ಚಿತ್ರದುರ್ಗ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅಗತ್ಯವಿದ್ದು ಕಾಲೇಜುಗಳಲ್ಲಿ ನೀಡುವ ಉಚಿತ ತರಬೇತಿಯನ್ನು ಮನಸ್ಸಿಟ್ಟು ಕಲಿತರೆ ಅವಕಾಶಗಳು ಕೈಬೀಸಿ ಕರೆಯುತ್ತವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಮತ್ತು ಇನ್ ಫೋಸಿಸ್ ಕಂಪನಿಯ ವತಿಯಿಂದ ಉಚಿತ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಗಳನ್ನು ವಿತರಿಸಿ ಮಾತನಾಡಿದರು.
ರೋಟರಿ ಕ್ಲಬ್ ಮತ್ತು ಇನ್ ಫೋಸಿಸ್ ಕಂಪನಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿನ ಸರ್ಕಾರಿ ಕಾಲೇಜುಗಳಿಗೆ ಒಟ್ಟು 440 ಕಂಪ್ಯೂಟರ್ ಉಚಿತ ಕೊಡುಗೆಯಾಗಿ ನೀಡಿದ್ದು ಇದರಲ್ಲಿ ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 110 ಕಂಪ್ಯೂಟರ್ ಉಚಿತವಾಗಿ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನವನ್ನು ವೃದ್ದಿಸಿಕೊಳ್ಳಲು ಸುವರ್ಣ ಅವಕಾಶವಾಗಿದೆ. ರಾಜ್ಯ ಸರ್ಕಾರ ಸಹ ಲ್ಯಾಪ್ ಟಾಪ್ ಮತ್ತು ಟ್ಯಾಬ್ ವಿತರಣೆ ಮಾಡುತ್ತಿದ್ದು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆಯು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ಸಂಸ್ಥೆಯಾಗಿದೆ. ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ.ವಿದ್ಯಾರ್ಥಿಗಳು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು.ಉನ್ನತ ಶಿಕ್ಷಣ ಸ್ಥಾನಕ್ಕೆ ತಲುಪಿದ ನಂತರ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಂಪ್ಯೂಟರ್ ಮೂಲಕ ವಿದ್ಯಾರ್ಥಿ ಸಮೂಹವು ಜಗತ್ತಿನ ಎಲ್ಲಾ ಘಟನೆಗಳನ್ನು ಅಂಗೈಯಲ್ಲಿ ನೋಡಬಹುದು. ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ಮೊದಲು ಹುಡುಕಿಕೊಂಡ ಕಂಪ್ಯೂಟರ್ ಸೆಂಟರ್ ಹತ್ತಿರ ಸಾಲುಗಳಲ್ಲಿ ಹಣ ನೀಡಿ ಪಡೆಯಬೇಕಿತ್ತು ಆದರೆ ಈಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಉಚಿತವಾಗಿ ಮಾಹಿತಿ ಪಡೆಯುವ ಜೊತೆಗೆ ಸಮಯ ಉಳಿತಾಯ ಆಗುತ್ತದೆ. ಸಾವಿರಾರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇದ್ದು ಸಮಯ ನಿಗದಿ ಮಾಡಿಕೊಂಡು ಎಲ್ಲಾರೂ ಸಹ ಕಂಪ್ಯೂಟರ್ ತರಬೇತಿ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರಾಘವೇಂದ್ರ ಆಚಾರ್, ರೋಟರಿ ಕ್ಲಬ್ ಜ್ಯೋತಿ ಲಕ್ಷ್ಮಣ್, ರವೀಂದ್ರ, ಶಿವಕುಮಾರ್ ಮತ್ತು ಕಾಲೇಜಿನ ಉಪನ್ಯಾಸಕರು ಇದ್ದರು.
[t4b-ticker]
+ There are no comments
Add yours