ಚಿತ್ರದುರ್ಗ, ನ.28: ಭಾರತೀಯ ಜನತಾ ಪಕ್ಷ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಜನತೆಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ನಗರದ ಹೊಳಲ್ಕೆರೆ ರಸ್ತೆಯ ಹಳ್ಳದ ಏರಿ ಜನರಿಗೆ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಕ್ಕಪತ್ರ ವಿತರಿಸಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ನಗರದ ಬಹುತೇಕ ಜನರು ತಮ್ಮ ಮನೆಗಳಿಗೆ ಹಕ್ಕುಪತ್ರ ಇಲ್ಲದೆ ಪರಿತಪಿಸುತ್ತಿದ್ದು, ಪ್ರತಿ ಚುನಾವಣೆಯಲ್ಲೂ ಬೇಡಿಕೆ ಈಡುತ್ತಿದ್ದರು. ಇದನ್ನು ಬಿಜೆಪಿ ಮನಗಂಡು ಚುನಾವಣೆಯಲ್ಲಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿತ್ತು, ಅದರಂತೆ ಇಂದು ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತಿದೆ. ಇದರಲ್ಲಿ ಯಾರದಾದರೂ ಹೆಸರು ಬಿಟ್ಟಿದ್ದರೆ ಪುನಃ ಸೇರಿಸಬಹುದು ಎಂದು ತಿಳಿಸಿದರು.
ಮೊದಲು ಕುಡಿಯುವ ನೀರಿಗೆ ಬೀದಿ ಬೀದಿ ಅಲೆಯಬೇಕೆಂದು ಬೆದರಿ ಚಿತ್ರದುರ್ಗಕ್ಕೆ ಸೊಸೆಯಾಗಿ ಬರಲು ಹಿಂದೇಟು ಹಾಕುತ್ತಿದ್ದ ಹೆಣ್ಣು ಮಕ್ಕಳಿಗೆ ಇಂದು ನಿರಾಳ ಮಾಡಿದ್ದು, ನಗರದ ಎಲ್ಲಾ ಬಡಾವಣೆಗಳ ಮನೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಪ್ರತಿ ಬಡಾವಣೆಯಲ್ಲೂ ಸಿಸಿ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಕೊರೊನಾ ಅಂತಹ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವ ಮೂಲಕ ಜನರ ಜೀವವನ್ನು ಉಳಿಸಿದ್ದಾರೆ. ಮೊದಲು ಲಸಿಕೆ ತಗೋಬೇಡಿ ಎಂದು ಜನರಿಗೆ ತಪ್ಪು ಮಾಹಿತಿ ನೀಡಿದವರೆ ನಂತರ ಲಸಿಕೆ ಪಡೆಯಲು ಸಾಲಿನಲ್ಲಿ ನಿಂತರು. ಇಂತಹ ಜನರ ಸಹವಾಸ ನಮಗೆ ಬೇಡ ಎಂದು ಹೇಳಿದ ಅವರು, ೩೦ ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಪಕ್ಕದ ದೇಶಗಳ ಜನರನ್ನು ಯಾರಿಂದಲೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ೧೩೫ ಕೋಟಿ ಜನರನ್ನು ನಮ್ಮ ದೇಶದ ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ ಇದು ನಮ್ಮ ಹೆಮ್ಮೆ ವಿಷಯ. ಬೇರೆ ದೇಶದಲ್ಲಿ ಆಹಾರ ಇಲ್ಲದೆ ಹಸಿವಿನಿಂದ ಸಾಯುತ್ತಿದ್ದಾರೆ. ಆದರೆ ಮೋದಿ ದೇಶದಲ್ಲಿ ಯಾರೂ ಕೂಡ ಹಸಿವಿಂದ ಸಾಯಬಾರದು ಎಂದು ಹೇಳಿ ಎಲ್ಲರಿಗೂ ಉಚಿತ ಅಕ್ಕಿ ನೀಡುತ್ತಿದ್ದಾರೆ ಇಂತಹ ಪ್ರಧಾನಿ ನಮಗೆ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯರಾದ ಬಾಲಮ್ಮ, ಸುರೇಶ್, ವೆಂಕಟೇಶ್, ನವೀನ್ ಸೇರಿದಂತೆ ಇತರರು ಹಾಜರಿದ್ದರು.
[t4b-ticker]
+ There are no comments
Add yours