*ಚಿತ್ರದುರ್ಗ: ವಿಧಾನಸಭೆ ಚುನಾವಣೆ ವೇಳೆ ಪ್ರಮುಖ ತೀರ್ಮಾನ ಕೈಗೊಳ್ಳುವ ಚುನಾವಣೆಗೆ ವರ್ಷಕ್ಕಿಂತ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿಯುವ ಚಿಂತನೆಯಲ್ಲಿದ್ದರೆ, ಕಾಂಗ್ರೆಸ್ ಪಕ್ಷ ಈಗಾಗಲೇ ರಾಜಕೀಯ ತಂತ್ರಗಾರಿಕೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.
ಈಗಾಗಲೇ ಹಲವು ಸಮಿತಿ ರಚಿಸಿರುವ ಎಐಸಿಸಿ, ದಿಡೀರನೆ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದ್ದು, ಜಾತಿ, ಪ್ರದೇಶ, ಹಿರಿತನ, ಪಕ್ಷ ನಿಷ್ಠೆ ಆಧಾರದಡಿ 28ಪ್ರಮುಖ ನಾಯಕರಿಗೆ ಸಮಿತಿಯಲ್ಲಿ ಸ್ಥಾನ ಕಲ್ಪಿಸಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಂಚಾಲಕರಾಗಿರುವ ಸಮಿತಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ ಸೇರಿದಂತೆ
ಒಟ್ಟು 28 ಮಂದಿ ಸದಸ್ಯರಾಗಿದ್ದು, ವಿಶೇಷ ಆಹ್ವಾನಿತರಾಗಿ ಮಧ್ಯ ಕರ್ನಾಟಕದಿಂದ ಎಚ್.ಆಂಜನೇಯ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವುದು ಗಮನಸೆಳೆದಿದೆ. ಇವರ ಜೊತೆಗೆ ರಮನಾಥ್ ರೈ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಅವರು ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ವಿಧಾನಸಭೆ ಕ್ಷೇತ್ರವಾರು ಕಾರ್ಯಕ್ರಮ ಸಂಘಟನೆ, ಪ್ರಚಾರಕ ಪಟ್ಟಿ ಹಾಗೂ ರಾಜಕೀಯ ವ್ಯವಹಾರಗಳ ನೀತಿ ನಿರೂಪಣೆ ಮಾಡುವಂತಹ ಉನ್ನತ ಸಮಿತಿಯಾಗಿದ್ದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸಲು ಅಗತ್ಯ ತಂತ್ರಗಾರಿಕೆ ಸೇರಿ ವಿವಿಧ ವಿಷಯಗಳ ಕುರಿತು ಸಮಿತಿಯಲ್ಲಿ ಚರ್ಚೆ ಮೂಲಕ ಅನುಷ್ಠಾನಗೊಳ್ಳಲಿದೆ.
ಇಂತಹ ಉನ್ನತ ಸಮಿತಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಸ್ಥಾನ ಗಿಟ್ಟಿಸಿಕೊಂಡಿರುವುದು ಗಮನಾರ್ಹವಾಗಿದೆ.
ಕಡುಬಡತನದಲ್ಲಿ ಜನಿಸಿದ ಎಚ್.ಆಂಜನೇಯ, ಇಂದಿರಾಗಾಂಧಿ ದಕ್ಷ ಆಡಳಿತ, ಜನಪರ ಯೋಜನೆ, ಬಡವರ ಪರ ಕಾಳಜಿಗೆ ಆಕರ್ಷಿತರಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡು, ಬಳಿಕ ಸೇವಾದಳ, ನಗರಸಭೆ ಸದಸ್ಯ, ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ,
ಕೆಪಿಸಿಸಿಯಲ್ಲಿ ಹಲವು ಹುದ್ದೆಗಳು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಐದು ವರ್ಷ ಸಮಾಜ ಕಲ್ಯಾಣ ಸಚಿವರಾಗಿ ರಾಜ್ಯದ ವಿವಿಧೆಡೆ ಬೃಹತ್ ಮಟ್ಟದ ಹಾಸ್ಟೆಲ್
ನಿರ್ಮಾಣ, ವಿದ್ಯಾ ಸಿರಿ, ಗುಣಮಟ್ಟದ ಆಹಾರ, ಕೊಠಡಿ, ಎಲ್ಲ ವರ್ಗದ ಜನರಿಗೆ ಅನುಕೂಲ ಆಗುವ ಯೋಜನೆಗಳ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎಸ್ಸಿ, ಎಸ್ಟಿ ಅನುದಾನ ವಾಪಸ್ಸು ಹೋಗದಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಯ್ದೆ
ರೂಪಿಸಿ, ವಿಧಾನಸಭೆಯಲ್ಲಿ ಮಂಡಿಸಿ ಸರ್ವರ ಒಪ್ಪಿಗೆ ಪಡೆದಿದ್ದು, ಗುತ್ತಿಗೆಯಲ್ಲಿ ಮೀಸಲು ಸೌಲಭ್ಯ ಹೀಗೆ ಅನೇಕ ವಿಶೇಷತೆಗಳ ಮೂಲಕ ರಾಜ್ಯದಲ್ಲಿ ಜನಪ್ರಿಯತೆ
ಗಳಿಸಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ವೇಳೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಹಾಗೂ ಆಡಳಿತ ಪಕ್ಷದ ವಿರುದ್ಧ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.
ಸಂಘಟನೆಯಲ್ಲಿ ಹೆಚ್ಚು ಅನುಭವ ಹೊಂದಿರುವ ಎಚ್.ಆಂಜನೇಯ ಎಡಗೈ ಸಮುದಾಯದ ರಾಜ್ಯದ
ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎಐಸಿಸಿ, ಆಂಜನೇಯ ಅವರ ಪಕ್ಷ ನಿಷ್ಠೆ, ಜನಪ್ರಿಯತೆ, ಆಡಳಿತ ದಕ್ಷತೆ, ಸರ್ವ ಸಮುದಾಯದ ಪ್ರೀತಿ ಗಳಿಸಿರುವುದನ್ನು ಗಮನಿಸಿ ಕೆಪಿಸಿಸಿ ಉನ್ನತ
ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ ಎನ್ನಲಾಗುತ್ತಿದೆ.
+ There are no comments
Add yours