ಪರಶುರಾಂಪುರ: ಪ್ರತಿಯೊಬ್ಬ ಮತದಾರ ತಮ್ಮ ಚುನಾವಣೆ ಐಡಿ ಕಾರ್ಡ್ ಗೆ ಆಧಾರ್ ನಂಬರನ್ನು ತಪ್ಪದೇ ಜೋಡಣೆ ಮಾಡಿಸಬೇಕು ಎಂದು ತಹಸೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ನಂ ೯೮ ಚಳ್ಳಕೆರೆ ವಿಧಾನ ಸಭಾಕ್ಷೇತ್ರ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ಇಆರ್ಓ ನೆಟ್ ತಂತ್ರಾಂಶ ಕುರಿತ ಸಾಮರ್ಥ್ಯ ವೃದ್ಧಿ ತರಬೇತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಪಿಕ್ ಕಾರ್ಡಿಗೆ ಆಧಾರ್ ನಂ ಜೋಡಣೆ ಮಾಡುವುದರಿಂದ ನಕಲಿ ಮತದಾನ ತಡೆಯಲು ಸುಲಭವಾಗುತ್ತದೆ. ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಚುನಾವಣಾ ಆಯೋಗದ ಹೊಸ ನೀತಿಯಂತೆ ಚುನಾವಣಾ ಪೂರ್ವದಲ್ಲೇ ಮತದಾರರ ಪಟ್ಟಿಯನ್ನು ಯಾವುದೇ ಲೋಪ ಆಗದಂತೆ ಪರಿಪೂರ್ಣವಾದ ಪಟ್ಟಿ ತಯಾರಿಸಿ ನೀಡಬೇಕು. ಭಾರತ ಸರಕಾರ ಚುನಾವಣಾ ಆಯೋಗದ ಹೊಸ ನೀತಿಯಂತೆ ಗರುಡ ಎನ್ನುವ ಹೊಸ ತಂತ್ರಾಂಶ ತರಬೇತಿಯಲ್ಲಿ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಭಾಗವಹಿಸಿ ಆಗಿರುವ ಲೋಪಗಳನ್ನು ಸರಿ ಪಡಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಗರುಡ ತರಬೇತಿ ಮಾಸ್ಟರ್ ಟ್ರೈನರ್ ಸತೀಶ್ ಮಾತನಾಡಿ, ಮತದಾರ ಚೀಟಿ (ಎಪಿಕ್ ಕಾರ್ಡ್) ಕಳೆದು ಹೋದರೆ ಅಂತವರು ಪೋಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಎಫ್ಐಆರ್ ಮಾಡಿಸಿ ಮರು ಚೀಟಿಯನ್ನು ಪಡೆಯಬೇಕು ಎಂದರು. ಈ ವೇಳೆ ಹೋಬಳಿಯ ೭೮ ಮಂದಿ ಮತಗಟ್ಟೆ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ತರಬೇತಿಯಲ್ಲಿ ಹಾಜರಿದ್ದರು.
ಸಂದರ್ಭದಲ್ಲಿ ತಾಲೂಕು ಚುನಾವಣಾ ಶಾಖೆಯ ಪ್ರಕಾಶ್, ಕಾಲೇಜು ಪ್ರಾಚಾರ್ಯ ಧನಂಜಯ, ನಾಡಕಚೇರಿ ಪ್ರಭಾರ ಉಪ ತಹಸೀಲ್ದಾರ್ ಮೋಹನ್ಕುಮಾರ, ಗ್ರಾಮ ಲೆಕ್ಕಾಧಿಕಾರಿಗಳಾದ ಕಾಡೇಶ್, ದೇವರಾಜನಾಯ್ಕ್, ಹಿರಿಯಪ್ಪ ಮತ್ತಿತರು ಹಾಗೂ ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಸಭೆಯಲ್ಲಿ ಹಾಜರಿದ್ದರು.
+ There are no comments
Add yours