ಬೆಂಗಳೂರು: ಭೂಮಿ ಖರೀದಿಸಿದವರು ಅರ್ಜಿ ಸಲ್ಲಿಸಿದ 24 ತಾಸಿನಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲೆಂದು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು. ಭೂಪರಿವರ್ತನೆಗೆ 6 ತಿಂಗಳ ಕಾಲಾವಕಾಶ ನೀಡುವ ಕಾಯ್ದೆ ರದ್ದುಪಡಿಸಲು ಸರ್ಕಾರ ತೀರ್ಮಾನಿಸಲಾಗಿದೆ.
ಈ ಕಾನೂನು ರದ್ದತಿಯಿಂದ ಭೂಮಿ ಖರೀದಿಗೆ ಬಂಡವಾಳ ಹೂಡಿದವರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವುದು, ಬಡ್ಡಿ ಹೊರೆ ಹೊತ್ತುಕೊಳ್ಳುವುದು ತಪ್ಪಲಿದೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಒಳ ವ್ಯವಹಾರಗಳಿಗೆ ಕಡಿವಾಣ: ಭೂ ಪರಿವರ್ತನೆ ಕಲ್ಪಿಸಿದ ಕಾಲಾವಕಾಶವು ಒಳ ವ್ಯವಹಾರಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರತಿ ಎಕರೆಗೆ 5 ಲಕ್ಷ ರೂ. ಅನ್ನು ಅಧಿಕಾರಿಗಳ ಮಟ್ಟದಲ್ಲಿ ಅರ್ಜಿದಾರರು ಹಣ ನೀಡುವ ವ್ಯವಸ್ಥೆ ಇದೆೆ. ಈ ರೀತಿಯ ಒಳ ವ್ಯವಹಾರಗಳಿಂದ ವಾರ್ಷಿಕ 400 ಕೋಟಿ ರೂ. ವಹಿವಾಟು ನಡೆಯುವ ಅಂದಾಜಿದ್ದು, ಕೈಗಾರಿಕೆ ಇನ್ನಿತರ ಉದ್ದೇಶಗಳಿಗೆ ಅರ್ಜಿ ಸಲ್ಲಿಸಿದವರು ಅಲೆದು ಬೇಸತ್ತುಕೊಳ್ಳುವ ಪರಿಸ್ಥಿತಿಯಿದೆ. ಅನಗತ್ಯ ಅಡೆತಡೆ, ಹೊರೆ ನಿವಾರಣೆಗಾಗಿ ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ನಿರ್ಧರಿಸಿದ್ದು, ಇದರಿಂದ ಕೋಟ್ಯಂತರ ರೂ.ಗಳ ಒಳ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ರೈತರ ಹಿತ ಹಾಗೂ ಕೃಷಿ-ಕೈಗಾರಿಕೆ ನಡುವಿನ ಬಾಂಧವ್ಯ ವೃದ್ಧಿ, ಕೃಷಿಗೆ ಯುವ ಸಮೂಹವನ್ನು ಆಕರ್ಷಿಸುವ ಉದ್ದೇಶದಿಂದ ಭೂ ಕಂದಾಯ ಕಾಯ್ದೆ ಕಲಂ 79ಎ ಮತ್ತು ಬಿ ರದ್ದು ಮಾಡಿರುವುದು ಕ್ರಾಂತಿಕಾರಕ ನಿರ್ಧಾರವಾಗಿದೆ. ನಿರೀಕ್ಷೆಯಂತೆ ಉತ್ತಮ ಸ್ಪಂದನೆ ದೊರೆತಿದ್ದು, ಇದರಿಂದ ಸ್ಪೂರ್ತಿ ಪಡೆದು ಭೂ ಪರಿವರ್ತನೆ ಕಾಯ್ದೆ ರದ್ದು ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಅಶೋಕ್ ಹೇಳಿದರು.
[t4b-ticker]
+ There are no comments
Add yours