ಕೆ.ಎಂ.ಇ.ಆರ್.ಸಿ ಅನುದಾನದ ರೂ.20 ಕೋಟಿ ವೆಚ್ಚದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಜ.11: ಕರ್ನಾಟಕ ಗಣಿ ಮತ್ತು ಪರಿಸರ ಪುನರುತ್ಥಾನ ನಿಗಮ(Karnataka Mining and Environment Restoration Corporation)ದ ರೂ.20 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಕಾಲೇಜುಗಳಲ್ಲಿ ಡೊನೋಷನ್ ಹಾವಳಿ ಜಾಸ್ತಿತಿಯಿದೆ. ಗ್ರಾಮೀಣ ಹಾಗೂ ನಗರದ ಬಡ ಮಕ್ಕಳು ಡೊನೇಷನ್ ನೀಡಿ ಕಾಲೇಜು ಸೇರುವುದು ಕಷ್ಟ. ಈ ಹಿನ್ನಲೆಯಲ್ಲಿ ನಗರದಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅವಶ್ಯಕತೆ ಇತ್ತು. ಇದನ್ನು ಮನಗಂಡು ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಲಾಯಿತು. ಸದ್ಯ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಬೋಧನೆ ಆರಂಭಿಸಲಾಗಿದೆ. ಈ ಕೋರ್ಸ್‌ಗಳಿಗೆ ಅತ್ಯಂತ ಬೇಡಿಕೆಯಿದೆ. ಅರ್ಜಿ‌ ದಾಖಲಿಸಿದ ಎಲ್ಲಾ ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಇಂದು ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಓದುತ್ತಿರುವ ಪ್ರಥಮ ದರ್ಜೆ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಗೆ ಚಿತ್ರದುರ್ಗ ಮಹಿಳಾ ಪ್ರಥಮ ದರ್ಜೆ ಕಾಲೇಜು ಪಾತ್ರವಾಗಿದೆ. 800 ಮಹಿಳಾ ವಿದ್ಯಾರ್ಥಿಗಳು ಓದುತ್ತಿದ್ದಾರೆ. ತಾತ್ಕಲಿಕವಾಗಿ ಸರ್ಕಾರಿ ಕಲಾ ಕಾಲೇಜು ಹಾಗೂ ವಿಜ್ಞಾನ ಕಾಲೇಜುಗಳ ಕೊಠಡಿಯಲ್ಲಿ ಬೋದನೆ ನೀಡಲಾಗುತ್ತಿದೆ. ಸ್ವತಂತ್ರ ಕಾಲೇಜು ಸ್ಥಾಪನಗೆ ಅವಶ್ಯಕತೆ ಇರುವ 2.24 ಎಕರೆ ಜಮೀನನ್ನು ಪ್ರಾಥಮಿಕ‌ ಹಾಗೂ ಪ್ರೌಢಶಾಲಾ ಇಲಾಖೆಯಿಂದ ಪಡೆದು ಕಾಲೇಜು ಶಿಕ್ಷಣ ಇಲಾಖೆ ಹಸ್ತಾಂತರ ಮಾಡಲಾಗಿದೆ. ಕೆ.ಎಂ.ಇ.ಆರ್.ಸಿ ಅನುದಾನ ಬಳಕೆ ಕುರಿತು ಸುಪ್ರಿಂ ಕೋರ್ಟ್ ನಿಯಮಗಳನ್ನು ಅನುಸರಿಸಿ ಕಾಲೇಜು ಸ್ಥಾಪನೆಗೆ ರೂ.25 ಕೋಟಿ ಅನುದಾನ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅಂತಿಮವಾಗಿ ರೂ.20 ಕೋಟಿ ಮಂಜೂರಾಗಿದೆ. ವಿಸ್ತೃತ ಯೋಜನೆ ತಯಾರಿಸಿ ಶೀಘ್ರದಲ್ಲೇ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಮುಂದಿನ ಎರೆಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡು ಇಂದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಂತಿಮ ಹಂತದಲ್ಲಿ ನೂತನ ಕಾಲೇಜಿನಲ್ಲಿ ಅಭ್ಯಸಿಸಬಹದು ಎಂದು ಆಶಾವಾದ ವ್ಯಕ್ತಪಿಡಿಸಿದರು.

ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಅದಿರ ಸಾಗಾಣಿಕೆಯಿಂದ ರಸ್ತೆ ಹಾಗೂ ರೈತರ ಬೆಳೆಗಳು ಹಾಳಾಗುತ್ತಿವೆ. ಇದನ್ನು ತಡೆಗಟ್ಟಲು ರೂ.250 ಕೋಟಿ ವೆಚ್ಚದಲ್ಲಿ ಗಣಿ ಪ್ರದೇಶಗಳಿಂದ ರೈತರ ಬೆಳೆಗೆ ಯಾವುದೇ ಹಾನಿ ಸಂಭವಿಸದ ರೀತಿಯಲ್ಲಿ ಅದಿರು ಸಾಗಾಟ ಮಾಡಲು ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ. ಈ ರಸ್ತೆಯನ್ನು ದಾವಣಗೆರೆ ಹಾಗೂ ತುಮಕೂರು ನೇರ ರೈಲು ಮಾರ್ಗದಲ್ಲಿನ ರೈಲ್ವೇ ನಿಲ್ದಾಣಕ್ಕೆ ಸಂಪರ್ಕಿಸುವ ಚಿಂತನೆಯಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

*ಸುಸಜ್ಜಿತ ಹಾಸ್ಟೆಲ್ ನಿರ್ಮಾಣ*

ನಗರದಲ್ಲಿ 3 ಸ್ಟಾರ್ ಹೋಟೆಲ್ ಮಾದರಿಯ ಸುಸಜ್ಜಿತ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ದೂರ ಊರುಗಳಿಂದ ಹಾಗೂ ನೆರೆ ರಾಜ್ಯ ಆಂದ್ರ ಪ್ರದೇಶದಿಂದ ನರ್ಸಿಂಗ್ ಹಾಗೂ ಇತರೆ ಕೋರ್ಸ್‌ಗಳನ್ನು ಓದಲು ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಾರೆ. ಇವರೆಲ್ಲರಿಗೂ ಹಾಸ್ಟೆಲ್ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಹೆಚ್.ಗುಡ್ಡದೇಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ.ಅದರಲ್ಲಿ 23 ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈ ಮಹಿಳಾ ಕಾಲೇಜುಗಳಲ್ಲಿ ಚಿತ್ರದುರ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹೆಚ್ಚು ವಿದ್ಯಾರ್ಥಿನಿಯರನ್ನು ಒಳಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. 2013-14 ರವರೆಗೆ ಚಿತ್ರದುರ್ಗ ನಗರದಲ್ಲಿ ಮಹಿಳಾ ಕಾಲೇಜು ಇರಲಿಲ್ಲ. ಆ ಸಮಯದಲ್ಲಿ ನಗರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾರಣಿಭೂತರಾದರು. ಕೇವಲ 45 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಈ ಮಹಿಳಾ ಕಾಲೇಜು ಇಂದು 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿ.ಎ, ಬಿ.ಕಾಂ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು 2018ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಸಮೀಪದಲ್ಲಿ 2 ಎಕರೆ 24 ಗುಂಟೆ ಜಮೀನು ಮಂಜೂರು ಮಾಡಿಸಿ, ಕಾಲೇಜಿನಲ್ಲಿ ಎಲ್ಲ ಮೂಲಭೂತ ಸೌಕರ್ಯ ಇರಬೇಕು ಎಂದು ಉದ್ದೇಶದಿಂದ ರೂ. 25 ಕೋಟಿಗೆ ಕೆಎಂಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ರೂ. 20 ಕೋಟಿ‌ ವೆಚ್ಚದಲ್ಲಿ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರತಿ ವರ್ಷವೂ ಒಂದರಿಂದ ಎರಡು ರ್ಯಾಂಕ್ ಗಳು ಲಭಿಸುತ್ತಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂತಿಮ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರಕ್ಷಿತ ಜಿ ಹುಲಗಿ (ಬಿ.ಕಾಂ), ವಿ.ಅನ್ನಪೂರ್ಣ (ಬಿ.ಎ) ಅವರನ್ನು ಸನ್ಮಾನಿಸಲಾಯಿತು.

 

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ.ಸಿ.ಬಸವರಾಜ, ಸಾಂಸ್ಕøತಿಕ ಸಮಿತಿ ಸಂಚಾಲಕ ಪ್ರೊ.ಆರ್.ಲೀಲಾವತಿ,
ಪ್ರಾಧ್ಯಾಪಕರಾದ ಡಾ.ಚನ್ನಕೇಶವ, ಡಾ.ಸಿದ್ದಪ್ಪ, ಶಕುಂತಲಾ, ಕುಮಾರಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ಎನ್.ಬಸಣ್ಣ ಗೌಡ ಇದ್ದರು.

[t4b-ticker]

You May Also Like

More From Author

+ There are no comments

Add yours