ಬೆಂಗಳೂರು, ಏ.28- ಭಗ್ನಪ್ರೇಮಿಯ ಆಸಿಡ್ ದಾಳಿಯ ಪೈಶಾಚಿಕ ಕೃತ್ಯಕ್ಕೆ ಬದುಕಿನಲ್ಲಿ ಹೊಂಗನಸು ಕಾಣುತ್ತಿದ್ದ ಯುವತಿ ಬಾಳು ಕಮರುವಂತಾಗುವ ಘಟನೆ ಉದ್ಯಾನನಗರಿ ಬೆಂಗಳೂರಲ್ಲಿ ನಡೆದಿದೆ.
ಬಹುದಿನಗಳ ನಂತರ ನಗರದಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಭಗ್ನಪ್ರೇಮಿ ನಡೆಸಿರುವ ಆಸಿಡ್ ದಾಳಿಯಿಂದ ನಗರ ತಲ್ಲಣಗೊಳ್ಳುವಂತಾಗಿದೆ.ಸುಂಕದಕಟ್ಟೆಯ ಬಸ್ ನಿಲ್ದಾಣದ ಸಮೀಪದ ಮುತ್ತೂಟ್ ಫಿನ್ಕಾರ್ಪ್ ಬಳಿ ಬೆಳಿಗ್ಗೆ 8-30 ರಿಂದ 8-45 ರ ಸುಮಾರಿಗೆ ಭಗ್ನಪ್ರೇಮಿ ನಡೆಸಿದ ಆಸಿಡ್ ದಾಳಿಯಿಂದ ಯುವತಿಯ ಕತ್ತು, ಬೆನ್ನು, ತಲೆ ಭಾಗಕ್ಕೆ ಸುಟ್ಟಗಾಯಗಳಾಗಿವೆ.ಗಾಯಾಳು 23 ವರ್ಷದ ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.
ಕೃತ್ಯ ನಡೆಸಿ ಪರಾರಿಯಾಗಿರುವ ಹೆಗ್ಗನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಭಗ್ನ ಪ್ರೇಮಿ ನಾಗೇಶ್(27) ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಯುವತಿಯು ಎಂ ಕಾಂ ವಿದ್ಯಾಭ್ಯಾಸ ಮಾಡಿದ್ದು, ಮುತೂಟ್ ಫಿನ್ಕಾರ್ಪ್ನಲ್ಲಿ 9 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಳು. ನಾಗೇಶ್ ಪ್ರೀತಿಸುವಂತೆ ಆಕೆಯ ಹಿಂದೆ ಬಿದ್ದಿದ್ದ. ಆದರೆ ಯುವತಿಯು ನೀವು ನನಗೆ ಅಣ್ಣನ ರೀತಿ ಎಂದಿದ್ದಳು, ಆದರೂ ಆಕೆಯನ್ನು ಪ್ರೀತಿಸುವಂತೆ ನಾಗೇಶ್ ಕಾಡತೊಡಗಿದ್ದ.ಮುತ್ತೂಟ್ ಫಿನ್ ಕಾರ್ಪ್ ಬಳಿ ಬೆಳಿಗ್ಗೆ ೮ರ ವೇಳೆ ಯುವತಿಯನ್ನು ಆಕೆಯ ತಂದೆ ಬೈಕ್ನಲ್ಲಿ ಕರೆದುಕೊಂಡು ಕೆಲಸಕ್ಕೆ ಬಿಟ್ಟುಹೋಗಿದ್ದರು.
ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ನಾಗೇಶ್ ಯುವತಿಯ ಜೊತೆ ಪ್ರೀತಿಸುವ ವಿಚಾರದಲ್ಲಿ ಜಗಳ ಮಾಡಿ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ಘಟನೆಯಿಂದ ಗಾಯಗೊಂಡ ಯುವತಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರೇಮಾಂಕುರ:
ಯುವತಿಯು ಮೊದಲು ನಾಗೇಶ್ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ನಲ್ಲಿಯೇ ಕೆಲಸ ಮಾಡಿಕೊಂಡಿದ್ದಳು. ಆ ಸಂದರ್ಭದಲ್ಲಿ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ವರ್ಷದಿಂದ ಇಬ್ಬರೂ ಪ್ರೀತಿಸುತ್ತಾ ಇದ್ದರು. ಇದ್ದಕ್ಕಿದ್ದಂತೆ ಇಬ್ಬರ ನಡುವೆ ಬಿರುಕು ಉಂಟಾಗಿ ಲವ್ ಬ್ರೇಕ್ ಅಪ್ ಆಗಿತ್ತು ಎಂದು ತಿಳಿದುಬಂದಿದೆ.ಯುವತಿಯು ಕೆಲಸ ಮಾಡುತ್ತಿದ್ದ ಮುತ್ತೊಟ್ ಬಳಿ ಹೋಗಿ ನಿನ್ನೆ ಸಂಜೆ ಬಂದಿದ್ದ ನಾಗೇಶ್ ಕ್ಯಾತೆ ತೆಗೆದಿದ್ದ. ನೀನು ನನ್ನನ್ನೇ ಮದುವೆಯಾಗಬೇಕು, ಇಲ್ಲದಿದ್ದರೆ ನಿನ್ನ ಜೀವಂತವಾಗಿ ಇರಲು ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಲಭಿಸಿದೆ.
ಮುಂದಿನ ತಿಂಗಳು ,8 ರಂದು ಯುವತಿ ಅಕ್ಕನ ಮದುವೆ ನಿಶ್ಚಯ ಆಗಿತ್ತು. ಅದೇ ಸಂದರ್ಭದಲ್ಲಿ ಪ್ರಿಯತಮೆಯ ಮದುವೆ ಕೂಡ ಮಾತುಕತೆ ನಡೆದಿತ್ತು. ಒಟ್ಟಿನಲ್ಲಿ ಇದೀಗ ಯುವತಿ ಬೇರೊಬ್ಬರ ಮದುವೆ ಆಗುವ ಭಯಕ್ಕೆ ಇದೀಗ ನಾಗೇಶ್ ಯುವತಿ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
+ There are no comments
Add yours