್ಗದರ್ಶನ ಇಲ್ಲದೆ ಯಾರೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಗಾರ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕøತಿಯಲ್ಲಿ ಮಾತಾ ಪಿತಾರ ಜೊತೆ ಗುರುವಿಗೂ ಮಹತ್ವದ ಸ್ಥಾನ ನೀಡಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣ ಪ್ರಮುಖ ಸಾಧನ. ಚಿತ್ರದುರ್ಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ವೇಳೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದೆ. ಅದರಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದರು.

ಚಿಕ್ಕಂದಿನಿಂದಲೂ ಮಕ್ಕಳಲ್ಲಿ ದೊಡ್ಡ ಕನಸುಗಳನ್ನು ಶಿಕ್ಷಕರು ಬಿತ್ತಬೇಕು. ನಾನು ಒಂದನೇ ತರಗತಿಯಲ್ಲಿ ಇದ್ದಾಗಲೇ, ನನ್ನ ಪ್ರಿಯ ಶಿಕ್ಷಕಿ ಪಾರ್ವತಿಯವರು ಐ.ಎ.ಎಸ್ ಅಧಿಕಾರಿಯಾಗುವಂತೆ ನನ್ನನ್ನು ಪ್ರೇರೇಪಿಸಿದ್ದರು. ಆ ಸಂದರ್ಭದಲ್ಲಿ ಐ.ಎ.ಎಸ್ ಅಂದರೆ ಏನು ಎಂಬುದು ನನಗೆ ಅರಿವಿರಲಿಲ್ಲ. ಹೆಚ್ಚಿನ ಹಂತ ಶಿಕ್ಷಣಕ್ಕೆ ಪಡೆಯುತ್ತಾ ಹೋದಹಾಗೆ ಐ.ಎ.ಎಸ್ ಬಗ್ಗೆ ತಿಳಿದುಕೊಂಡು, ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ. ಐ.ಎ.ಎಸ್ ಅಧಿಕಾರಿಯಾದ ಕ್ಷಣದಲ್ಲಿ ನನಗೆ ಪ್ರೇರಣೆ ನೀಡಿದ ಶಿಕ್ಷಕಿ ಪಾರ್ವತಿಯವರನ್ನು ಭೇಟಿಯಾಗಿ ಆರ್ಶಿವಾದವನ್ನು ಸಹ ಪಡೆದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಮ್ಮ ಜೀವನ ಅನುಭವ ಹಂಚಿಕೊಂಡರು.
ಶಿಕ್ಷಕರು ಮಕ್ಕಳ ಮನ ಮುಟ್ಟುವಂತೆ ಪಾಠಗಳನ್ನು ಮಾಡಬೇಕು. ಜೊತೆಗೆ ಬುದುಕಿನ ಶಿಕ್ಷಣವನ್ನು ನೀಡಬೇಕು. ಮಕ್ಕಳು ಶೈಕ್ಷಣಿವಾಗಿ ಹಿಂದುಳಿದರೆ, ಉತ್ತಮ ಸಾಧನೆ ಮಾಡಲು ವಿಫಲರಾದರೆ ತಂದೆ ತಾಯಿ ದುಃಖಿಸುತ್ತಾರೆ. ಇದೇ ಮಾದರಿ ಶಿಕ್ಷಕರಿಗೆ ತಾವು ಬೋದಿಸಿದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪೇಲ್ ಆದರೆ ನೋವ ಆಗಬೇಕು. ಮಕ್ಕಳು ತಮ್ಮ ವಿದ್ಯಾರ್ಥಿಗಳು ಎಂಬ ಮನೋಭಾವ ಇರಬೇಕು. ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಇದನ್ನು ಉಳಿಸಕೊಂಡು ಪ್ರತಿ ವರ್ಷವೂ ಜಿಲ್ಲೆಗೆ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಪ್ರಯತ್ನ ಪಡೆಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳಸಿ
ಜಿಲ್ಲಾ ಪಂಚಾಯತಿ ನಿಕಟ ಪೂರ್ವ ಸಿಇಓ ಹಾಗೂ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದರು ಶಿಕ್ಷಕರನ್ನು ಬದಲಿಸಲು ಸಾಧ್ಯವಿಲ್ಲ. ಮಕ್ಕಳು ಶಿಕ್ಷಕರ ಮೂಲಕವೇ ಶಿಕ್ಷಣ ಪಡೆಯಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳಸಬೇಕು. ನಂತರದ ಹಂತದಲ್ಲಿ ಇವುಗಳನ್ನು ಮಕ್ಕಳಲ್ಲಿ ಬೆಳಸಲು ಸಾಧ್ಯವಿಲ್ಲ ಎಂದರು.
ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತರಲು ಶಿಸ್ತು ಕಾಪಡಿಕೊಳ್ಳವುದು ಮುಖ್ಯ. ನಿರ್ಲಕ್ಷ್ಯ ತೊರವರ ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳೂವ ಹಾಗೆ, ಉತ್ತಮ ಸಾಧನೆ ತೋರಿದ ಶಿಕ್ಷಕರಿಗೆ ಸನ್ಮಾನಿಸುವುದು ಉತ್ತಮ ಆಡಳಿತ ಭಾಗವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿ, ಇಲ್ಲಿಯೇ ಓದಿ ಬೆಳದು ದೊಡ್ಡವನಾದ ನಾನು ಸ್ವಂತ ಜಿಲ್ಲೆಗೆ ಐ.ಎ.ಎಸ್ ಅಧಿಕಾರಿಯಾಗಿ ಬಂದಿದ್ದು ನನಗೆ ಸಂತಸ ತಂದಿತ್ತು. ಇದರೊಂದಿಗೆ ನನ್ನ ತಂದೆ, ಚಿಕ್ಕಪ ಸಹ ಶಿಕ್ಷಕರಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸ್ವತಃ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಾಗ ರಾಜ್ಯದ 24 ಜಿಲ್ಲೆಗಳಲ್ಲಿ ಚಿತ್ರದುರ್ಗ 22ನೇ ಸ್ಥಾನಗಳಿಸಿತ್ತು. ಮೈಸೂರು ಮರಿ ಮಲ್ಲಪ್ಪ ಹೈಸ್ಕೂಲ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಇಂದು ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದು ನನಗೆ ಹೆಮ್ಮೆ ಎನಿಸಿದೆ ಎಂದರು.
ಇಂದಿನ ಶಿಕ್ಷಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ, ಕುಟುಂಬದವರೊಂದಿಗೂ ಹೆಚ್ಚಿನ ಒಡನಾಟ ನೆಡಿಸಿ, ಸ್ವತಃ ಶಿಕ್ಷಕರ ಮಗನಾಗಿದ್ದು, ಶಿಕ್ಷಕರ ಕಲ್ಯಾಣ ನಿಧಿಯಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಪಡೆದಕೊಂಡಿದ್ದೇನೆ. ನಮ್ಮ ತಂದೆ ಶಿಕ್ಷಕರಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರೊಂದಿಗೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಸಹ ಇಂದಿಗೂ ಅವರನ್ನು ಸ್ಮರಿಸುತ್ತಾರೆ. ಶಿಕ್ಷಕರು ಮತ್ತೊಬ್ಬ ಶಿಕ್ಷಕರ ನೋವು ನಲವಿಗೆ ಸ್ಪಂದಿಸುತ್ತಾರೆ. ಅಂತಹ ಶಿಕ್ಷಕರ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸಿದೆ ಎಂದು ಎಂ.ಎಸ್.ದಿವಾಕರ ಭಾವುಕರಾದರು.
ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದಾಗ ಹಲವರು ಕೊಂಕು ಮಾತುಗಳನ್ನು ಆಡಿದರು. ಯಶಸ್ಸು ಸಾಧಿಸುವಾಗ ನಾವು ಕಿವುಡರಾಗಿ ಇರಬೇಕು. ಯಶಸ್ಸು ಬಂದ ನಂತರ ಮೂಖರಾಗಬೇಕು. ಹಿಂದುಳಿದ ಜಿಲ್ಲೆ ಚಿತ್ರದುರ್ಗು ಜಿಲ್ಲೆಯ ಶೈಕ್ಷಣಿಕ ಉನ್ನತಿ ಸದಾ ಕಾಲ ಹೀಗೆ ಮುಂದುವರಿಯಬೇಕು. ಅದಕ್ಕೆ ಬೇಕಾದ ಯೋಜನೆಗಳನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕು. ಮುಂದಿನ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ವಿಜಯನಗರ ಜಿಲ್ಲೆ ಪ್ರತಿಸ್ಪರ್ಧಿ. ಉತ್ತಮ ರೀತಿಯ ಫಲಿತಾಂಶ ತರಲು ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಶೇ.100 ರಷ್ಟು ಸಾಧನೆ ಮಾಡಿದ 234 ಪ್ರೌಢ ಶಾಲೆಗಳು
2022-23ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ 490 ಪ್ರೌಢ ಶಾಲೆಗಳ ಪೈಕಿ 234 ಪ್ರೌಢ ಶಾಲೆಗಳು ಶೇ.100 ರಷ್ಟು ಪಲಿತಾಂಶ ಪಡೆದ ಸಾಧನೆ ಮಾಡಿವೆ. ಇದರಲ್ಲಿ 79 ಸರ್ಕಾರಿ ಪ್ರೌಢ ಶಾಲೆ, 72 ಅನುದಾನಿತ ಹಾಗೂ 83 ಅನದಾನ ರಹಿತ ಪ್ರೌಢಶಾಲೆಗಳಾಗಿವೆ. ಕಾರ್ಯಕ್ರಮದಲ್ಲಿ 2023-24 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಸಿದ್ದತೆ ಕುರಿತು ಜಿಲ್ಲಾ ಮಟ್ಟದ ವಾರ್ಷಿಕ ಕ್ರಿಯಾ ಯೋಜನೆಯನ್ನು  ಬಿಡುಗಡೆ ಮಾಡಲಾಯಿತು. ಶೇ.100 ರಷ್ಟು ಪಲಿತಾಂಶ ಸಾಧನೆ ಮಾಡಿದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರರೆಡ್ಡಿ, ಡಯಟ್ ಪ್ರಾಚಾರ್ಯೆ ಲೀಲಾವತಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ, ಡಯಟ್ ಅಭಿವೃದ್ಧಿ ಉಪನಿರ್ದೇಶಕ ನಾಸಿರುದ್ದೀನ್, ಡಯಟ್ ಉಪನ್ಯಾಸಕರಾದ ನಾಗರಾಜ್, ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಕಾರ್ಯದರ್ಶಿ ಮಂಜುನಾಥ್, ಗೌರವಾಧ್ಯಕ್ಷ ನಾಗರಾಜಪ್ಪ, ಡಿವೈಪಿಸಿ ಶೈಲಜಾಕುಮಾರಿ, ಮೈಲಾರಸ್ವಾಮಿ, ರಾಧಕೃಷ್ಣ, ಬಿಇಓಗಳು ಹಾಗೂ ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours