ಅಂತರ್ಜಲ ವೃದ್ಧಿ ಹಾಗೂ ನೀರಿನ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ ಯೋಜನೆ ಜಾರಿಗೆ: ಸಚಿವ ಜೆ.ಸಿ.ಮಾಧುಸ್ವಾಮಿ.

 

ಚಿತ್ರದುರ್ಗ: ಅಂತರ್ಜಲ ವೃದ್ಧಿ ಹಾಗೂ ನೀರಿನ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದೆ. ಈ ಕಾರ್ಯಕ್ರಮವು ಶೇ.100ರಷ್ಟು ಸಮುದಾಯದ ಸಹಭಾಗಿತ್ವದಲ್ಲಿ ನಡೆಯಲಿದ್ದು, ಅಂತರ್ಜಲ ವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಇಲ್ಲಿನ ಶ್ರೀಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಸೋಮವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಡಿಪಿಎಂಯು ಅಟಲ್ ಭೂಜಲ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಮೂರು ಹಂತದಲ್ಲಿ ಯೋಜನೆ ರೂಪಿಸಿಲಾಗಿದ್ದು, ಮೊದಲ ಹಂತದಲ್ಲಿ ಮೇಲ್ಪೈ ನೀರು ಉಳಿಸಲು ಯೋಜನೆ ತಯಾರಿಸುವುದು, ಎರಡನೇಯದಾಗಿ ನೀರನ್ನು ಹೇಗೆ ಬಳಸಬೇಕು ಎಂಬುವುದರ ಕುರಿತು ಯೋಜನೆ ಮಾಡುವುದು. ಮೂರನೇಯದಾಗಿ ನೀರನ್ನು ಸರಬರಾಜು ಮಾಡುವುದರ ಕುರಿತು ಯೋಜನೆ ತಯಾರಿಸಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಮೇಲ್ಪೈ ನೀರು ಉಳಿಸುವ ಯೋಜನೆಗಾಗಿ ಎಲ್ಲೆಲ್ಲಿ ಅಂತರ್ಜಲ ಮಟ್ಟ ಹೇಗಿದೆ, ಅದು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳವುದಕ್ಕಾಗಿ ಎನ್‍ಜಿಒಗಳನ್ನು ನೇಮಕ ಮಾಡಿ ಭೂಮಿಯ ಅಂತರ್ಜಲದ ಬಗ್ಗೆ ಈಗಾಗಲೇ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ನಾವು ಅನಗತ್ಯವಾಗಿ ನೀರನ್ನು ಬಳಸುತ್ತಿದ್ದೇವೆ.  ಪ್ರಕೃತಿಯಲ್ಲಿರುವ ಶೇ.2 ರಿಂದ 3ರಷ್ಟು ನೀರನ್ನು ಮಾತ್ರ ಬಳಸುತ್ತಿದ್ದೇವೆ. ನೀರು ಮರು ಉತ್ಪತ್ತಿಯಾಗುವುದಿಲ್ಲ. ಆದರೆ ನೀರನ್ನು ರಿಸೈಕ್ಲಿಂಗ್ ಮಾಡಬೇಕಿದೆ. ನೀರನ್ನು ಅನಗತ್ಯವಾಗಿ ಬಳಸಬಾರದು ಎಂದು ಸಚಿವರು ಸಲಹೆ ಎಂದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯು ತುಂತುರು ಹಾಗೂ ಹನಿನೀರಾವರಿಗೆ ಪದ್ಧತಿಗೆ ಹೆಚ್ಚು ಒತ್ತು ನೀಡುತ್ತಿದೆ. ಭೂಮಿಯಿಂದ ಅವಿಯಾಗುವ ನೀರಿನ ಪ್ರಮಾಣ ಕಡಿಮೆಮಾಡಬೇಕಿದೆ. ಹಾಗಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಜಿಲ್ಲಾ ಪಂಚಾಯತ್ ಸೇರಿದಂತೆ ಅನೇಕ ಇಲಾಖೆಗಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗುವುದು. ಈ ಯೋಜನೆಗೆ ಕೇಂದ್ರ ಸರ್ಕಾರವು ರೂ. 1100 ಕೋಟಿ ಅನುದಾನ ನೀಡಿದೆ. ಇದರ ಜೊತೆಗೆ ಆಯಾ ಇಲಾಖೆಯ ಅನುದಾನವನ್ನು ಜೋಡಿಸಿಕೊಂಡು ಕಾರ್ಯನಿರ್ವಹಿಸಲಾಗುವುದು ಹಾಗೂ ಎನ್‍ಆರ್‍ಇಜಿ ಅನುದಾನವನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸೂಕ್ಷ್ಮ ನೀರಾವರಿಗೆ ಕ್ರಮ:ನೀರಿನ ಸಂರಕ್ಷಣೆಗೆ ಸೂಕ್ಷ್ಮ ನೀರಾವರಿ ಪದ್ದತಿಯನ್ನು ಅಳಡಿಸಿಕೊಳ್ಳಬೇಕಾಗಿದ್ದು ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಾವು ವಾಟರ್ ಪಾಲಿಸಿ ಮಾಡಲು ಹೊರಟಿದ್ದೇವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಪ್ರಸ್ತಾಪವಾಗಿತ್ತು. ಕೃಷಿಯಲ್ಲಿ ನೀರಿನ್ನು ಹಾಯಿಸುವ ಮೂಲಕ ಬೆಳೆಯುವ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡದೆ ಎಲ್ಲಾ ಬೆಳೆಗಳಿಗೂ ಸೂಕ್ಷ್ಮ ಮತ್ತು ತುಂತುರು ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ.

ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸಿಡಿಗೆ ಕ್ರಮ;
ಅಡಿಕೆ ಬೆಳೆಗೆ ಹನಿನೀರಾವರಿ ಸಬ್ಸಿಡಿ ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಹೆಚ್ಚು ಅಡಿಕೆ ಬೆಳೆಯುತ್ತಿದ್ದು, ಅಡಿಕೆ ಬೆಳೆಗೆ ಹನಿನೀರಾವರಿ ಸಬ್ಸಿಡಿ ನೀಡುವಂತೆ ಇಲಾಖೆ ವತಿಯಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸರ್ಕಾರ ಬೇಡಿಕೆ ಈಡೇರಿಸಿದರೆ ಅಡಿಕೆ ಬೆಳೆಗೆ ಹನಿನೀರಾವರಿ ಸಬ್ಸಿಡಿ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.
ಮುರುಘಾಮಠದ ಶ್ರೀಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಜೀವನದ ನಿಜವಾದ ಭದ್ರತೆ ಅದು ಜಲ ಭದ್ರತೆಯಾಗಿದೆ. ಜಲಸಂಪತ್ತು ಹೇರಳವಾಗಿದ್ದರೆ ನಾಡಿನಲ್ಲಿ ಯಾವುದೇ ಕೊರತೆಗಳಿರುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆಯಾಗಿದೆ. ನೀರಿನ ಕೊರತೆಯ ನಡುವೆಯೂ ಜಿಲೆಯಲ್ಲಿ ಹೆಚ್ಚಿನ ಆಳಕ್ಕೆ ಕೊಳವೆಬಾವಿಗಳನ್ನು ಕೊರೆಸುತ್ತಿರುವ ದುಸ್ಥಿತಿ ಇದೆ ಎಂದರು. ಹಾಗಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ,ಅಟಲ್ ಭೂಜಲ ಯೋಜನೆ ಮತ್ತು ಜಲಜೀವನ್ ಮಿಷನ್ ಯೋಜನೆ ಮುಂದಿನ ಪೀಳಿಗೆಗೆ ಅನುಕೂಲವಾಗುವ ಮಹತ್ವದ ಕಾರ್ಯಕ್ರಮವಾಗಿದೆ. ಈ ಯೋಜನೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡುವುದರ ಜೊತೆಗೆ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.
ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಮಾತನಾಡಿ, ಅಟಲ್ ಭೂಜಲ ಯೋಜನೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019 ಡಿಸೆಂಬರ್ 25ರಂದು ಘೋಷಣೆ ಮಾಡಿದರು. ನಂತರ ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಬೇಕಾದ ಎಲ್ಲ ರೀತಿಯ ಪ್ರಾಥಮಿಕ ಸಿದ್ಧತೆಗಳನ್ನು ಕೈಗೊಂಡು ಈ ಯೋಜನೆ ಅನುಷ್ಠಾನಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಅಂತರ್ಜಲ ಅತಿ ಬಳಕೆಯ ತಾಲ್ಲೂಕುಗಳೆಂದು ವರ್ಗೀಕರಿಸಲಾಗಿದ್ದು, ಸಮುದಾಯ ಸಹಭಾಗಿತ್ವ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ರೂಪಿಸಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುವುದು ಎಂದರು.
ಜಿಲ್ಲೆಯ ವಾಣಿವಿಲಾಸ ಜಲಾಶಯದ ನೀರನ್ನು ಜಿಲ್ಲೆಯ ಜನರು ಸಮಪರ್ಕವಾಗಿ ಬಳಸಿಕೊಂಡರೆ ಎಲ್ಲರಿಗೂ ನೀರು ಲಭ್ಯವಾಗುತ್ತದೆ. ಆದರೆ ನೀರಿನ ಬಳಕೆ ಮಿತವ್ಯಯಕರವಾಗಿ ಉಪಯೋಗಿಸಿದರೆ ಹೆಚ್ಚಿನ ಅನುಕೂಲ ಪಡೆಯಬಹುದು ಎಂದು ಸಲಹೆ ನೀಡಿದರು.
ಅಟಲ್ ಭೂ ಜಲಯೋಜನೆಯ ಜಲಭದ್ರತಾ ಯೋಜನೆಯ ಯಶಸ್ವಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ 14 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಬಯಲು ಸೀಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಜೀವನ್‍ಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಸೇರಿದಂತೆ ಜಿಲ್ಲೆಯ ಐದು ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours