ಚಿತ್ರದುರ್ಗ, ಸೆ.27: ಹಿರಿಯ ನಾಗರೀಕರು ವಯಸ್ಸಾದ ಮೇಲೆ ಮಕ್ಕಳಾಗುತ್ತಾರೆ. ಆದರೆ ಅವರಲ್ಲಿರುವ ಅನುಭವ ಅಘಾಧವಾದದ್ದು. ಅವರುಗಳು ನೀಡುವ ಸಲಹೆಗಳನ್ನು ನಮ್ಮಗಳ ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ಕಾಣಲು ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವಹಿರಿಯ ನಾಗರಿಕರ ದಿನಾಚರಣೆ-2022ರ ಅಂಗವಾಗಿ ಹಿರಿಯ ನಾಗರಿಕರ ಸಪ್ತಾಹ ಕಾರ್ಯಕ್ರಮದಡಿ ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007 ಹಾಗೂ ಮಾದಕ ವ್ಯಸನ ಮುಕ್ತ, ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮನೆಯಲ್ಲೂ ಹಿರಿಯ ನಾಗರೀಕರಿದ್ದು, ಅವರಿಗೆ ಕಾಳಜಿ ವಹಿಸಿ ಪ್ರೀತಿ ನೀಡಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇಂದು ನಾವುಗಳು ಅದಿ ವಯಸ್ಕರಿರಬಹುದು ಆದರೆ ಮುಂದೊಂದು ದಿನ ನಮಗೂ ವಯಸ್ಸಾಗುತ್ತದೆ. ನಾವು ಇಂದು ನಮ್ಮ ಹಿರಿಕರನ್ನು ಕಂಡ ರೀತಿಯಲ್ಲೇ ನಮ್ಮ ಮಕ್ಕಳು ಮುಂದೆ ನಮ್ಮನ್ನು ಕಾಣುತ್ತಾರೆ. ಆದ್ದರಿಂದ ಹಿರಿಯರಲ್ಲಿ ಪ್ರೀತಿ ತುಂಬಿ ಕಾಣಬೇಕು ಎಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಪ್ರಸ್ತುತ ಆಧುನಿಕ ಜೀವನದಲ್ಲಿ ಮಾನವ ಆರ್ಥಿಕವಾಗಿ ಸಬಲರಾಗಬೇಕು ಎಂಬ ನಿಟ್ಟಿನಲ್ಲಿ ಅವಿಭಕ್ತ ಕುಟುಂಬಗಳಿಂದ ಹೊರಬರುತ್ತಿರುವುದರಿಂದ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಇದರಿಂದ ಹಿರಿಯ ನಾಗರೀಕರು ಒಂಟಿತನ, ಆರೋಗ್ಯ ಸಮಸ್ಯೆ, ಪೋಷಣೆಯ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಭಾವನಾತ್ಮಕ ಸ್ಪಂದನೆ ಇಲ್ಲದೆ ನಲುಗಿ ಹೋಗಿದ್ದಾರೆ. ಸರ್ಕಾರ ಹಿರಿಯ ನಾಗರೀಕರಿಗೆ ಗೌರವ ಕೊಟ್ಟು ಅವರ ಸೇವೆ ಸಮಾಜಕ್ಕೆ ಅವಶ್ಯಕತೆ ಇದೆ ಎಂಬ ನಿಟ್ಟಿನಲ್ಲಿ 2007 ರಲ್ಲಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಈ ಕಾನೂನು ಪ್ರಕಾರ ನಿರ್ವಹಣಾ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಕಾಯ್ದೆ ಅನುಕೂಲ ಆಗಲಿದೆ ಎಂದು ವಿವರಿಸಿದರು.
ಅ.೧ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಸೆ.20 ರಿಂದ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು, ಆರೋಗ್ಯ ಮೇಳ, ಕ್ರೀಡಾಕೂಟ, ಸಂಗೀತಾ ಕಾರ್ಯಕ್ರಮ, ಯುವ ಸಮೂಹದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹಿರಿಯರಲ್ಲೂ ಉತ್ಸಾಹ ತುಂಬಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಹೆಚ್.ನಾಗರಾಜ್ ವಹಿಸಿದ್ದು, ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ಉಪಾಧ್ಯಕ್ಷ ಜೆ.ಸಿ.ದಯಾನಂದ, ಕಲ್ಲಪ್ಪ ಭಾಗವಹಿಸಿದ್ದರು.
[t4b-ticker]
+ There are no comments
Add yours