ಈ ಬಗ್ಗೆ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಅವರಿಗೆ ಪತ್ರ ಬರೆದಿರುವ ಅವರು, ‘ರಮೇಶ್ ಜಾರಕಿಹೊಳಿ ಅವರ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ದೂರನ್ನು ಹಿಂಪಡೆಯುತ್ತಿದ್ದೇನೆ’ ಎಂದಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಕ್ಕಿದ್ದು, ಇಂದು ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ದೂರುದಾರ ದಿನೇಶ್ ಕಲ್ಲಹಳ್ಳಿ ಹಿಂಪಡೆಯಲು ಮುಂದಾಗಿದ್ದಾರೆ.
‘ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೂರುದಾರ ₹5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ತರಲಿದೆ. ಮಾಹಿತಿ ನೀಡುವವರನ್ನೇ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ. ಇಂದಿನ ವ್ಯವಸ್ಥೆ ಆ ರೀತಿ ಆಗಿದೆ’ ಎಂದೂ ದಿನೇಶ್ ಹೇಳಿದ್ದಾರೆ.
‘ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದು ಸರಿಯಷ್ಟೇ. ಬಟ್ಟೆಯ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಹರಿಯುವುದು ಬಟ್ಟೆಯೇ ಎಂಬುದನ್ನು ಈ ಹಿಂದೆ ಮಹಿಳೆಯರ ವಿಷಯದಲ್ಲಿ ಬಳಕೆ ಮಾಡಲಾಗುತ್ತಿತ್ತು. ದುರಾದೃಷ್ಟವಶಾತ್ ಈಗಿನ ಸುಸಂಸ್ಕೃತ ನಾಗರಿಕ ಸಮಾಜದಲ್ಲಿ ಮಹಿಳೆಯರ ವಿಚಾರದಲ್ಲಿ ಇದೇ ರೀತಿ ನಡೆಯುತ್ತಿದೆ. ಸಚಿವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಸಿ.ಡಿ.ಯನ್ನು ಪೊಲೀಸರಿಗೆ ದೂರಿನ ಜೊತೆಗೆ ಒಪ್ಪಿಸಿದ್ದೆ. ಆದರೆ ಈಗ ಇಡೀ ಸಮಾಜದಲ್ಲಿ ಮಹಿಳೆಯ ಚಾರಿತ್ಯ ಹರಣ ನಡೆಯುತ್ತಿದೆ’ ಎಂದೂ ಹೇಳಿದ್ದಾರೆ.
‘ರಾಜಕೀಯ ಕೇಂದ್ರಿತ ಅಧಿಕಾರದಿಂದ ಸಂತ್ರಸ್ತೆಯನ್ನೇ ಆರೋಪಿಯನ್ನಾಗಿ ಮಾಡುವ ಹುನ್ನಾರ ನಡೆದಿದೆ. ಇದು ಬೇಸರ ತರಿಸಿದೆ. ದೂರು ನೀಡಿದ ಉದ್ದೇಶವನ್ನೇ ಮರೆತು ವ್ಯವಸ್ಥೆ ವರ್ತಿಸುತ್ತಿದೆ. ಸಂತ್ರಸ್ತೆ ಹಾಗೂ ನನಗೆ ಇದು ತಿರುಗುಬಾಣವಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಿ, ನಾನು ದೂರು ಹಿಂಪಡೆಯುತ್ತೇನೆ’ ಎಂದೂ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
[t4b-ticker]
+ There are no comments
Add yours