ಚಿತ್ರದುರ್ಗ: ಕಾಂಗ್ರೆಸ್ ಯುವ ನೇತಾರ ರಾಹುಲ್ಗಾಂಧಿರವರ ಭಾರತ್ ಜೋಡೋ ಐಕ್ಯತಾ ಯಾತ್ರೆ ಎಲ್ಲಾ ಜಾತಿ, ಧರ್ಮದವರನ್ನು ಬೆಸೆಯುವ ಪಾದಯಾತ್ರೆ ಎಂದು ಕೆ.ಜಿ.ಎಫ್.ಬಾಬು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ಗಾಂಧಿ ಭಾರತ್ ಜೋಡೋ ಐಕ್ಯತಾ ಯಾತ್ರೆ ಜಿಲ್ಲೆಗೆ ಪ್ರವೇಶಿಸಿದ್ದು, ಚಳ್ಳಕೆರೆಯಲ್ಲಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ನಂತರ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ನಿವಾಸಕ್ಕೆ ಭೇಟಿ ನೀಡಿ ಪತ್ರಿಕೆಯೊಂದಿಗೆ ಮಾತನಾಡುತ್ತ ದೇಶಾದ್ಯಂತ ಪಾದಯಾತ್ರೆಯುದ್ದಕ್ಕೂ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು ಸಮುದಾಯದವರನ್ನು ಮಾತನಾಡಿಸಿ ಸಾಗುತ್ತಿರುವ ರಾಹುಲ್ಗಾಂಧಿ ಉತ್ತಮವಾದ ಚಿಂತನೆಯಿಟ್ಟುಕೊಂಡು ಪಾದಯಾತ್ರೆ ಹೊರಟಿದ್ದಾರೆ. ಕೋಮುವಾದಿ ಬಿಜೆಪಿ.ಯಿಂದ ಬೇಸತ್ತಿರುವ ಜನ ಭಾರತ್ ಜೋಡೋ ಯಾತ್ರೆಗೆ ಬೆಂಬಲಿಸುತ್ತಿದ್ದಾರೆ. ಇದು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ವರದಾನವಾಗಲಿದೆ ಎಂದರು.
ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದೇನೆ. ನನ್ನ ಮುತ್ತಜ್ಜ, ಅಜ್ಜ, ತಂದೆ ಎಲ್ಲರೂ ಕಾಂಗ್ರೆಸ್ಗಾಗಿ ಹಗಲು-ರಾತ್ರಿ ದುಡಿದಿದ್ದಾರೆ. ನಮ್ಮದು ಕಾಂಗ್ರೆಸ್ ಕುಟುಂಬ. ಚಿಕ್ಕಪೇಟೆ ಕ್ಷೇತ್ರದಲ್ಲಿ ಒಂದು ಮನೆಗೆ ಐದು ಸಾವಿರದಂತೆ ಅರವತ್ತು ಸಾವಿರ ಮನೆಗಳಲ್ಲಿನ ಬಡ ಮಕ್ಕಳ ಶಿಕ್ಷಣಕ್ಕಾಗಿ 350 ಕೋಟಿ ರೂ.ಸ್ಕಾಲರ್ಶಿಪ್ ನೀಡಿದ್ದೇನೆ. ಸ್ಲಂ ಏರಿಯಾದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಒಂದು ಮನೆಗೆ ಆರು ಲಕ್ಷದಂತೆ ಮೂರು ಸಾವಿರ ಮನೆಗಳನ್ನು ಕಟ್ಟಿಸಿಕೊಡಲು ಮುಂದಾಗಿದ್ದೇನೆ. ಇದಕ್ಕಾಗಿ 180 ಕೋಟಿ ರೂ.ಖರ್ಚಾಗಲಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರುಗಳ ಸಹಕಾರ ಬೇಕು ಎಂದು ಮನವಿ ಮಾಡಿದರು.
ಉಮರ್ ಚಾರಿಟಬಲ್ ಫೌಂಡೇಷನ್ ಕಂಪನಿಯಿಂದ ಬರುವ ಲಾಭದಲ್ಲಿ ಕೆ.ಎಸ್.ಗಾರ್ಡನ್, ರಾಮಣ್ಣ ಗಾರ್ಡ್ನ್, ಡಿಸೋಜ ಗಾರ್ಡ್ನ್, ಸಿಮೆಂಟ್ ಗಾರ್ಡ್ನ್, ವಿನೋಬಾ ನಗರ್, ಬಡಾಮಕಾನ್ ಆರು ಕಡೆ 16400 ರೂ.ಗಳ ಚೆಕ್ ನೀಡಿದ್ದೇನೆ. ಇಲ್ಲಿಯವರೆಗೂ ಎಂಟು ಕೋಟಿ ನಲವತ್ತು ಲಕ್ಷ ರೂ.ಗಳನ್ನು ವಿತರಿಸಿದ್ದೇನೆ. ಯಾರು ಮಾಡದಂತ ಅಭಿವೃದ್ದಿ ಕೆಲಸ ಮಾಡಬೇಕೆಂಬುದು ನನ್ನ ಬಯಕೆ. ಕ್ಷೇತ್ರದ ಜನರ ಹಿತಕ್ಕಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಹೈಕಮಾಂಡ್ ಚಿಕ್ಕಪೇಟೆ ಕ್ಷೇತ್ರದಲ್ಲಿ ಸರ್ವೆ ನಡೆಸಿ ನನ್ನ ಪರ ಜನತೆಯಿಂದ ಒಲವು ಕಂಡುಬಂದರೆ ಪಕ್ಷದಿಂದ ಸ್ಪರ್ಧಿಸಲು ಟಿಕೇಟ್ ನೀಡಲಿ ಎಂದು ನಾಯಕರಲ್ಲಿ ವಿನಂತಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ರಾಹುಲ್ಗಾಂಧಿರವರ ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಎಲ್ಲೆಡೆ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಇದೊಂದು ದಿಕ್ಸೂಚಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
+ There are no comments
Add yours