ಮೊಳಕಾಲ್ಮುರು:ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಲ್ಲಿ ಧ್ವನಿ ಎತ್ತಲು ಬಲ ತುಂಬಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಂಪುರದಲ್ಲಿ ಶನಿವಾರದಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು ಸಭೆ ಉದ್ಘಾಟಿಸಿ ಮಾತನಾಡಿದ ಸಚಿವ ಸುಧಾಕರ್,ಸ್ಥಳೀಯವಾಗಿ ಜನರಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ದೂರದ ಜಿಲ್ಲೆಯಿಂದ ಬಂದಿರುವ ಅಭ್ಯರ್ಥಿಗೆ ಮಣೆ ಹಾಕಿ ಮತ ವ್ಯರ್ಥ ಮಾಡಿಕೊಳ್ಳಬೇಡಿ. ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದ ಭರವಸೆಯಂತೆ ಯಥಾವತ್ತು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಈ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಜನಪರ ಸರ್ಕಾರವನ್ನು ಕೇಂದ್ರದಲ್ಲಿ ಪುನರ್ ಪ್ರತಿಸ್ಠಾಪಿಸಬೇಕಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲಿನಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯದ ಜನರು ಪಾವತಿಸುವ ರೂ 100 ತೆರಿಗೆ ಹಣದಲ್ಲಿ ನಮಗೆ ಸರಾಸರಿ ರೂ 13 ಮಾತ್ರ ವಾಪಾಸ್ಸಾಗುತ್ತಿದೆ.
ಇದನ್ನು ಈಚೆಗೆ ರಾಜ್ಯ ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ಮೂಲಕ ಪ್ರಶ್ನಿಸಿದೆ. ಇಂತಹ ಅನ್ಯಾಯಕ್ಕೆ ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್
ಸರ್ಕಾರದ ಕೈ ಬಲಪಡಿಸಬೇಕಿದೆ ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 25 ಗ್ಯಾರೆಂಟಿ
ಯೋಜನೆಗಳನ್ನು ಜಾರಿ ಭರವಸೆ ನೀಡಲಾಗಿದೆ. ಎಲ್ಲಾ ವರ್ಗಗಳ ಜನರ ಹಿತಕಾಯುವ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದು ಅಧಿಕಾರ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ಜಿಲ್ಲೆಯ 6 ಶಾಸಕ ಸ್ಥಾನಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಇನ್ನೂ 4 ವರ್ಷ ಅವಧಿಯನ್ನು ಹೊಂದಿದ್ದಾರೆ. ಈ ಬಾರಿ ನನ್ನನ್ನು ಆಯ್ಕೆ ಮಾಡಿದಲ್ಲಿ ಶಾಸಕರ ಜತೆಗೂಡಿ ಅಭಿವೃದ್ಧಿಗೆ
ಶ್ರಮಿಸಲಾವುದು. ಭದ್ರಾಮೇಲ್ದಂಡೆ ಯೋಜನೆ, ಶಿಕ್ಷಣ ಕಾರ್ಯಕ್ರಮಗಳು, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಬಡವರ ಬದುಕನ್ನು ಬದಲಾಯಿಸಿದೆ.ಗ್ಯಾರೆಂಟಿ ಯೋಜನೆಯಿಂದ ನೆಮ್ಮದಿ ಬದುಕು ನಡೆಸಲಿ ಸಹಕಾರಿಯಾಗಿದ್ದು ಕಳೆದ ಲೋಕಸಭೆಯಲ್ಲಿ ಗೆದ್ದ ಸಂಸದರು ಜನರ ನಿರೀಕ್ಚೆಯಂತೆ ಕೆಲಸ ಮಾಡಲಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಶೀರ್ವಾದ ಮಾಡುವ ಮೂಲಕಜಿಲ್ಲೆಯ ಅಭಿವೃದ್ಧಿ ಕಡೆ ಹೆಜ್ಜೆ ಹಾಕಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎನ್.ವೈ. ಗೋಪಾಲಕೃಷ್ಣ , ಕೆ.ಸಿ. ವೀರೇಂದ್ರ, ರಾಜ್ಯ ದ್ರಾಕ್ಷಾರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ ಬಾಬು, ಕಾರ್ಮಿಕ ಕಲ್ಯಾಣ ಮಂಡಳಿ ಉಪಾದ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್, ಮುಖಂಡರಾದ ಜಯಮ್ಮ ಬಾಲರಾಜ್, ಜಿ.ಎಸ್. ಕುಮಾರಗೌಡ, ಎಚ್.ಟಿ. ನಾಗೀರೆಡ್ಡಿ, ಜಿ. ಕೃಷ್ಣಮೂರ್ತಿ, ನಾಗಸಮುದ್ರ ಗೋವಿಂದಪ್ಪ, ಟಿ.ಕೆ. ಕಲೀಂವುಲ್ಲಾ, ಎಸ್. ಖಾದರ್ ಸೇರಿದಂತೆ ಹಲವರು ಇದ್ದರು.
[t4b-ticker]
+ There are no comments
Add yours