ರೈತ ದಂಪತಿ ವಿಶೇಷ ತಳಿಗಳ ಸೀತಾಫಲ ಬೆಳೆದು ಉತ್ತಮ ಆದಾಯ

 

ಚಿತ್ರದುರ್ಗ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳ ಲಾಭ ಪಡೆದಿರುವ ಚಿತ್ರದುರ್ಗ ರೈತ ದಂಪತಿ ವಿಶೇಷ ತಳಿಗಳ ಸೀತಾಫಲ ಬೆಳೆದು ಉತ್ತಮ ಆದಾಯ ಗಳಿಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಚಿತ್ರದುರ್ಗ ತಾಲೂಕಿನ ಹಳವುದರ ಗ್ರಾಮದ ಟಿ.ನಿಂಗಾನಾಯ್ಕ ಹಾಗೂ ಮಂಜುಳಾಬಾಯಿ ದಂಪತಿ ನೈಸರ್ಗಿಕ ವಿಧಾನದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ, ತೋಟಗಾರಿಕೆಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ತಮ್ಮ ೩.೫೦ ಎಕರೆಯಲ್ಲಿ ೩ ವಿಶೇಷ ತಳಿಗಳ ಸುಮಾರು ೭೫೦ ಸೀತಾಫಲ ಗಿಡಗಳನ್ನು ನಾಟಿ ಮಾಡಿದ್ದು ಉತ್ತಮ ಇಳುವರಿ ಲಭಿಸಿದೆ.
ಐಐಎಚ್‌ಆರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ವಿಶೇಷ ತಳಿಯ ಅರ್ಕ ಸಹನದಲ್ಲಿ ಕಡಿಮೆ ಹಾಗೂ ಚಿಕ್ಕ ಬೀಜಗಳಿದ್ದು, ತಿರುಳು ಜಾಸ್ತಿಯಿರುವ ಮತ್ತು ಗಾತ್ರದಲ್ಲಿ ದೊಡ್ಡದಿರುವ ಕಾರಣ ಹೆಚ್ಚು ಬೇಡಿಕೆಯಿದೆ. ಅಷ್ಟೇ ಅಲ್ಲದೇ ಸಾಮಾನ್ಯ ತಳಿಯ ಸೀತಾಫಲ ಹಣ್ಣಾದ ಮೇಲೆ ೩-೪ ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ, ಆದರೆ ಅರ್ಕ ಸಹನ ಹಣ್ಣು ೭ ರಿಂದ ೮ ದಿನಗಳ ಕಾಲ ಕೆಡದೆ ಇದರ ವಿಶೇಷ ಗುಣ.
ಟಿ.ನಿಂಗಾನಾಯ್ಕ ಮಾತನಾಡಿ, ನಮ್ಮ ಮೂರುವರೆ ಎಕರೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪದ್ಧತಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ಪಡೆದು ಪ್ಯಾಕ್ ಹೌಸ್ ಮಾಡಿಕೊಂಡಿದ್ದು ಇದಕ್ಕೆ ಮಳೆ ನೀರು ಕೊಯ್ಲು ವಿಧಾನ ಅಳವಡಿಸಿದ್ದೇವೆ. ಪ್ರಮುಖ ಬೆಳೆಯಾಗಿ ಸೀತಾಫಲ ಹಾಕಿದ್ದು ಇದರಲ್ಲಿ ಸುಧಾರಿತ ತಳಿಯಾದ ಅರ್ಕ ಸಹನ ೬೦೦, ಅರ್ಕಾ ಸಹನ ತಳಿಗೆ ಸಹಾಯಕ ಬೆಳೆಯಾಗಿ ಬಾಲನಗರ್ ತಳಿಯ ಸುಮಾರು ೩೫ ರಿಂದ ೪೦ ಗಿಡಗಳು ಹಾಗೂ ಎನ್‌ಎಂಕೆ ಗೋಲ್ಡ್ ತಳಿಯ ಸುಮಾರು ೧೫೦ ಗಿಡಗಳನ್ನು ಹಾಕಿದ್ದು, ಗಿಡಗಳನ್ನು ನಾಟಿ ಮಾಡಿ ಸುಮಾರು ೩ ವರ್ಷಗಳ ನಂತರ ಬೆಳೆ ಕೈಗೆ ಬಂದಿದೆ. ನಿರೀಕ್ಷೆಗೂ ಮೀರಿದ ದರ ಲಭಿಸಿದ್ದು ಉತ್ತಮ ಆದಾಯ ಸಿಗುತ್ತಿದೆ. ಎರಡು ಎಕರೆಯಲ್ಲಿ ಈಗ ಫಸಲು ಬಂದಿದ್ದು, ಮುಂದಿನ ವರ್ಷ ಇನ್ನೂ ಒಂದೂವರೆ ಎಕರೆಯಲ್ಲಿ ಫಸಲು ಬರಲಿದೆ. ವರ್ಷಕ್ಕೆ ೧೫ ರಿಂದ ೨೦ ಲಕ್ಷ ಆದಾಯ ಸಿಗಲಿದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ವರ್ಷಕ್ಕೊಮ್ಮೆಯಂತೆ ಸುಮಾರು ೫೦ ರಿಂದ ೬೦ ವರ್ಷಗಳ ಕಾಲ ಫಸಲು ಪಡೆಯಬಹುದಾಗಿದೆ ಎಂದು ಹೇಳುತ್ತಾರೆ.

[t4b-ticker]

You May Also Like

More From Author

+ There are no comments

Add yours