ಚಿತ್ರದುರ್ಗ: ಸಾವಿರಾರು ವರ್ಷಗಳ ಇತಿಹಾಸವಿರುವ ಸಂಗೀತಕ್ಕೆ ನೋವು, ದುಃಖ, ದುಮ್ಮಾನ ಮರೆಸುವ ಶಕ್ತಿಯಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಹೆಚ್.ಗುಡ್ಡದೇಶ್ವರಪ್ಪ ತಿಳಿಸಿದರು.
ಮದಕರಿ ಯುವಕ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಸಂಗೀತೋತ್ಸವವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮದಕರಿ ಯುವಕ ಸಂಘ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಸಂಗೀತವೆಂದರೆ ರೋಮಾಂಚನವಾಗುತ್ತದೆ. ಅರಪ್ಪ ನಾಗರೀಕತೆಯ ಕಾಲದಲ್ಲಿ ಸಂಶೋಧನೆ ಕೈಗೊಂಡಾಗ ಸಿಕ್ಕ ಕೆಲವು ಆಕೃತಿಗಳಲ್ಲಿ ಸಂಗೀತದ ಕುರುಹುಗಳಿದ್ದವು ಎನ್ನುವುದು ಪುರಾವೆಗಳಿಂದ ಗೊತ್ತಾಗಿದೆ. ಸ್ವರ, ರಾಗ, ತಾಳವನ್ನು ಸಂಗೀತದಲ್ಲಿ ಕಾಣಬಹುದು. ಸಂಗೀತ ಎನ್ನುವುದು ಒಂದು ಕಲೆ. ಜೀವನ ಶೈಲಿ. ಆಧುನಿಕ ಜಗತ್ತಿನಲ್ಲಿ ಎಲ್ಲರೂ ಒತ್ತಡಕ್ಕೆ ಒಳಗಾಗಿ ಬದುಕುತ್ತಿರುವ ಇಂದಿನ ದಿನಮಾನಗಳಲ್ಲಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬೇಕಾದರೆ ಸಂಗೀತದ ಮೊರೆ ಹೋಗಬೇಕು ಎಂದು ಹೇಳಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎ.ನಾಗರಾಜ್ ಮಾತನಾಡಿ ಸಂಗೀತಕ್ಕೆ ಬಹುದೊಡ್ಡ ಶಕ್ತಿಯಿದೆ. ಮನುಷ್ಯ ತನ್ನ ಸಂತೃಪ್ತಿಗಾಗಿ ಹಿಂದಿನಿಂದಲೂ ಕಲೆಯನ್ನು ವ್ಯಕ್ತಪಡಿಸುತ್ತ ಬರುತ್ತಿದ್ದಾನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇಲೆ ಪಶ್ರ್ಚಿಯನ್, ಇಸ್ಲಾಂಮಿಕ್ ಸಂಗೀತದ ಪ್ರಭಾವ ಬೀರುತ್ತಿದೆ. ಪುರಂದರದಾಸರು, ಕನಕದಾಸರು ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಎಲ್ಲರ ಮನಸ್ಸು, ಹೃದಯಕ್ಕೆ ಮುದ ನೀಡುವುದು ಸಂಗೀತ ಕಲೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಮನುಷ್ಯ ಆರೋಗ್ಯದಿಂದಿರಲು ಸಂಗೀತ ಮುಖ್ಯ. ಹೃದಯದ ಕಾಯಿಲೆಯುಳ್ಳವರು, ಮನೋ ರೋಗಿಗಳಿಗೆ ಸಂಗೀತ ಬೇಕು. ಮಾನಸಿಕ ಒತ್ತಡ ಕಡಿಮೆಯಾಗಲು ಸಂಗೀತ ಸಹಕಾರಿಯಾಗಲಿದೆ. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತಗಳಲ್ಲಿ ಸಂಗೀತದ ಹಲವಾರು ಪ್ರಕಾರಗಳಿವೆ ಎಂದು ತಿಳಿಸಿದರು.
ಮದಕರಿನಾಯಕ ವಂಶಸ್ಥರಾದ ರಾಜಾ ಮದಕರಿನಾಯಕ, ಸಂಗೀತದಲ್ಲಿ ಸಂಶೋಧನೆ ನಡೆಸಿ ಪಿ.ಹೆಚ್.ಡಿ.ಪದವಿ ಪಡೆದಿರುವ ಭವ್ಯರಾಣಿ, ಮದಕರಿ ಯುವಕ ಸಂಘದ ಅಧ್ಯಕ್ಷ ಸೋಮಶೇಖರ್ ವೇದಿಕೆಯಲ್ಲಿದ್ದರು.
ಗಂಗಾಧರ್ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ವಚನ ಸಂಗೀತ, ವಯೋಲಿನ್ ವಾದನ ನಡೆಯಿತು.
+ There are no comments
Add yours