ಹೊಳಲ್ಕೆರೆ ಪಟ್ಟಣದ ಉದ್ಯಾನವನವೊಂದರಲ್ಲಿ ಸಸಿ ನೆಡುವುದರ ಮೂಲಕ ಹೊಳಲ್ಕೆರೆ ಪುರಸಭೆ ವತಿಯಿಂದ ದಿನಾಂಕ: 05.06.2021ರಂದು ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಹೊಳಲ್ಕೆರೆ ಪುರಸಭೆಯ ಸದಸ್ಯರಾದ ಸೈಯದ್ ಸಜೀಲ್, ವಿಜಯಸಿಂಹ ಖಾಟ್ರೋತ್, ಸೈಯದ್ ಮನ್ಸೂರ್, ಆರೋಗ್ಯ ನಿರೀಕ್ಷಕರಾದ ನಾಗಭೂಷಣ್, ಕಿಶೋರ್ ಹಾಗೂ ಇನ್ನಿತರೆ ಪುರಸಭಾ ಸಿಬ್ಬಂದಿಗಳು ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎ ವಾಸಿಂ ರವರು ಮಾತನಾಡಿ ಹಸಿರೀಕರಣ ಹೆಚ್ಚಾದಲ್ಲಿ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಾಧ್ಯ. ನಾವು ಪ್ರತಿ ವರ್ಷವೂ ಹೊಳಲ್ಕೆರೆ ಪಟ್ಟಣ ವ್ಯಾಪ್ತಿಯಲ್ಲಿ ಮಳೆಗಾಲದ ಸಮಯದಲ್ಲಿ ಸಸಿಗಳನ್ನು ನೆಡುತ್ತಾ ಬಂದಿದ್ದು ಕಳೆದ ಬಾರಿ ಘನತ್ಯಾಜ್ಯ ವಿಲೇವಾರಿ ಘಟಕ ಒಳಗೊಂಡಂತೆ ಪಟ್ಟಣದ ಹಲೆವೆಡೆ ಸಸಿಗಳನ್ನುನೆಟ್ಟು ಬೆಳಸಲಾಗಿದೆ. ಜಲಶಕ್ತಿ ಅಭಿಯಾನದ ಮೂಲಕ ಹಸಿರೀಕರಣ, ಮಳೆ ನೀರು ಕೊಯ್ಲು, ನೀರಿನ ಮೂಲಗಳ ಪುನಶ್ಚೇತನದಂತಹ ಕಾರ್ಯಗಳನ್ನು ಹೊಳಲ್ಕೆರೆ ಪುರಸಭೆ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಸಿ ನೆಡುವ ಕೆಲಸವನ್ನು ಕೇವಲ ಒಂದು ದಿನಕ್ಕಷ್ಟೇ ಸೀಮಿತಗೊಳಿಸದೆ, ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯ ಅಗಲೀಕರಣ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಗಲೀಕರಣ ಪೂರ್ಣಗೊಂಡ ಬಳಿಕ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದರ ಮೂಲಕ ಪಟ್ಟಣದಲ್ಲಿ ಹಸೀರೀಕರಣ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ, ಪಟ್ಟಣದ ನಾಗರೀಕರಾದ ನಾವೆಲ್ಲರೂ ಸಹ ಸ್ವಯಂಪ್ರೇರಿತರಾಗಿ ಸೂಕ್ತ ಪ್ರದೇಶದಲ್ಲಿ ಒಬ್ಬೊಬ್ಬರು ಒಂದೊಂದು ಗಿಡ ನೆಟ್ಟು ಪೋಷಣೆ ಮಾಡಿ ಸಾಲು ಮರದ ತಿಮ್ಮಕ್ಕನವರ ಹಾದಿಯನ್ನು ಅನುಸರಿಸಿದರೆ ಹೊಳಲ್ಕೆರೆಯನ್ನು ಮುಂದಿನ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದು ಎಂದು ಅಧ್ಯಕ್ಷರಾದ ಆರ್ ಎ ಅಶೋಕ್ ತಿಳಿಸಿದರು
ಉಪಾಧ್ಯಕ್ಷರಾದ ಕೆ.ಸಿ. ರಮೇಶ್ ರವರು ಮಾತನಾಡಿ ಹಸಿರು ಕಣ್ಣಿಗೆ ತಂಪು ನೀಡುವುದರ ಜೊತೆಗೆ ಮನುಷ್ಯನ ಜೀವ ರಕ್ಷಕವಾದ ಆಮ್ಲಜನಕವನ್ನು ಒದಗಿಸಿ ಮನುಷ್ಯ ಆರೋಗ್ಯವಂತನಾಗಿ ಬಾಳಲು ಸಹಕಾರಿಯಾಗಿರುತ್ತದೆ. ಬದಲಾದ ಜೀವನ ಶೈಲಿ ವಾಹನಗಳ, ಕೈಗಾರಿಕೆಗಳ ಹೆಚ್ಚಳಕ್ಕೆ ಕಾರಣವಾಗಿದ್ದು ನಾವು ಹೆಚ್ಚು ಹೆಚ್ಚು ಹಸರೀಕರಣ ಮಾಡುವುದರ ಮೂಲಕ ಮುಂದಿನ ಪೀಳಿಗೆಯು ಆರೋಗ್ಯಕರ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
[t4b-ticker]
+ There are no comments
Add yours