ವಿಕಲಚೇತನರ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ಅಗತ್ಯ:ಶಾಸಕ ಕೆ.ಎಸ್.ನವೀನ್

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.3:
ವಿಕಲಚೇತನರಿಗೆ ದೈಹಿಕ ನ್ಯೂನ್ಯತೆ ಮೀರಿ ಸಾಧನೆ ಮಾಡುವ ಶಕ್ತಿಯಿದೆ. ಪೋಷಕರು, ಸಮಾಜ ಹಾಗೂ ಸರ್ಕಾರ ವಿಕಲಚೇತನರ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಹೇಳಿದರು.
ಚಿತ್ರದುರ್ಗ ನಗರದ ಕರುವಿನಕಟ್ಟೆ ಸರ್ಕಲ್ ಹತ್ತಿರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಕಬೀರಾನಂದಸ್ವಾಮಿ ವೇದಿಕೆಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಿವಿಧೋದ್ದೋಶ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿಶ್ವ ವಿಕಲಚೇತನರ ದಿನಾಚರಣೆ ವಿಕಲಚೇತನರ ಸಾಧನೆಯನ್ನು ಸಂಭ್ರಮಿಸುವ ದಿನವಾಗಿದೆ. ದೈಹಿಕ ನ್ಯೂನ್ಯತೆ ಮೀರಿ ಸಾಧನೆಯನ್ನು ಮಾಡಿರುವುದನ್ನು ಸಂಭ್ರಮಿಸುವ ದಿನ ಇದಾಗಿದೆ. ದೇವರು ವಿಕಲಚೇತನರಿಗೆ ಉತ್ತಮ ಗುಣ ಹಾಗೂ ಕಲೆಯನ್ನು ವರವಾಗಿ ನೀಡಿದ್ದಾನೆ. ಗದಗ ಜಿಲ್ಲೆಯ ಪುಟ್ಟರಾಜ ಗವಾಯಿಗಳು ಇದಕ್ಕೆ ಉತ್ತಮ ಉದಾಹರಣೆ. ಜಗತ್ತು ನಿಬ್ಬರಗಾಗುವ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದರು. ಭಾರತದ ಮೂಲೆ ಮೂಲೆ ಜನರು ಪುಟ್ಟರಾಜ ಗಾವಾಯಿಗಳನ್ನು ಗುರುತಿಸುತ್ತಾರೆ. ದೈಹಿಕ ನ್ಯೂನ್ಯತೆ ನಮ್ಮ ಜೀವನವನ್ನು ಹಿಂದೆ ಎಳೆಯುವ ಶಕ್ತಿ ಆಗಬಾರದು. ಅದನ್ನು ಮೀರಿ ಸಾಧನೆ ಮಾಡಬೇಕು. ಹುಟ್ಟಿನಿಂದ ಎರಡು ಕಾಲುಗಳು ಇಲ್ಲದ ಮಹಿಳೆ ಮೌಂಟ್ ಏವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಬುದ್ದಿಮಾಂಧ್ಯತೆ ಇರುವ ಮಹಿಳೆ ಸಮುದ್ರದಲ್ಲಿ ಎಂಟು ದಿನಗಳ ಕಾಲ ಈಜಿ ದಾಖಲೆ ಬರೆದಿದ್ದಾಳೆ. ಇದನ್ನು ಪೋಷಕರು ತಿಳಿದುಕೊಳ್ಳಬೇಕು. ಕೇಂದ್ರ  ಮತ್ತು ರಾಜ್ಯ ಸರ್ಕಾರ ವಿಕಲಚೇತನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ದೇವರು ವಿಕಲಚೇತನರಿಗೆ ವಿಶೇಷ ಚೈತನ್ಯ ನೀಡಿದ್ದಾರೆ. ಇದನ್ನು ಗುರುತಿಸುವ ಕೆಲಸವಾಗಬೇಕು. ದೃಷ್ಟಿ ದೋಷ ಇರುವವರು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ವಿಕಲಚೇತನರಿಗೆ ದೈಹಿಕ ನ್ಯೂನ್ಯತೆ ಇರಬಹುದು ಆದರೆ ಮಾಸಿಕವಾಗಿ ಸದೃಢವಾಗಿದ್ದಿರಿ ಎಂಬ ಭಾವನೆ ಹೊಂದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆ, ಸಂಗೀತ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಜಿಲ್ಲೆಯ ವಿಕಲಚೇತನರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮೊಳಕಾಲ್ಮುರು ತಾಲೂಕು ಕೊಂಡ್ಲಹಳ್ಳಿಯ ಪ್ರಸನ್ನಕುಮಾರ್, ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಕೆ.ಎಂ.ಪಲ್ಲವಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ರಕ್ಷಾ, ಹೊಳಲ್ಕೆರೆ ತಾಲೂಕಿನ ಚಿಕ್ಕೆಎಮ್ಮಿಗನೂರು ಗ್ರಾಮದ ಮಣಿಕಂಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಎನ್.ಪೂರ್ಣಿಮಾ, ಆರತಿ.ಡಿ, ಚಂದನ.ಎಸ್. ಚೈತ್ರಾ.ಎನ್, ರಕ್ಷಿತಾ.ಆರ್, ಉಷಾ ಎಸ್. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕೋವಿಡ್ ಲಸಿಕೆ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೆಶಕ ಕೆ. ರವಿಶಂಕರ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ಕೆಂಪಹನುಮಯ್ಯ ಸೇರಿದಂತೆ ಇತರೆ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕಿನ ಪುನರ್ವಸತಿ ಕಾರ್ಯಕರ್ತರು ಇದ್ದರು.

[t4b-ticker]

You May Also Like

More From Author

+ There are no comments

Add yours