ಚಿತ್ರದುರ್ಗ : ಸಕಲ ಜೀವರಾಶಿಗಳಿಗೂ ಆಶ್ರಯ ಕೊಡುತ್ತಿರುವ ಭೂಮಿ ಚನ್ನಾಗಿರಬೇಕಾದರೆ ಮರ-ಗಿಡಗಳನ್ನು ಕಡಿಯದಂತೆ ಪರಿಸರವನ್ನು ರಕ್ಷಿಸಬೇಕೆಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಸೋಮವಾರ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಶೋಕ ತನ್ನ ಸಾಮ್ರಾಜ್ಯದಲ್ಲಿ ಸಾಲ ಮರಗಳನ್ನು ನೆಡುವುದಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಅದೇ ರೀತಿ ಕುಡಿಯುವ ನೀರಿಗೂ ತೊಂದರೆಯಾಗಬಾರದೆಂಬ ಪರಿಕಲ್ಪನೆಯಿತ್ತು. ಇಡಿ ಜಗತ್ತು ಹಸಿರೀಕರಣವಾಗಬೇಕು. ಹಸಿರು, ಪ್ರಕೃತಿಯನ್ನು ದೂರವಿಟ್ಟು ಯಾರು ಬದುಕಲು ಆಗುವುದಿಲ್ಲ. ಒಂದು ಗಿಡ ನಾಶಪಡಿಸಿದರೆ ಒಂದು ಮಗುವನ್ನು ಕೊಂದಂತೆ. ಸೂರ್ಯ, ಭೂಮಿ ಸೇರಿದಾಗ ಮಾತ್ರ ಪ್ರತಿಯೊಂದು ಜೀವಿಯು ಬದುಕಲು ಸಾಧ್ಯ. ಬದುಕಿನ ಮೂಲ ಎಂದರೆ ಗಿಡ-ಮರ. ಮರ ನಂಬಿ ಯಾರು ಬೇಕಾದರು ಬದುಕಬಹುದು ಎಂದು ಪರಿಸರಕ್ಕಿರುವ ಮಹತ್ವ ತಿಳಿಸಿದರು.
ಹಿಂದಿನ ಕಾಲದ ಜನ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳುತ್ತಿದ್ದರು. ಇತ್ತೀಚೆಗಂತು ಪರಿಸರ ನಾಶವಾಗುತ್ತಿದೆ. ಪ್ರಕೃತಿಯನ್ನು ಅಣು ಅಣುವಾಗಿ ಕೊಲ್ಲಲಾಗುತ್ತಿದೆ. ಫ್ರಾನ್ಸ್, ಅಮೇರಿಕಾದಲ್ಲಿ ಹಸಿರೀಕರಣ ಸಮೃದ್ದಿಯಾಗಿದೆ. ನಮ್ಮ ದೇಶದಲ್ಲಿ ವಿಲಾಸಿ ಜೀವನಕ್ಕಾಗಿ ಗಿಡ-ಮರಗಳನ್ನು ಕಡಿದು ಕಾಡನ್ನು ನಾಶಪಡಿಸಲಾಗುತ್ತಿದೆ. ಗಣಿಗಾರಿಕೆ ಜೀವ ವಿರೋಧಿ ಎನ್ನುವುದು ಎಲ್ಲರಿಗೂ ಗೊತ್ತಿದೆಯಾದರೂ ನಿಲ್ಲಿಸುವ ಪ್ರಯತ್ನವಾಗುತ್ತಿಲ್ಲ. ಮರಗಳನ್ನು ಕಡಿದರೆ ತಾಪಮಾನ ಜಾಸ್ತಿಯಾಗುತ್ತದೆ. ಮರ ಪರೋಪಕಾರಿ, ಪವಿತ್ರ, ಶ್ರೇಷ್ಠವಾದುದು. ಗಿಡ-ಮರಗಳ ಬಗ್ಗೆ ಎಲ್ಲರಲ್ಲಿಯೂ ಮಮಕಾರವಿರಬೇಕು. ಪ್ಲಾಸ್ಟಿಕ್ ಬಳಸುವುದರಿಂದಲೂ ಪರಿಸರಕ್ಕೆ ಹೆಚ್ಚು ಧಕ್ಕೆಯಾಗುತ್ತದೆ ಎಂದು ಹೇಳಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ ಪರಿಸರದಲ್ಲಿ ಸೂಕ್ಷ್ಮ, ನವಿರಾದ ನಿಯಮಗಳಿವೆ. ತಪ್ಪದೆ ಎಲ್ಲರೂ ಪಾಲಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸಬಹುದು. ಮಾನವ ಪರಿಸರದ ಒಂದು ಭಾಗ. ಪ್ಲಾಸ್ಟಿಕ್ ಬಳಸುವವರು ಆತ್ಮಹತ್ಯೆ ಮಾಡಿಕೊಂಡಂತೆ. ಏಕೆಂದರೆ ಒಮ್ಮೆ ಬಳಸಿದ ಪ್ಲಾಸ್ಟಿಕ್ನ್ನು ಹೊರಗೆ ಎಸೆದರೆ ಅದು ಮಣ್ಣಿನಲ್ಲಿ ಕೊಳೆಯುವುದಿಲ್ಲ. ರಾಸಾಯನಿಕ ಉತ್ಪತ್ತಿಯಾಗುತ್ತದೆ. ಆರು ತಿಂಗಳುಗಳ ಕಾಲ ಒಂದೆ ಪ್ಲಾಸ್ಟಿಕ್ ಬಾಟಲ್ನ್ನು ನೀರು ಕುಡಿಯಲು ಬಳಸಿದರೆ ಬ್ಲಡ್ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆಗಳಿರುತ್ತದೆ ಎಂದು ಪ್ಲಾಸ್ಟಿಕ್ನಿಂದಾಗುವ ಅಪಾಯ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿದರು.
ಜೀವನಶೈಲಿ, ಆಲೋಚನೆ ವಿಧಾನ ಬದಲಾಗಬೇಕು. ಮರುಬಳಕೆಯಾಗದ ಪ್ಲಾಸ್ಟಿಕ್ ಬಳಿಸುವುದರಿಂದಲೂ ಪರಿಸರ ಹಾಳಾಗುತ್ತದೆ ಎಂದರು.
ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರಾದ ಶ್ರೀಮತಿ ಸುಜಾತ ಅಧ್ಯಕ್ಷತೆ ವಹಿಸಿದ್ದರು.
+ There are no comments
Add yours