ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.14:
ಸ್ವಂತ ಉದ್ಯೋಗ ಪ್ರಾರಂಭಿಸುವವರು ಸ್ವಯಂ ಉದ್ಯೋಗಿಗಳಾಗುವುದರ ಜೊತೆಗೆ ಇನ್ನೂ 4-5 ಜನಕ್ಕೆ ಉದ್ಯೋಗ ಕೊಡಬಹುದಾಗಿದ್ದು, ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸುವಲ್ಲಿ ಸಹಕರಿಸಬಹುದಾಗಿದೆ. ಹಾಗಾಗಿ ಸರ್ಕಾರ ಸ್ವಂತ ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ದಾವಣಗೆರೆ ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ.ಪಾಟೀಲ್ ಹೇಳಿದರು.
ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಸೋಮವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಕೌಶಲ್ಯಾ ಮಿಷನ್ ಹಾಗೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ ಮುಖ್ಯಮಂತ್ರಿ ಕೌಶಲ್ಯಾ ಕರ್ನಾಟಕ ಯೋಜನೆಯಡಿ ಕೌಶಲ್ಯಾ ತರಬೇತಿ ಪಡೆದ ಫಲಾನುಭವಿಗಳಿಗೆ “ಮೂರು ದಿನಗಳ ಉದ್ಯಮಶೀಲತಾ ಪ್ರೇರಣ ಕಾರ್ಯಕ್ರಮ”ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಇಂದು ಸರ್ಕಾರ ಸ್ವಂತ ಉದ್ಯೋಗಕ್ಕೆ ಹೆಚ್ಚು ಪ್ರೋತ್ಸಾಹ
ನೀಡುತ್ತಿದೆ ಎಂದು ಹೇಳಿದರು.
“ಉದ್ಯಮಶೀಲತೆ ಅನ್ನುವುದು ಬರೀ ಹುಟ್ಟಿನಿಂದ ಮಾತ್ರ ಬರಬೇಕಾಗಿಲ್ಲ. ಅದನ್ನು ತರಬೇತಿಯ
ಮೂಲಕ ನಾವು ಜನರಲ್ಲಿ ತುಂಬಲಿಕ್ಕೆ ಸಾಧ್ಯವಿದೆ.” ಎನ್ನುವ ತತ್ವದಡಿ ಸಿಡಾಕ್ ಸಂಸ್ಥೆಯು ಕೆಲಸ
ನಿರ್ವಹಿಸುತ್ತಿದೆ ಎಂದರು.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಕೆ.ಬಿ.ಅರುಣ್ ಕುಮಾರ್
ಮಾತನಾಡಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಮತು ಜೀವನೋಪಾಯದ ಮಹತ್ವದ ಬಗ್ಗೆ
ಮತ್ತು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಸಿಗುವ ಯೋಜನೆಯ ಮತ್ತು ತರಬೇತಿ ಬಗ್ಗೆ ಹಾಗೂ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯುವಲ್ಲಿ ಎದುರಿಸಬೇಕಾದ ವಿವಿಧ ಹಂತಗಳ ಬಗ್ಗೆ ಮಾಹಿತಿ ಹಾಗೂ ಸಲಹೆಗಳನ್ನು ನೀಡುವ ಮೂಲಕ ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಾಯಕ ನಿರ್ದೇಶಕ ರವಿ ಮಾತನಾಡಿ, ಯುವ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಯನ್ನು ರೂಪಿಸಿದೆ. ಆ ಯೋಜನೆಯನ್ನು ಈ ರೀತಿಯ ಕಾರ್ಯಕ್ರಮದ ಮೂಲಕ ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕೆ.ಪಿ.ಕಾಟೇಗೌಡ, ಉಮೇಶ್ ರಾಥೋಡ್, ಹಿರಿಯೂರಿನ ಜಿಪಿಟಿ ಕಾಲೇಜಿನ ಮಂಜುನಾಥ್, ಸಂಪನ್ಮೂಲ ವ್ಯಕ್ತಿ ದಾವಣಗೆರೆ ಜನ ಶಿಕ್ಷಣ ಸಂಸ್ಥಾನ ನಿವೃತ್ತ ನಿರ್ದೇಶಕ ಬಿ.ಮುಕುಂದಪ್ಪ , ಸಿಡಾಕ್ ತರಬೇತುದಾರ ಜಿ.ಬಿ.ಬಸವರಾಜ್, ಪಿ.ವಿಜಯಕುಮಾರ್ ಇದ್ದರು.
[t4b-ticker]
+ There are no comments
Add yours