ಜಾನುವಾರುಗಳ ಚರ್ಮಗಂಟು ರೋಗ ಎಚ್ಚರಿಕೆ ವಹಿಸಲು ಸಲಹೆ: ಡಾ.ಕೆ.ಸಿ.ವೀರಣ್ಣ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಸೆಪ್ಟಂಬರ್ 23:
ಪಶು ವೈದ್ಯಾಧಿಕಾರಿಗಳು ರೈತರೊಂದಿಗೆ ಸ್ನೇಹ ಸಂಪರ್ಕ ಹೊಂದಿದ್ದರೆ ಜಾನುವಾರುಗಳ ಚರ್ಮಗಂಟು ರೋಗದ ವೈರಸ್‍ಅನ್ನು ತಡೆಗಟ್ಟಬಹುದು. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರನ್ನು ಆರ್ಥಿಕವಾಗಿ ಸಧೃಡವಾಗಿಸಬಹುದು ಎಂದು ಬೀದರ್ ಪಶುಸಂಗೋಪನೆ ಮತ್ತು ಮೀನುಗಾರಿಕೆ ಮಹಾವಿದ್ಯಾಲಯದ ಉಪಕುಲಪತಿ ಡಾ.ಕೆ.ಸಿ.ವೀರಣ್ಣ ತಿಳಿಸಿದರು.
ನಗರದ ಎಪಿಎಂಸಿ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ  ಜಾನುವಾರುಗಳಿಗೆ ಬರುವ ಚರ್ಮಗಂಟು ರೋಗ, ಆಫ್ರಿಕನ್ ಸ್ವೈನ್ ಫೀವರ್ ಹಾಗೂ ಯೋಜನಾ ವರದಿ ತಯಾರಿಕೆ ಕುರಿತು ಇಲಾಖೆಯ ಪಶು ವೈದ್ಯಾಧಿಕಾರಿಗಳಿಗೆ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಶು ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಾಧ್ಯಾಪಕರು ಹೈನುಗಾರಿಕೆ, ಮೀನುಗಾರಿಕೆಯಲ್ಲಿ ತೊಡಗಿರುವಂತಹ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ರೀತಿಯ ಸಂಶೋಧನೆಗಳು ನಡೆಸುತ್ತಿದ್ದಾರೆ. ಶಿಕ್ಷಣದಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಸಾಕಷ್ಟು ಬೇಡಿಕೆ ಇರುವಂತಹ ಒಂದು ಕ್ಷೇತ್ರವಾಗಿದೆ ಮತ್ತು ಪಶು ಸಂಗೋಪನೆ ಮತ್ತು ಮೀನುಗಾರಿಕೆ  ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಸಾಕಷ್ಟು ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಸೊಳ್ಳೆ ಮತ್ತು ಉಣ್ಣೆಯಿಂದ ಬರುವಂತಹ ಚರ್ಮಗಂಟು ರೋಗ ಭಾರತದಲ್ಲಿ 2019ರಲ್ಲಿ ಒರಿಸ್ಸಾದಲ್ಲಿ ಪತ್ತೆಯಾಗಿದೆ. ಈ ಚರ್ಮಗಂಟು ರೋಗವು ಕರ್ನಾಟಕದಲ್ಲಿ ಸಹ ಹಲವಾರು ಜಿಲ್ಲೆಗಳಲ್ಲಿ ಕಂಡು ಬಂದಿದೆ. ಕೇಂದ್ರ ಸರ್ಕಾರ ಚರ್ಮ ಗಂಟು  ರೋಗಕ್ಕೆ ಲಸಿಕೆಯನ್ನು ಕಂಡುಹಿಡಿದಿದ್ದು ವೈದ್ಯರು  ಶೀಘ್ರವಾಗಿ ತಮ್ಮ ವ್ಯಾಪ್ತಿಯಲ್ಲಿ ಈ ರೋಗವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕಾಗಿದೆ. ಆಫ್ರಿಕನ್ ಸ್ವೈನ್ ಜ್ವರ ಇದು ರೋಗಾಣುಗಳಿಂದ ಬರುವಂತಹ ಒಂದು ರೋಗವಾಗಿದೆ. ಭಾರತದಲ್ಲಿ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ ಹಾಗೂ ಕರ್ನಾಟಕದ ಹೊಸಕೋಟೆಯಲ್ಲಿ ಈ ರೋಗ ಪತ್ತೆಯಾಗಿದೆ ಇದರ ನಿಯಂತ್ರಣಕ್ಕೆ   ಸಂಶೋಧನೆಯ ನಡೆಸಲಾಗುತ್ತಿದೆ ಎಂದರು.
ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಹೊಸ ಹೊಸ ತಂತ್ರಜ್ಞಾನದ ಮಾಹಿತಿಯನ್ನು ನೀಡಬೇಕು ಈ ಕಾರ್ಯಗಾರದ ಫಲಶ್ರುತಿ ಎಲ್ಲಾ ರೈತರಿಗೂ ತಲುಪುವಂತೆ ಆಗಬೇಕು. ಎಲ್ಲರೂ ಒಟ್ಟಿಗೆ ಕೆಲಸ ನಿರ್ವಹಿಸಿದಾಗ ಯಶಸ್ಸು ಸಾಧ್ಯ ಇದರ ಜೊತೆಗೆ ಪಶುವೈದ್ಯಕೀಯ ಸಂಘ ಸಾಕಷ್ಟು ಕ್ರಿಯಾಶೀಲವಾಗಿದೆ ಸಮಾಜಕ್ಕೆ ಉತ್ತಮವದಂತಹ ಕೆಲಸವನ್ನು ನಿರ್ವಹಣೆ ಮಾಡುತ್ತದೆ ಹಾಗಾಗಿ ಈ ಸಂಘಕ್ಕೆ ನನ್ನ ಸಹಕಾರ ಸದಾ ಇದೆ ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಕಲ್ಲಪ್ಪ ಮಾತನಾಡಿ, ಚರ್ಮಗಂಟು ರೋಗಕ್ಕೆ ಈಗಾಗಲೇ ವಿಜ್ಞಾನಿಗಳು ಲಸಿಕೆಯನ್ನು ಕಂಡುಹಿಡಿಯಲಾಗಿದೆ ಜಾನುವಾರಗಳ ಚರ್ಮಗಂಟು ರೋಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ,  ಇದರ ಬಗ್ಗೆ ಮುನ್ನೆಚ್ಚರಿಕೆಯಿಂದ  ಎಲ್ಲಾ ವೈದ್ಯರಿಗೂ ಹೆಚ್ಚಿನ ಮಾಹಿತಿ ಇರಬೇಕು ಎಂಬ ಉದ್ದೇಶದಿಂದ ಈ ಒಂದು ಕಾರ್ಯಗಾರವನ್ನು ಮಾಡಲಾಗುತ್ತಿದೆ. ರೈತ ಸಮುದಾಯಕ್ಕೆ ಪೆಟ್ಟು ಬೀಳುವುದಕ್ಕಿಂತ ಮುಂಚೆ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ರೈತರಿಗೆ ಮಾಹಿತಿ ಇದ್ದರೆ ರೋಗವನ್ನು ತಡೆಗಟ್ಟಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಟಿ.ಗೋಪಾಲ್, ಗದಗ  ಪಶು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಬಿ.ಎಂ.ವೀರೇಗೌಡ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಎನ್.ಬಾಬುರತ್ನ, ಪಶುಪಾಲನಾ ಮತ್ತು ಪಶು ವೈದ್ಯ  ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಹರೀಶ್,  ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ತಿಪ್ಪೇಸ್ವಾಮಿ ಹಾಗೂ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours